ಶಿವಮೊಗ್ಗ: ಪ್ಲಾಸ್ಟಿಕ್ ಹೆಚ್ಚಾದ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಅಗತ್ಯ ಕೆಲಸಗಳಿಗೆ ಬಟ್ಟೆ ಬ್ಯಾಗ್ ಬಳಸಬೇಕು ಎಂದು ಪ್ರೊ.ಚಂದ್ರಶೇಖರ್ ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಮತ್ತು ಇನ್ನರ್ವ್ಹೀಲ್ ಶಿವಮೊಗ್ಗ ಉತ್ತರದ ವತಿಯಿಂದ ವಿನೋಬನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಪ್ಲಾಸ್ಟಿಕ್ ಕವರ್ ತ್ಯಜಿಸಿ, ಬಟ್ಟೆ ಬ್ಯಾಗ್ ಬಳಸಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಈಗ ಎಲ್ಲರಲ್ಲೂ ಹೆಚ್ಚುತ್ತಿರುವ ಕ್ಯಾನ್ಸರ್ ರೋಗಕ್ಕೆ ನಾವು ಬಳಸುವ ಪ್ಲಾಸ್ಟಿಕ್ ಮೂಲ ಕಾರಣ. ಬಿಸಿ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕವರ್ನಲ್ಲಿ ಹಾಕಬೇಡಿ, ನಾವು ಬೇಡದ ಆಹಾರ ತುಂಬಿ ಎಸೆದ ಪ್ಲಾಸ್ಟಿಕ್ ಕವರ್ಗಳನ್ನು ಅರಿವಿಲ್ಲದೆಯೇ ತಿನ್ನುವ ಹಸುಗಳು, ಎಮ್ಮೆ, ಕತ್ತೆ, ಕುದುರೆ ಮತ್ತು ಇತರ ಪ್ರಾಣಿಗಳ ಹೊಟ್ಟೆ ಸೇರಿ ಅವುಗಳ ಪ್ರಾಣಕ್ಕೆ ಸಂಚಕಾರ ತರುತ್ತದೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಎಸೆಯುವ ಪ್ಲಾಸ್ಟಿಕ್ ಕವರ್ಗಳು ಜಲಮೂಲಗಳನ್ನು ಸೇರಿ ಜಲಚರಗಳಿಗೂ ಹಾನಿಕಾರಕವಾಗಿದೆ. ನಾವು ಈಗಲಾದರೂ ಎಚ್ಚತ್ತುಕೊಂಡು ಪರಿಸರ ರಕ್ಷಿಸಬೇಕು ಎಂದು ಮನವಿ ಮಾಡಿದರು.ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಅಭಿಯಾನವನ್ನು ವರ್ಷಪೂರ್ತಿ ಹಮ್ಮಿಕೊಳ್ಳಲಾಗುವುದು. ಸಮಾಜಮುಖಿ ಕಾರ್ಯಗಳಲ್ಲಿ ನಿರಂತರ ತೊಡಗಿಸಿಕೊಳ್ಳಲಾಗುವುದು ಎಂದರು.
ಇದೇ ವೇಳೆ ರೋಟರಿ ಹಾಗೂ ಇನ್ನರ್ವ್ಹೀಲ್ ಲೋಗೋ ಇರುವ 500 ಬಟ್ಟೆ ಬ್ಯಾಗ್ಗಳನ್ನು ಪ್ರಥಮ ಹಂತದಲ್ಲಿ ವಿತರಿಸಲಾಯಿತು.ಇನ್ನರ್ವ್ಹೀಲ್ ಶಿವಮೊಗ್ಗ ಉತ್ತರ ಅಧ್ಯಕ್ಷೆ ಶಾರದಾ ಬಸವರಾಜ್ ಮಾತನಾಡಿದರು.
ಅಭಿಯಾನದಲ್ಲಿ ಶಿವಕುಮಾರ್, ಸರ್ಜಾ ಜಗದೀಶ್, ಶ್ರೀಧರ್, ರಮೇಶ್, ನಾಗರಾಜ್, ದತ್ತಾತ್ರಿ, ಸುಂದರ್, ಶರವಣ, ಜಿ.ವಿಜಯ ಕುಮಾರ್, ಭಾರತಿ, ವಾರಿಜಾ ಜಗದೀಶ್, ಸುಜಾತ, ಸುನೀತಾ, ಕಾವ್ಯ, ಕೋಮಲ, ಉಷಾ, ಬಿಂದು, ಸುಮ, ಪ್ರಜ್ಞಾ ಇತರರಿದ್ದರು.