ಜಿಲ್ಲೆಗೆ, ಪಕ್ಷಕ್ಕೆ ಕೆಟ್ಟ ಹೆಸರು ತರಲಾರೆ: ಗೀತಾ

KannadaprabhaNewsNetwork | Published : Mar 21, 2024 1:05 AM

ಸಾರಾಂಶ

ಮನೆಯ ಮಗಳನ್ನು ಬರಿಗೈಲಿ ಕಳಿಸಬೇಡಿ, ನಾನು ಗೆದ್ದು ಸಂಸತ್ತಿನಲ್ಲಿ ಶಿವಮೊಗ್ಗದ ಧ್ವನಿಯಾಗಿರುತ್ತೇನೆ. ಜಿಲ್ಲೆಗೆ, ಪಕ್ಷಕ್ಕೆ, ಪಕ್ಷದ ನಾಯಕರಿಗೆ ಎಂದಿಗೂ ಕೆಟ್ಟ ಹೆಸರು ತರಲಾರೆ. ತಂದೆಯಂತೆ ಜನರಿಗಾಗಿ ದುಡಿಯುತ್ತೇನೆ ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮನೆಯ ಮಗಳನ್ನು ಬರಿಗೈಲಿ ಕಳಿಸಬೇಡಿ, ನಾನು ಗೆದ್ದು ಸಂಸತ್ತಿನಲ್ಲಿ ಶಿವಮೊಗ್ಗದ ಧ್ವನಿಯಾಗಿರುತ್ತೇನೆ. ಜಿಲ್ಲೆಗೆ, ಪಕ್ಷಕ್ಕೆ, ಪಕ್ಷದ ನಾಯಕರಿಗೆ ಎಂದಿಗೂ ಕೆಟ್ಟ ಹೆಸರು ತರಲಾರೆ. ತಂದೆಯಂತೆ ಜನರಿಗಾಗಿ ದುಡಿಯುತ್ತೇನೆ ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಹೇಳಿದರು.

ನಗರದ ಗಾಡಿಕೊಪ್ಪದ ಲಗನಾ ಮಂದಿರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ತಂದೆ ಮೊದಲ ಬಾರಿಗೆ ಶಾಸಕ ಆಗಿದ್ದಾಗಿನಿಂದ ಇಲ್ಲಿಯವರೆಗೂ ರಾಜಕಾರಣವನ್ನು ನೋಡಿಕೊಂಡು ಬಂದಿದ್ದೇನೆ. ನನ್ನ ತಂದೆ ನನ್ನನ್ನು ನಿಮ್ಮಂತೆ ಸಾಮಾನ್ಯಳನ್ನಾಗಿ ಬೆಳೆಸಿದರು. ನಾನು ಈ ಜಿಲ್ಲೆಯ ಮನೆ ಮಗಳು. ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಗೆಲುವು ನಿಶ್ಚಿತ- ಶ್ರೀನಿವಾಸ್:

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ನೋಡಿ ದೇಶದ ಜನ ಬೇಸತ್ತಿದ್ದಾರೆ. ಜಾತಿ ಕೋಮುವಾದ ಮೂಲಕ ಹೊಡೆದಾಡುವ ಕೆಲಸವನನ್ನು ಬಿಜೆಪಿ ಮಾಡುತ್ತಿದೆ. ಜನ ಬದಲಾವಣೆಗಾಗಿ ಕಾಯತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 20 ಕೋಟಿ ಯುವಕರು ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ. ಕರ್ನಾಟಕದಲ್ಲಿ 20 ಸೀಟು ಗೆಲ್ಲುತ್ತೇವೆ. ಭದ್ರಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 50 ಸಾವಿರ ಲೀಡ್ ಕೊಡುತ್ತೇವೆ. ಜೆಡಿಎಸ್ ಒಂದು ಬಾಡಿಗೆ ಮನೆ ಇದ್ದ ಹಾಗೆ. ಯಾರು ಬೇಕಾದರೂ ಬಾಡಿಗೆ ತಗೋಬಹುದು. ಜಾತ್ಯತೀತ ಎಂಬ ಪದಕ್ಕೆ ಅರ್ಥ ಹೋಗಿದೆ. ಕುಮಾರಸ್ವಾಮಿ ಬಣ್ಣ ಬದಲಿಸುವ ರಾಜಕಾರಣಿ. ಅವರ ಆಟ ಈ ಬಾರಿ ನಡೆಯದು. ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಿಗಲಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮುಖಂಡರಾದ ಎಂ.ಶ್ರೀಕಾಂತ್, ಆರ್. ಪ್ರಸನ್ನಕುಮಾರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಭೋವಿ ಅಭಿವೃದ್ದಿ ನಿಗಮ ಅಧ್ಯಕ್ಷ ಎಸ್. ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

- - -

-20ಎಸ್‌ಎಂಜಿಕೆಪಿ08:

ಶಿವಮೊಗ್ಗ ನಗರದ ಲಗನಾ ಕಲ್ಯಾಣ ಮಂದಿರದಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಮಾತನಾಡಿದರು.

Share this article