ಧಾರವಾಡ: ಸಂಬಳ ಹೆಚ್ಚಳ, ಬಾಕಿ ವೇತನ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮ ನೌಕರರು ಮಂಗಳವಾರ ನೀಡಿದ್ದ ಬಂದ್ ಕರೆಗೆ ಧಾರವಾಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಬ್ಬಳ್ಳಿ ಹೊರತು ಪಡಿಸಿ ಧಾರವಾಡ, ಅಳ್ನಾವರ, ಕಲಘಟಗಿ, ನವಲಗುಂದ, ಕುಂದಗೋಳ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೆಳಗ್ಗೆ ತುಸು ಹೊತ್ತು ಗೊಂದಲ ಹೊರತು ಪಡಿಸಿದರೆ ಬಸ್ ಸಂಚಾರ ಸಾಮಾನ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ಡಿಪೋದಿಂದ ಬಸ್ಸುಗಳು ಹೊರಗೆ ಬರಲಿಲ್ಲ. ಸಿಬಿಟಿ, ಹೊಸೂರು ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣಕ್ಕೆ ಬಸ್ಸುಗಳ ಬರದ ಹಿನ್ನೆಲೆಯಲ್ಲಿ ಸುಮಾರು ಹೊತ್ತು ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡಬೇಕಾಯಿತು.ಆದರೆ, ಧಾರವಾಡ ಹಾಗೂ ಜಿಲ್ಲೆಯ ಇತರೆ ಊರುಗಳಲ್ಲಿ ಪರಿಸ್ಥಿತಿ ಬೇರೆಯೇ ಇತ್ತು. ಬಸ್ ಬಂದ್ ಮಾಡೋಣವೇ? ಬೇಡವೇ? ಎಂಬ ಗೊಂದಲದಲ್ಲಿಯೇ ನಿಲ್ದಾಣಕ್ಕೆ ಚಾಲಕರು ಹಾಗೂ ನಿರ್ವಾಹಕರು ಬಂದರೂ, ಎಂದಿನಂತೆ ಪ್ರಯಾಣಿಕರಿಗೆ ಸೇವೆ ನೀಡಿದರು. ಸಿಬಿಟಿಯಲ್ಲಿ ಬೆಳಗ್ಗೆ 8ರ ವರೆಗೆ ಬಂದ್ ಮಾಡಬೇಕೋ ಬೇಡವೇ ಎಂಬ ಗೊಂದಲ ಇತ್ತಾದರೂ ನಂತರ ಎಂದಿನಂತೆ ತಮ್ಮ ತಮ್ಮ ಮಾರ್ಗಗಳಿಗೆ ಬಸ್ಸುಗಳು ಸಂಚಾರ ನಡೆಸಿದವು.
ಬೆಳಗಿನ ಶಾಲಾ-ಕಾಲೇಜು ಹಾಗೂ ಇತರೆ ಕಾರ್ಯಗಳಿಗೆ ಹೊರ ಬಂದ ಸಾರ್ವಜನಿಕರಿಗೆ ತುಸು ಹೊತ್ತು ಮಾತ್ರ ಬಸ್ಗಳ ಅಲಭ್ಯತೆ ಕಾಡಿತು. ಮುಖ್ಯ ಬಸ್ ನಿಲ್ದಾಣ ಸೇರಿದಂತೆ ಜ್ಯುಬಿಲಿ ವೃತ್ತ, ಹಳೇ ಎಸ್ಪಿ ಕಚೇರಿ, ಕೆಸಿಡಿ ಅಂತಹ ಪ್ರಮುಖ ಸ್ಥಳಗಳಲ್ಲಿ ಸಾಲುಗಟ್ಟಿ ಪ್ರಯಾಣಿಕರು ಬಸ್ಗಾಗಿ ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು. ನಂತರದಲ್ಲಿ ಕೆಲವೇ ಹೊತ್ತಿನಲ್ಲಿ ಬಹುತೇಕ ಸಿಬಿಟಿ, ಗ್ರಾಮೀಣ ಬಸ್ಸುಗಳು ಕಾರ್ಯಾಚರಣೆ ನಡೆಸಿದವು.ಓಡಲಿಲ್ಲ ಚಿಗರಿ ಬಸ್ಸುಗಳು: ಸಾರಿಗೆ ಸಂಸ್ಥೆಗಳ ಪೈಕಿ ಒಂದಾಗಿರುವ ಬಿಆರ್ಟಿಎಸ್ ನೌಕರರು ಸೋಮವಾರ ಬಂದ್ಗೆ ಬಹುತೇಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಧ್ಯೆ ಓಡಾಡುತ್ತಿದ್ದ ಜಿಗರಿ ಬಸ್ಸುಗಳು ಮಂಗಳವಾರ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಓಡಲಿಲ್ಲ. ಅವಳಿ ನಗರ ಸಂಪರ್ಕ ಕಲ್ಪಿಸಲು ಪ್ರಮುಖ ಸಾರಿಗೆ ಇದಾಗಿದ್ದು, ನಿತ್ಯ ಅವಳಿ ನಗರ ಮಧ್ಯೆ 75 ಚಿಗರಿ ಬಸ್ಸುಗಳು ಕಾರ್ಯಾಚರಣೆ ನಡೆಸುತ್ತವೆ. ಬಂದ್ ಹಿನ್ನೆಲೆಯಲ್ಲಿ ಎಲ್ಲ ಚಿಗರಿಗಳು ಡಿಪೋದಲ್ಲಿ ನಿಂತಿದ್ದವು. ಹೀಗಾಗಿ ನಿತ್ಯ ಚಿಗರಿ ಬಸ್ಸುಗಳಿಗೆ ಹೋಗುವವರು ತೀವ್ರ ಪರದಾಡಬೇಕಾಯಿತು.
