- ಅಮ್ಮೆಂಬಳ ಸುಬ್ಬರಾವ್ ಪೈ ಜನ್ಮದಿನ ಕಾರ್ಯಕ್ರಮದಲ್ಲಿ ಚನ್ನಕೇಶವ ವಿ.ಎನ್.
ಕನ್ನಡಪ್ರಭ ವಾರ್ತೆ ಹರಿಹರ
ಡಿಜಿಟಲ್ ಬ್ಯಾಂಕಿಂಗ್ನ ಈ ಕಾಲದಲ್ಲಿ ಸೈಬರ್ ವಂಚಕರ ಉಪಟಳ ಅಧಿಕವಾಗಿದೆ. ಆದ್ದರಿಂದ ಸೈಬರ್ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು ಕೆನರಾ ಬ್ಯಾಂಕ್ ಗರಿಷ್ಠ ಸುರಕ್ಷತೆ ಒದಗಿಸುತ್ತಿದೆ ಎಂದು ನಗರದ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಚನ್ನಕೇಶವ ವಿ.ಎನ್. ಹೇಳಿದರು.ನಗರದ ಹಳೇ ಪಿ.ಬಿ. ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಆಯೋಜಿಸಿದ್ದ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ 173ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೈಬರ್ ವಂಚನೆ ಪರಿಣಾಮಕಾರಿಯಾಗಿ ತಡೆಯಲು ಕೈಗೊಂಡ ಕ್ರಮಗಳಿಗಾಗಿ ಕೆನರಾ ಬ್ಯಾಂಕ್ಗೆ 2024-25ನೇ ಸಾಲಿನಲ್ಲಿ ಕೇಂದ್ರದ ಹಣಕಾಸು ಸಚಿವರ ಪ್ರಶಸ್ತಿ ಪಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಗುರುಬಸವರಾಜ್ ಕೆ.ಎಂ. ಮಾತನಾಡಿ, ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ವೃತ್ತಿಯಲ್ಲಿ ವಕೀಲರಾಗಿ, ದೇಶಕ್ಕೆ ಉತ್ತಮವಾದ ಬ್ಯಾಂಕ್ ನೀಡಿದರು. ಸಾಲ ಮರುಪಾವತಿ ದೃಷ್ಟಿಯಿಂದ ಉಳ್ಳವರಿಗೆ ಸಾಲ ನೀಡುವ ಬ್ಯಾಂಕುಗಳ ನೀತಿಗೆ ಅಪವಾದವಾಗಿ ಈ ಬ್ಯಾಂಕ್ ಸೇವೆ ನೀಡುತ್ತಿದೆ. ಜನಸಾಮಾನ್ಯರಲ್ಲಿ ಉಳಿತಾಯದ ಅರಿವು ಮೂಡಿಸಿದ್ದು, ವ್ಯಾಪಾರ, ವಹಿವಾಟು ಮಾಡುವವರಿಗೆ ಬೆನ್ನೆಲುಬಾಗಿ ನಿಂತು ಬಂಡವಾಳ ವ್ಯವಸ್ಥೆ ಮಾಡಿದ್ದು, ಸಮಾಜದಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವಲ್ಲಿ ಶ್ರಮಿಸಿದ ಸುಬ್ಬರಾವ್ ಪೈ ಅವರು ಜನಸಾಮಾನ್ಯರ ಹಿತಚಿಂತಕರಾಗಿದ್ದರು ಎಂದರು.
ನಗರದ ಬ್ರಹ್ಮಾನಂದ ಮಠದ ಮುಖ್ಯಸ್ಥ ವಿವೇಕಾನಂದ ಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಹಕರು, ಸಿಬ್ಬಂದಿ ಭಾಗವಹಿಸಿದ್ದರು.- - -
-20HRR.03:ಹರಿಹರದ ಹಳೇ ಪಿ.ಬಿ. ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಜನ್ಮದಿನಾಚರನೆಯಲ್ಲಿ ತಹಸೀಲ್ದಾರ್ ಗುರುಬಸವರಜ್ ಮಾತನಾಡಿದರು.