ಬಸ್ ಸಮಸ್ಯೆ: ತರಗತಿಗೆ ಹಾಜರಾಗುವುದೇ ದೊಡ್ಡ ಸವಾಲು

KannadaprabhaNewsNetwork |  
Published : Jul 04, 2026, 02:15 AM IST
ಬಸ್ | Kannada Prabha

ಸಾರಾಂಶ

ಹೊನ್ನಾವರ ತಾಲೂಕಿನ ಗೇರುಸೊಪ್ಪ ಮಾರ್ಗದಿಂದ ಹೊನ್ನಾವರಕ್ಕೆ ಬರುವ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಬೆಳಗ್ಗೆ 9 ಗಂಟೆಗೆ ನಡೆಯುವ ತರಗತಿಗಳಿಗೆ ಹಾಜರಾಗುವುದೇ ದೊಡ್ಡ ಸವಾಲಾಗಿದೆ. ಜನರು ಕೂಡ ಎಲ್ಲ ಕೆಲಸ ಕಾರ್ಯಗಳಿಗೆ ಹೊನ್ನಾವರವನ್ನೇ ಅವಲಂಬಿಸಿದ್ದಾರೆ.

ಪ್ರಸಾದ್ ನಗರೆ

ಹೊನ್ನಾವರ:ತಾಲೂಕಿನ ಗೇರುಸೊಪ್ಪ ಮಾರ್ಗದಿಂದ ಹೊನ್ನಾವರಕ್ಕೆ ಬರುವ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಬೆಳಗ್ಗೆ 9 ಗಂಟೆಗೆ ನಡೆಯುವ ತರಗತಿಗಳಿಗೆ ಹಾಜರಾಗುವುದೇ ದೊಡ್ಡ ಸವಾಲಾಗಿದೆ. ಜನರು ಕೂಡ ಎಲ್ಲ ಕೆಲಸ ಕಾರ್ಯಗಳಿಗೆ ಹೊನ್ನಾವರವನ್ನೇ ಅವಲಂಬಿಸಿದ್ದಾರೆ.

ಬೆಳಗ್ಗೆ 7.30 ರಿಂದ 7.45ರ ವರೆಗೆ ಬರುವ ಬಸ್ ನಿಲ್ಲಿಸುತ್ತಾರೆಯೇ ವಿನಃ: ನಂತರದ ಬಸ್ ನಿಲ್ಲಿಸುವುದಿಲ್ಲ. ಮುಖ್ಯವಾಗಿ ಹಡಿನಬಾಳ, ಕವಲಕ್ಕಿ, ಹುಲಿಯಪ್ಪನಕಟ್ಟೆ, ಬಾಳೆಗದ್ದೆ, ಭಾಸ್ಕೇರಿ, ಆರೊಳ್ಳಿ, ಮುಗ್ವಾ ಚರ್ಚ್ ಕ್ರಾಸ್, ಮೂರುಕಟ್ಟೆ ಈ ನಿಲ್ದಾಣಗಳಲ್ಲಿ ಬೆಳಗ್ಗಿನ ತರಗತಿಗೆ ಹೋಗಲು ಬಂದು ನಿಲ್ಲುವ ವಿದ್ಯಾರ್ಥಿಗಳು ನಿಂತಲ್ಲೆ ನಿಲ್ಲಬೇಕು. ಯಾಕೆಂದರೆ ಬಸ್ ರಶ್ ಆಗಿ ಬರುತ್ತದೆ, ನಿಗದಿತ ಸ್ಥಳದಲ್ಲಿ ನಿಲ್ಲಿಸದೆ ಮುಂದೆ ಸಾಗುತ್ತದೆ.

ಹೊನ್ನಾವರದ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಶಾಲೆ, ಪದವಿಪೂರ್ವ, ಐಟಿಐ, ಪದವಿ ಹಾಗೂ ಸ್ನಾತಕ ಪದವಿ ಅಭ್ಯಸಿಸುವ ವಿದ್ಯಾರ್ಥಿಗಳು ಹಾಗೂ ನೌಕರರು ಎಲ್ಲ ಜನರಿಗೂ ಬಸ್ ಸರಿಯಾಗಿ ನಿಲ್ಲಿಸದೇ ಇರುವುದು ದೊಡ್ಡ ತಲೆನೋವಾಗಿದೆ. ಈ ಸಮಸ್ಯೆ ಈಗಿನದ್ದಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಒಂದು ವಾರ ಸರಿಯಾದಂತೆ ಕಾಣುತ್ತದೆ. ಬಳಿಕ ಯಥಾಪ್ರಕಾರ ಸಮಸ್ಯೆ ಮುಂದುವರಿಯುತ್ತದೆ. ಹೊನ್ನಾವರ ಬಸ್ ನಿಲ್ದಾಣದಿಂದ ಗೇರುಸೊಪ್ಪಾ ಮಾರ್ಗಕ್ಕೆ ಬೆಳಗ್ಗಿನ ಟ್ರಿಪ್ ನಲ್ಲಿ ತೆರಳುವ ಬಸ್ ಗಳು ವಾಪಸ್ ಬರುವಾಗ ವಿದ್ಯಾರ್ಥಿಗಳು ಹತ್ತಬೇಕಾಗುತ್ತದೆ. ಈ ಬಸ್ ಗಳು ಬರಲು 9 ಗಂಟೆ ಕಳೆದಿರುತ್ತದೆ.