ಹು-ಧಾ ಅವಳಿ ನಗರ ಮಧ್ಯೆ ಚಿಗರಿ ಹೊರತು ಪಡಿಸಿ ಸಾರಿಗೆ ಸಂಸ್ಥೆಯ ಕೆಲವೇ ಕೆಲವು ಬಸ್ಸುಗಳನ್ನು ಓಡಿಸಲಾಗುತ್ತಿದೆ. ಮಂಗಳವಾರ ಚಿಗರಿ ಬಸ್ಸುಗಳು ಸಂಪೂರ್ಣ ಬಂದ್ ಆಗಿದ್ದರಿಂದ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪರದಾಡುತ್ತಾ ಸಂಚರಿಸುವಂತಾಯಿತು.ಮುಖ್ಯಮಂತ್ರಿಗಳ ಮನವಿ ಹಾಗೂ ನ್ಯಾಯಾಲಯ ನೀಡಿದ ತಡೆಯಾಜ್ಞೆ ಸಹ ಧಿಕ್ಕರಿಸಿ ಕೆಲವು ನೌಕರರು ಮಂಗಳವಾರ ನೌಕರಿಗೆ ಬಂದಿಲ್ಲ. ನೌಕರರೆಲ್ಲರೂ ಕೆಲಸಕ್ಕೆ ಹಾಜರಾಗಲೂ ಸೂಚನೆ ನೀಡಿತ್ತು. ಈಗಾಗಲೇ ಮುಂಚೆಯೇ ರಜೆ ಕೇಳಿದ್ದ ನೌಕರರ ರಜೆಗಳನ್ನು ಸಹ ರದ್ದುಪಡಿಸಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸಕ್ಕೆ ಹಾಜರು ಆಗದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂಬ ಸೂಚನೆ ಸಹ ನೀಡಿತ್ತು. ಅಷ್ಟಾಗಿಯೂ ಸಾಕಷ್ಟು ನೌಕರರು ನೌಕರಿಗೆ ಹಾಜರಾಗಿಲ್ಲ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೆಶಕಿ ಡಾ. ಪ್ರಿಯಾಂಕಾ ಎಂ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಸೂಕ್ತ ಬಂದೋಬಸ್ತ್: ಸಾರಿಗೆ ನೌಕರರ ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆ, ಗದ್ದಲ- ಗೊಂದಲ ಉಂಟಾಗದಂತೆ ಪೊಲೀಸ್ ಬಂದೋಬಸ್ ವಹಿಸಲಾಗಿತ್ತು. ಪ್ರತಿಯೊಂದು ಬಸ್ ನಿಲ್ದಾಣ, ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಪೊಲೀಸರು ಕಾರ್ಯನಿರ್ವಹಿಸಿದರು. ಇನ್ನು, ಬೆಳಗ್ಗೆ 6ಕ್ಕೆ ರಸ್ತೆಗಿಳಿದ ಟ್ರಾಫಿಕ್ ಪೊಲೀಸರು ಪ್ರಯಾಣಿಕರಿಗೆ ಸಲಹೆ- ಸೂಚನೆ ನೀಡುತ್ತಿದ್ದ ದೃಶ್ಯಗಳು ಕಂಡು ಬಂದವು. ಸಹಾಯಕ ಪೊಲೀಸ್ ಆಯುಕ್ತರು ಸೇರಿದಂತೆ ಠಾಣಾ ಇನಸ್ಪೆಕ್ಟರ್ಗಳು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.----
ಸಾರಿಗೆ ಸಂಸ್ಥೆ ಚಲಿಸಬೇಕಿದ್ದ ಬಸ್ಸುಗಳುಚಲಿಸಿದ ಬಸ್ಸುಗಳುಚಲಿಸದ ಬಸ್ಸುಗಳುಹುಬ್ಬಳ್ಳಿ ಗ್ರಾಮೀಣ 258 190 68
ಹುಬ್ಬಳ್ಳಿ ನಗರ 308 98 210ಧಾರವಾಡ 54 54 00
ಧಾರವಾಡ ಜಿಲ್ಲೆ 620 342 278