ಸಾಗರ: ಬಿಜೆಪಿಯು ಸೇವಾ ಪ್ರಾಕ್ಷಿಕದ ಮೂಲಕ ಸಾಮಾಜಿಕ ಚಟುವಟಿಕೆ, ರಾಜಕೀಯಕ್ಕಿಂತ ಮಿಗಿಲು ಎನ್ನುವುದನ್ನು ತೋರಿಸಿ ಕೊಟ್ಟಿದೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
ಇಲ್ಲಿನ ಬಿಜೆಪಿ ನಗರ ಘಟಕದ ವತಿಯಿಂದ ಗುರುವಾರ ಸೇವಾ ಪ್ರಾಕ್ಷಿಕ ಅಂಗವಾಗಿ ಏರ್ಪಡಿಸಿದ್ದ ಖಾದಿ ಬಟ್ಟೆ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿ, ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಸ್ವದೇಶಿ ವಸ್ತುಗಳ ಬಳಕೆಯನ್ನು ಒತ್ತಿ ಹೇಳಿದ ಪ್ರಧಾನಿ ಅವರ ಕರೆಯಂತೆ ಸಾಗರದಲ್ಲಿ ಖಾದಿ ವಸ್ತ್ರ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಖಾದಿ ವಸ್ತ್ರವನ್ನೆ ಖರೀದಿಸಿ ಕೈಮಗ್ಗ ಚಳವಳಿಯನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಬಿಜೆಪಿಯು ದೇಶಾದ್ಯಂತ ಹದಿನೈದು ದಿನಗಳ ಕಾಲ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಮುಖವಾಗಿ ಸ್ವಚ್ಚತಾ ಅಭಿಯಾನ ಸಂಕಲ್ಪ ಸಾಕಾರಗೊಳಿಸಲಾಗುತ್ತಿದೆ. ಮಹಾತ್ಮಾ ಗಾಂಧೀಜಿಯವರು ಕಂಡ ಸ್ವಚ್ಚಭಾರತ ಕನಸನ್ನು ನನಸು ಮಾಡುವಲ್ಲಿ ನರೇಂದ್ರ ಮೋದಿಯವರು ಇರಿಸಿದ ಹೆಜ್ಜೆ ಗಮನಾರ್ಹವಾದದ್ದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಹಮ್ಮಿಕೊಂಡಿದ್ದ ನೇತ್ರ ತಪಾಸಣಾ ಶಿಬಿರದಲ್ಲಿ ೧೫೬ ಜನರಿಗೆ ತಪಾಸಣೆ, ಯುವಮೋರ್ಚಾದಿಂದ ನಡೆದ ರಕ್ತದಾನ ಶಿಬಿರದಲ್ಲಿ ೧೩೦ ಯೂನಿಟ್ ರಕ್ತ ಸಂಗ್ರಹ, ಸ್ವಚ್ಚತಾ ಅಭಿಯಾನದಲ್ಲಿ ಚಿಲುಮೆಕಟ್ಟೆ ಭೂತೇಶ್ವರ ದೇವಸ್ಥಾನ ಪರಿಸರ ಸ್ವಚ್ಚತೆ, ಮಾತೆಗೊಂದು ಮರ ಯೋಜನೆಯಡಿ ಪರಿಸರ ಜಾಗೃತಿ, ಖಾದಿ ವಸ್ತ್ರ ಮಾರಾಟ ಮಾಡಲಾಗಿದೆ ಎಂದು ಹೇಳಿದರು.ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯ ವಿ.ಮಹೇಶ್, ಪ್ರಮುಖರಾದ ಸಂತೋಷ್ ಶೇಟ್, ಸತೀಶ್ ಕೆ., ಪ್ರವೀಣ್, ಶಿವಶಂಕರ್, ರಾಯಲ್ ಸಂತೋಷ್, ಗೋಪಾಲ, ಯಶೋದಮ್ಮ ಇನ್ನಿತರರು ಹಾಜರಿದ್ದರು.