ಬೈಕ್ , ರಿಕ್ಷಾಕ್ಕೆ ಕೈ ಮಾಡಿ ಹೋಗಬೇಕಾದ ಪರಿಸ್ಥಿತಿ

ಇನ್ನು ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಸರಿಯಾದ ಸಮಯಕ್ಕೆ ತೆರಳಬೇಕು ಎಂಬ ಉದ್ದೇಶಕ್ಕೆ ಹೈವೆಯಲ್ಲಿ ಬರುವ ಬೈಕ್ ಹಾಗೂ ರಿಕ್ಷಾಗಳಿಗೆ ಕೈ ಮಾಡಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿದೆ. ಆರಂಭದಲ್ಲಿಯೇ ಬಸ್ ರಶ್ ಆಗಿ ಬರುತ್ತವೆ. ಅಳ್ಳಂಕಿ ಹಾಗೂ ಖರ್ವಾ ಕ್ರಾಸ್ ನಂತರ ಬರುವ ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ. ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದರೂ ಸಹ ಇದರಿಂದ ನಮ್ಮ ಭಾಗದ ಹೆಚ್ಚಿನ ಮಕ್ಕಳಿಗೆ ಮಾತ್ರ ಪ್ರಯೋಜನ ಸಿಗುತ್ತಿಲ್ಲ. ಮಕ್ಕಳು ಹಣ ಕೊಟ್ಟು ಟೆಂಪೋ, ರಿಕ್ಷಾಗಳಲ್ಲಿ, ಹೋಗಬೇಕಾದ ಅನಿವಾರ್ಯತೆ ಇದೆ.

ಹೊನ್ನಾವರ-ಹಡಿನಬಾಳ ಬಸ್ ಆರಂಭಿಸಲಿ

ಹೊನ್ನಾವರದಿಂದ ಹಡಿನಬಾಳವರೆಗೆ ಅರ್ಧ ಗಂಟೆಗೊಂದು ಬಸ್ ಬಿಟ್ಟರೆ ಬಹುತೇಕ ಈ ಸಮಸ್ಯೆ ಕಡಿಮೆಯಾಗಲಿದೆ. ಬೆಳಗ್ಗೆ 7ರಿಂದ ಈ ಬಸ್ ಹೊನ್ನಾವರ ಬಸ್ ನಿಲ್ದಾಣದಿಂದ ಹೊರಟರೆ ಹೆಚ್ಚಿನ ಅನುಕೂಲವಾಗುತ್ತದೆ. ಪ್ರತಿ ಅರ್ಧ ಗಂಟೆಗೆ ಒಂದರಂತೆ ಬಿಟ್ಟರೆ ರಶ್ ಕಡಿಮೆ ಆಗುತ್ತದೆ. ಜೊತೆಗೆ ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವಾಗುತ್ತದೆ. ಹಡಿನಬಾಳ ನಂತರದ ಬಸ್ ನಿಲ್ದಾಣದಲ್ಲಿ ನಿಲ್ಲುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎನ್ನುತ್ತಾರೆ ಪ್ರತಿದಿನ ಸಂಚರಿಸುವ ವಿದ್ಯಾರ್ಥಿಗಳು.

ಪ್ರತಿದಿನ ಶಾಲಾ-ಕಾಲೇಜಿಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ನಾವು ಕಾಲೇಜಿಗೆ ಹೋಗುವಷ್ಟರಲ್ಲಿ ವೇಳಾಪಟ್ಟಿಯಂತೆ ತರಗತಿ ಆರಂಭವಾಗಿರುತ್ತದೆ. ಅಲ್ಲದೆ ಇದೀಗ ಮಳೆಗಾಲ ಆದ್ದರಿಂದ ಬಸ್ ರಶ್ ಇದ್ದಾಗ ಹತ್ತಲು ಕಷ್ಟವಾಗುತ್ತದೆ. ಬಾಗಿಲಲ್ಲಿ ನೇತಾಡಿಕೊಂಡು ಹೋಗಬೇಕಾಗುತ್ತದೆ. ಬಸ್‌ಗಳು ಬೆಳಗ್ಗಿನ ಅವಧಿಯಲ್ಲಿ ಎಲ್ಲಾ ಬಸ್ ನಿಲ್ದಾಣದಲ್ಲಿ ನಿಲ್ಲಿಸುವಂತಾಗಬೇಕು. ಹೊನ್ನಾವರ-ಹಡಿನಬಾಳ ಬಸ್ ಪ್ರತಿ ಅರ್ಧಗಂಟೆಗೆ ಒಮ್ಮೆ ಬಿಟ್ಟರೆ ಒಳ್ಳೆಯದು ಎಂದು ಕಾಲೇಜು ವಿದ್ಯಾರ್ಥಿ ವಿನಾಯಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಕೊಟ್ಟ ಮುಂಗಾರು; ಗುರ್ಜಿ ಆಟ, ಪ್ರಾರ್ಥನೆ
ಸೌರ ಶಕ್ತಿ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ: ಶಾಸಕ ಭೀಮಣ್ಣ