ದಾಂಡೇಲಿ: ಗುತ್ತಿಗೆದಾರ ರವಿಶಂಕರ್ ಜನ್ನು ನಿಧನಕ್ಕೆ ಕಳೆದ ಏಳು ವರ್ಷಗಳಿಂದ ಬಟವಾಡೆಯಾಗದಿರುವ ಕಾಮಗಾರಿಗಳ ಬಿಲ್ ಕಾರಣವಾಗಿದೆ ಎಂದು ಆರೋಪಿಸಿ ದಾಂಡೇಲಿಯ ಕೆನರಾ ಲೋಕೋಪಯೋಗಿ ಗುತ್ತಿಗೆದಾರ ಸಂಘದಿಂದ ಬುಧವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಪೌರಾಯುಕ್ತಗೆ ಮನವಿ ಸಲ್ಲಿಸಲಾಯಿತು.
ಗುತ್ತಿಗೆದಾರ ರವಿಶಂಕರ್ ಜನ್ನು ತಮ್ಮ ಬಾಕಿ ಇರುವ ಬಿಲ್ ಮಂಜೂರಿಗಾಗಿ ಓಡಾಡಿಸಿದರು. ಇಲಾಖೆಯ ಠೇವಣಿ ಹಣ (ನಾಡಕಚೇರಿ ಕಟ್ಟಡ) ಸುಮಾರು ಏಳು ವರ್ಷದಿಂದ ಬಿಡುಗಡೆಯಾಗಿಲ್ಲ. ನಗರಸಭೆಯ 2019-20ನೇ ಸಾಲಿನ ಎಸ್ಎಫ್ಸಿ ವಿಶೇಷ ಅನುದಾನದಡಿ ನಿರ್ವಹಿಸಿದ ಕಾಮಗಾರಿ ಬಿಲ್ ಬಾಕಿ ಇದೆ. ಜೋಯಿಡಾ ತಾಲೂಕು ಜಗಲಪೇಟ ಗ್ರಾಪಂ ವ್ಯಾಪ್ತಿಯ ತುಂಬುಲಿ ಪ್ರದೇಶದಲ್ಲಿ ನಿರ್ವಹಿಸಿದ ರಸ್ತೆ ಕಾಮಗಾರಿಯ ಸುಮಾರು ₹35ರಿಂದ ₹40 ಲಕ್ಷ ಎರಡು ವರ್ಷದಿಂದ ಬಾಕಿ ಇದೆ. ಹಲವು ಬಿಲ್ಲು ಬಾಕಿ ಇದ್ದು, ಅವರು ಮಾಡಿದ ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಒಳಗಾಗಿದ್ದರು. ಜನ್ನು ಅವರಂತೆ ದಾಂಡೇಲಿಯ ಹಲವು ಗುತ್ತಿಗೆದಾರರು ಸುಮಾರು ಮೂರು ಕೋಟಿ ರು.ಗಿಂತ ಹೆಚ್ಚಿನ ಕಾಮಗಾರಿಯನ್ನು ದಾಂಡೇಲಿ ನಗರಸಭೆಯಲ್ಲಿ ನಿರ್ವಹಿಸಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಗುತ್ತಿಗೆದಾರರು ಸಾಲದ ಸುಳಿಯಲ್ಲಿ ಸಿಲುಕಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಗುತ್ತಿಗೆದಾರರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದೇ ಹೋದರೆ ಸರಣಿ ಸಾವು ಸಂಭವಿಸುವುದನ್ನು ನೋಡಬೇಕು ಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಪೌರಾಯುಕ್ತ ವಿವೇಕ ಬನ್ನೆ ಮನವಿ ಸ್ವೀಕರಿಸಿದರು.
ಗುತ್ತಿಗೆದಾರ ಸಂಘದ ಅಧ್ಯಕ್ಷ ಎನ್.ಶಶಿಧರನ್, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲಮಾಣಿ, ಖಜಾಂಚಿ ಕೆ.ಸುಧಾಕರ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಆರ್.ಸಿ. ಸುದರ್ಶನ್, ಸಹ ಕಾರ್ಯದರ್ಶಿ ಎಸ್.ಎಂ. ಪಡುಕೋಣೆ, ಆನಂದ್ ಮಾಧವನ್ ಇದ್ದರು.ಬಾಕಿ ಬಿಲ್ ನನ್ನ ಅವಧಿಯದ್ದೆಂದು ಬಿಂಬಿಸಬೇಡಿ: ಪ್ರತಿಭಟನೆ ನಡೆಸುವ ವೇಳೆಗೆ ಶಾಸಕ ಆರ್.ವಿ. ದೇಶಪಾಂಡೆ ನಗರಸಭೆ ಕಾರ್ಯಾಲಯದಲ್ಲಿ ಆಶ್ರಯ ಸಮಿತಿ ಸಭೆಗಾಗಿ ಬಂದಿದ್ದರು. ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದ್ದ ವಿಷಯ ತಿಳಿದು ಅವರನ್ನು ಕಾರ್ಯಾಲಯಕ್ಕೆ ಕರೆದು ಗುತ್ತಿಗೆದಾರರ ಸಂಘದ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದರು. ಗುತ್ತಿಗೆದಾರರ ಬಿಲ್ ಈ ರೀತಿ ಸಮಸ್ಯೆ ಆಗಿರುವುದು ಇದು ಮೊದಲೇನಲ್ಲ. ಹಿಂದಿನ ಆಡಳಿತದಲ್ಲೂ ಈ ಸಮಸ್ಯೆಯಾಗಿದೆ. ಈಗ ನಿಮ್ಮ ಬಿಲ್ ಆಗದೇ ಇರುವುದು ನಮ್ಮ ಈ ಅವಧಿಯ ಬಿಲ್ ಗಳಲ್ಲ. ಅವು ಹಿಂದಿನದು. ನನಗೆ ರವಿಶಂಕರ್ ಜನ್ನು ನಿಧನದ ಬಗ್ಗೆ ನಿಜಕ್ಕೂ ನೋವಿದೆ. ಅವರ ಹಾಗೂ ಉಳಿದ ಎಲ್ಲ ಗುತ್ತಿಗೆದಾರರ ಬಿಲ್ ಮಂಜೂರು ಮಾಡಿಸಲು ಪ್ರಯತ್ನಿಸುವೆ. ಆದರೆ, ಬಾಕಿ ಇರುವ ಬಿಲ್ಲುಗಳನ್ನು ನನ್ನ ಅವಧಿಯ ಬಿಲ್ಲುಗಳೆಂದು ಬಿಂಬಿಸಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದರು.