ರಾಮನಗರ: ಬೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮಸ್ಥಳ ಬಾನಂದೂರಿನಿಂದ ಶ್ರೀ ಕ್ಷೇತ್ರ ಆದಿಚುಂಚನಗರಿಗೆ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪನವರು ಆದಿಚುಂಚನಗಿರಿಗೆ 127 ರುಪಾಯಿ ಚೀಟಿ ಪಡೆಯುವ ಮೂಲಕ ಚಾಲನೆ ನೀಡಿ, ಬಾನಂದೂರು ಗ್ರಾಮದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮೊದಲ ಟಿಕೆಟ್ ಪಡೆದು ಪ್ರಯಾಣ ಬೆಳೆಸಿ ಶುಭ ಹಾರೈಸಿದರು.
ಈ ಭಾಗದ ಜನರು ಬೆಂಗಳೂರು ಅಥವಾ ಮಂಡ್ಯ ಮತ್ತಿತರ ಸ್ಥಳಗಳಿಂದ ಸುತ್ತಾಡಿ ಶ್ರೀಕ್ಷೇತ್ರಕ್ಕೆ ತೆರಳಬೇಕಾಗಿತ್ತು. ಆದರೆ, ಗ್ರಾಮದ ಗಂಗಾಧರಯ್ಯ ಅವರ ಪರಿಶ್ರಮದಿಂದ ನೇರ ಬಸ್ ಸೌಲಭ್ಯ ಸಿಕ್ಕಿದೆ. ಈ ಬಸ್ ಸಂಚಾರ ಶಾಶ್ವತವಾಗಿ ಉಳಿಯಬೇಕು. ಭಕ್ತರು ಮತ್ತು ಪ್ರಯಾಣಿಕರು ಚೀಟಿ ಪಡೆದು ಪ್ರಯಾಣಿಸಿ ಬಸ್ಸು ಸೇವೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಆಶಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಬಾನಂದೂರು ಗ್ರಾಮದಲ್ಲಿ ಜನಿಸಿದ ಬಾಲಗಂಗಾಧರನಾಥ ಸ್ವಾಮೀಜಿಯವರು ಈ ಜಗತ್ತು ಕಂಡ ಮಹಾ ಪುರುಷರು, ಅವರ ಹುಟ್ಟೂರಿನಿಂದ ಆದಿಚುಂಚನಗಿರಿ ಕ್ಷೇತ್ರಕ್ಕೆ ನೇರ ಬಸ್ ಸೌಲಭ್ಯ ಈ ಭಾಗದ ಜನರಿಗೆ ಅನುಕೂಲವಾಗಿದೆ. ಈ ಭಾಗದ ಬಹುದಿನದ ಸಮಸ್ಯೆ ಇದೀಗ ಬಗೆಹರಿದಿದ್ದು, ಜನರು ಹೆಚ್ಚುಹೆಚ್ಚಾಗಿ ಪ್ರಯಾಣ ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸಮೂರ್ತಿ, ಬಸ್ ಚಾಲಕ ಮಂಜುನಾಥ್, ನಿರ್ವಾಹಕ ವೆಂಕಟೇಶ್ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬಸ್ ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಬಿಡದಿ ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಉಮೇಶ್, ಬಿಜಿಎಸ್ ಪ್ರಗತಿಪರ ವೇದಿಕೆಯ ಪದಾಧಿಕಾರಿಗಳಾದ ಗಂಗಾಧರಯ್ಯ, ಬಿ.ಎಂ.ಕುಮಾರ್, ನಂಜುಂಡಿ, ರೇಣುಕಯ್ಯ, ಕೇಶವಮೂರ್ತಿ, ಭಾನುಪ್ರಕಾಶ್, ಶಿವಣ್ಣ, ಸಂತೋಷ್, ಗಂಗಾಧರ್, ಕುಮಾರ್, ಜಯಕುಮಾರ್, ಬಿ.ಕೆ. ವಿಠಲ್, ಜಾನಪದ ಗಾಯಕಿ ಬೋರಮ್ಮ ಸೇರಿದಂತೆ ಹಲವರು ಹಾಜರಿದ್ದು, ಬಸ್ ಸಂಚಾರಕ್ಕೆ ಶುಭ ಹಾರೈಸಿದರು.14ಕೆಆರ್ ಎಂಎನ್ 1.ಜೆಪಿಜಿಬಾನಂದೂರಿನಿಂದ ಶ್ರೀ ಕ್ಷೇತ್ರ ಆದಿಚುಂಚನಗರಿಗೆ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆದಿಚುಂಚನಗಿರಿಗೆ 127 ರುಪಾಯಿ ಚೀಟಿ ಪಡೆವ ಮೂಲಕ ಚಾಲನೆ ನೀಡಿದರು.