ಬುದ್ಧ ತತ್ವಗಳಿಂದ ಮನುಷ್ಯ ದೈವತ್ವದೆಡೆಗೆ ಸಾಗಲು ಸಾಧ್ಯ: ಡಾ. ಮಂಜುನಾಥ ಕುರ್ಕಿ

KannadaprabhaNewsNetwork | Published : May 24, 2024 1:00 AM

ಸಾರಾಂಶ

ಬುದ್ಧನ ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮನುಷ್ಯ ಮೃಗತ್ವದಿಂದ ಮನುಷ್ಯತ್ವದೆಡೆಗೆ, ಮನುಷ್ಯತ್ವದಿಂದ ದೈವತ್ವದೆಡೆಗೆ ಸಾಗಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬುದ್ಧ ಪೂರ್ಣಿಮಾ ಅಂಗವಾಗಿ ಜ್ಞಾನಜ್ಯೋತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಬುದ್ಧನ ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮನುಷ್ಯ ಮೃಗತ್ವದಿಂದ ಮನುಷ್ಯತ್ವದೆಡೆಗೆ, ಮನುಷ್ಯತ್ವದಿಂದ ದೈವತ್ವದೆಡೆಗೆ ಸಾಗಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು.

ನಗರದ ಡಿಆರ್‌ಎಂ ಕಾಲೇಜು ವತಿಯಿಂದ ಎಸ್.ಎಸ್. ಹಾಲ್‌ನಲ್ಲಿ ಗುರುವಾರ ಬುದ್ಧ ಪೂರ್ಣಿಮಾ ಅಂಗವಾಗಿ ನಡೆದ ಜ್ಞಾನಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಇತಿಹಾಸ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ನಾಡಾಗಿದೆ. ಇಲ್ಲಿ ಜನಿಸಿದ ದಾರ್ಶನಿಕರು, ಸಂತರು, ಶರಣರು, ದಾಸರು, ತತ್ವಜ್ಞಾನಿಗಳು ಸದ್ಗುಣದ ಬೀಜಗಳನ್ನು ಬಿತ್ತಿ, ನಾಗರಿಕ ಸಮಾಜ ಕಟ್ಟುವಲ್ಲಿ ಅವರ ಕೊಡುಗೆ ಮಹತ್ವವಾಗಿದೆ. ಇಂದು ವಿಜ್ಞಾನ ತಂತ್ರಜ್ಞಾನದ ಭರಾಟೆಯಲ್ಲಿ ನೈತಿಕ ಮೌಲ್ಯಗಳ ಕುಸಿತವಾಗುತ್ತಿದೆ. ಇಂಥ ಸಂದರ್ಭದಲ್ಲಿ ಗೌತಮ ಬುದ್ಧ ನಮಗೆ ಪ್ರಸ್ತುತನಾಗುತ್ತಾನೆ. ಕಾರಣ ಮಾರುಕಟ್ಟೆಯ ಸಂಸ್ಕೃತಿಗೆ ಮಾರುಹೋಗಿ ಅಧಿಕಾರ, ಹಣದ ದಾಹ ನೀಗಿಸಲು ಒಳಗಾಗಿ ಮನುಷ್ಯನು ಮಾನವೀಯತೆಯನ್ನೇ ಕಳೆದುಕೊಂಡಿದ್ದಾನೆ. ಬೌದ್ಧಿಕ ದಾರಿದ್ರ್ಯ ಮತ್ತು ಹೈಬ್ರಿಡ್ ಚಿಂತನೆಗಳು ಮನುಷ್ಯನನ್ನು ಆವರಿಸಿವೆ. ಇದರಿಂದಾಗಿ ಆದರ್ಶ ಮೌಲ್ಯಗಳು ಮೊಳಕೆಯೊಡೆದು ಬೆಳೆಯಲು ಫಲವತ್ತತೆಯ ಕೊರತೆ ಇದೆ. ಹಾಗಾಗಿ, ಮನುಷ್ಯ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಎಂ.ಪಿ.ರೂಪಶ್ರೀ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಎಲ್.ಎಸ್. ರೋಹಿತ್, ಡಾ.ವಸಂತ ನಾಯಕ್, ಸಂಚಾಲಕ ಡಾ.ಮಹಮ್ಮದ್ ಇಮದದುಲ್ಲಾ, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -23ಕೆಡಿವಿಜಿ36ಃ:

ದಾವಣಗೆರೆಯ ಧರಾಮ ಕಾಲೇಜಿನಲ್ಲಿ ಬುದ್ಧ ಪೂರ್ಣಿಮಾ ಅಂಗವಾಗಿ ನಡೆದ ಜ್ಞಾನಜ್ಯೋತಿ ಕಾರ್ಯಕ್ರಮವನ್ನು ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಉದ್ಘಾಟಿಸಿದರು.

Share this article