ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಹೋರಾಟಗಾರರು ಹಾಗೂ ಹಾವೇರಿ ಉಪವಿಭಾಗಾಧಿಕಾರಿ ಕೆ. ಚನ್ನಪ್ಪ ಅವರ ಸಮ್ಮುಖದಲ್ಲಿ ಸಂಧಾನದ ಮಾತುಕತೆ ವಿಫಲವಾಗಿದ್ದು, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ಮುಖಂಡರು ಎಚ್ಚರಿಸಿದ್ದಾರೆ.
ಬುಧವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಅಧಿಕಾರಿಗಳು ಹಾಗೂ ರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರ ಸಭೆ ಜರುಗಿತು. ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ಕೆ. ಚನ್ನಪ್ಪ ಅವರು, ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಪ್ರಕ್ರಿಯೆ ಕುರಿತು ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆಯಿದ್ದು, ತೆರವುಗೊಂಡ ಬಳಿಕ ಕಾಯ್ದೆಯಂತೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಜೂ. 5ರಂದು ಜರುಗುವ ಬ್ಯಾಡಗಿ ಬಂದ್ ಚಳವಳಿ ಕೈಬಿಡುವಂತೆ ಹಾವೇರಿ ಸಭೆಯಲ್ಲಿ ಮನವಿ ಮಾಡಿದರಲ್ಲದೆ, ಹಲವು ವರ್ಷಗಳಿಂದ ಹೋರಾಟಗಾರರು, ಸಾರ್ವಜನಿಕರು, ಸಂಘ- ಸಂಸ್ಥೆಗಳು ರಸ್ತೆ ವಿಸ್ತರಣೆಗೆ ಒತ್ತಾಯಿಸಿ ಸಾಕಷ್ಟು ಹೋರಾಟ ನಡೆದಿದ್ದು, ಈ ಹಿಂದೆ ಕಾನೂನಾತ್ಮಕವಾಗಿಯೂ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ ಎಂದರು.ಕೆಲವರು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದು, ಕಾನೂನು ತಜ್ಞರ ಜತೆ ಸಮಾಲೋಚಿಸಿ ಶೀಘ್ರದಲ್ಲೆ ಭೂಸ್ವಾಧೀನಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈ ಕುರಿತು ಸಾರ್ವಜನಿಕರ, ಹೋರಾಟಗಾರರ ಸಹಕಾರ ಅಗತ್ಯವಾಗಿದೆ ಎಂದರು. ಹೋರಾಟಗಾರರು ಇದನ್ನು ಒಪ್ಪದೆ ಹೋರಾಟ ಮುಂದುವರಿಸುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಧಾನಕ್ಕೆ ತೀವ್ರ ಹಿನ್ನೆಡೆಯಾಯಿತು.
ಮುಖ್ಯರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ ಮಾತನಾಡಿ, 15 ವರ್ಷಗಳಿಂದ ವಿಸ್ತರಣೆ ಕಾಮಗಾರಿಗೆ ಹೋರಾಟ ನಡೆಸಿದ್ದೇವೆ. ಹಲವು ಬಾರಿ ಸಾರ್ವಜನಿಕರು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ(ಪಿಐಎಲ್) ದಾಖಲಿಸಿದ್ದಾರೆ. ಭಿನ್ನ ಚಳವಳಿ ನಡೆಸಿದರೂ ಅಧಿಕಾರಿಗಳು ಇಚ್ಛಾಶಕ್ತಿ ಹಾಗೂ ವಿಳಂಬನೀತಿಯಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಹಾವೇರಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಗುಮಾಸ್ತ ಸೇರಿದಂತೆ ಕೆಲ ಅಧಿಕಾರಿಗಳ ಕೈವಾಡದಿಂದ ಅಗಲೀಕರಣ ಪ್ರಕ್ರಿಯೆಗೆ ತೊಂದರೆಯಾಗಿದೆ. ಅಧಿಕಾರಿಗಳು ಸಾರ್ವಜನಿಕರ ಹಿತಾಸಕ್ತಿ ಪರವಾಗಿರಬೇಕೆ ಹೊರತು, ಜನವಿರೋಧಿ ಕಾರ್ಯಗಳಿಗೆ ಸಹಕಾರ ನೀಡಬಾರದು ಎಂದರು.ರಸ್ತೆಯಲ್ಲಿ ಗುಂಡಿ ತೆಗೆಯುವ ಮೂಲಕ ಪೂರ್ಣ ಪ್ರಮಾಣದಲ್ಲಿ ಬ್ಯಾಡಗಿ ಬಂದ್ ಮಾಡುತ್ತೇವೆ. ಜೂ. 6ರಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಚಳವಳಿ ನಡೆಸಲಿದೆ. ಭೂಸ್ವಾಧೀನ ಪ್ರಕ್ರಿಯೆ ಆದೇಶವಾಗಬೇಕು. ಸರ್ಕಾರದ ಮಟ್ಟದಲ್ಲಿ ರಸ್ತೆ ಕಾಮಗಾರಿಗೆ ಎಲ್ಲ ದಾಖಲಾತಿಗಳು ನಡೆಯುವರೆಗೂ ಹೋರಾಟ ಕೈಬಿಡುವುದಿಲ್ಲ. ಬ್ಯಾಡಗಿ ಬಂದ್ ಹೋರಾಟದಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ. ವರ್ತಕರ ಸಂಘ ಸೇರಿದಂತೆ ವಿವಿಧ ಪದಾಧಿಕಾರಿಗಳು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಈ ವೇಳೆ ತಹಸೀಲ್ದಾರ್ ಫಿರೋಜ್ಷಾ ಸೋಮನಕಟ್ಟೆ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಪಿಡಬ್ಲ್ಯುಡಿ ಎಂಜಿನಿಯರ್ ಉಮೇಶ ನಾಯಕ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ವಕೀಲ ನಿಂಗಪ್ಪ ಬಟ್ಟಲಕಟ್ಟೆ, ಕಿರಣಕುಮಾರ ಎಂ. ವಿಜಯಭರತ ಬಳ್ಳಾರಿ, ವಿನಾಯಕ ಕಂಬಳಿ, ಪಾಂಡು ಸುತಾರ, ಗಿರೀಶ ಇಂಡಿಮಠ ಇತರರಿದ್ದರು.ಪೊಲೀಸ್ ಬಿಗಿ ಭದ್ರತೆ
ಸಿಪಿಐ ಮಾಲತೇಶ ಲಂಭಿ ಮಾತನಾಡಿ, ರಸ್ತೆ ಅಗಲೀಕರಣ ಸಮಿತಿ ನೇತೃತ್ವದಲ್ಲಿ ಕರೆ ನೀಡಿದ ಬ್ಯಾಡಗಿ ಬಂದ್ ಚಳವಳಿ ಹೋರಾಟದಲ್ಲಿ ಎಲ್ಲೆಡೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ಮುಂಜಾಗೃತವಾಗಿ 3 ಡಿಎಸ್ಪಿ, 8 ಸಿಪಿಐ, 15 ಪಿಎಸ್ಐ, 25 ಎಎಸ್ಐ, 150 ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, 4 ಡಿಎಆರ್ ವಾಹನಗಳು ಬೀಡು ಬಿಟ್ಟಿವೆ. ಪ್ರತಿಭಟನೆ ವೇಳೆ ಅಹಿತಕರ ಘಟನೆ ಜರುಗದಂತೆ ತಡೆಗಟ್ಟಲು ಧ್ವನಿವರ್ಧಕ ಮೂಲಕ ಎಲ್ಲರಿಗೂ ತಿಳಿವಳಿಕೆ ನೀಡಲಾಗುವುದು. ಮುಖ್ಯರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಆಯೋಜಿಸಲಾಗಿದೆ. ಅಲ್ಲಲ್ಲಿ 50ಕ್ಕೂ ಹೆಚ್ಚು ಬ್ಯಾರಿಕೇಡ್ಗಳನ್ನು ಅಳವಡಿಸಿದ್ದೇವೆ ಎಂದರು.