ಕಾರ್ ಕಾರ್ ಕಾರ್ ಎಲ್ನೋಡಿ ಕಾರ್...!

KannadaprabhaNewsNetwork |  
Published : Jul 18, 2024, 01:34 AM IST
33 | Kannada Prabha

ಸಾರಾಂಶ

ನರಸರಾಜ ರಸ್ತೆಯಲ್ಲಿರುವ ಒಂದು ಕಾರ್ ಅಂಗಡಿಯ ಮಾಲೀಕರು ತಮ್ಮ ಜಾಗವನ್ನು ಪೂರ್ತಿಯಾಗಿ ಆಕ್ರಮಿಸಿಕೊಳ್ಳುವ ಜೊತೆಗೆ ಸಾರ್ವಜನಿಕ ರಸ್ತೆಯ ಇಕ್ಕೆಲಗಳಲ್ಲಿ, ಪಾದಾಚಾರಿ ಮಾರ್ಗದಲ್ಲಿ ಹಾಗೂ ಹೊಸ ಕಿರು ಮಾರ್ಗದಲ್ಲಿಯೂ ಸಹ ತಮ್ಮ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಸಾರ್ವಜನಿಕ ಸ್ಥಳಗಳನ್ನು ಶೇ. 100 ಅತಿಕ್ರಮಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಪಾರಂಪರಿಕ ನ್ಯಾಯಾಲಯಗಳ ಎದುರು ಸುಂದರ ಹಾಗೂ ವಿಶಾಲವಾದ ಮನುವನ ಉದ್ಯಾನವಿದೆ.

ಈ ಉದ್ಯಾನದ ಮೂರೂ ಕಡೆಗಳಲ್ಲಿ ಇರುವ ಮನೆಗಳಿಗೆ ಈ ಉದ್ಯಾನದಿಂದ ಒಳ್ಳೆಯ ಗಾಳಿ-ಬೆಳಕು ಬರುತ್ತದೆ. ಹಾಗಾಗಿ ಈ ಉದ್ಯಾನದ ಸುತ್ತ ಇರುವ ನರಸರಾಜ ರಸ್ತೆ, ಜಯಲಕ್ಷ್ಮೀ ರಸ್ತೆ ಹಾಗೂ ವಿಷ್ಣುವರ್ಧನ ರಸ್ತೆಯ ಬಳಿ ಇರುವ ಮನೆಯ ಮಾಲೀಕರು ತಮ್ಮ ಜಾಗದಲ್ಲಿ ಪೂರ್ತಿಯಾಗಿ ಮನೆ ನಿರ್ಮಿಸಿಕೊಳ್ಳುವಂತಿಲ್ಲ. ಮನೆಯ ಶೇ.20 ಭಾಗದಷ್ಟಾದರೂ ಜಾಗವನ್ನು ಖಾಲಿ ಬಿಟ್ಟು ಉಳಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಬಹುದು. ಸಾರ್ವಜನಿಕ ಉದ್ಯಾನದಿಂದ ಅನುಕೂಲ ಪಡೆಯುವವರು ಸಾರ್ವಜನಿಕರಿಗೂ ಅನುಕೂಲ ಕಲ್ಪಿಸಲಿ ಎಂದು ರೂಪಿಸಲಾದ ಹಳೆಯ ನಿಯಮ ಇದು.

ಈ ಉದ್ಯಾನದ ಸುತ್ತಲೂ ಇರುವ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಸುಂದರವಾಗಿ ನವೀಕರಿಸಲಾಗಿದೆ.

ನರಸರಾಜ ಮಾರ್ಗದಲ್ಲಿ ರಸ್ತೆ, ಪಾದಚಾರಿ ಮಾರ್ಗದ ಜೊತೆಗೆ ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಸುರಕ್ಷಿತವಾದ ಮತ್ತೊಂದು ಕಿರುಮಾರ್ಗವನ್ನೂ ನಿರ್ಮಿಸಲಾಗಿದೆ.

ವಿಪರ್ಯಾಸವೆಂದರೆ ನರಸರಾಜ ರಸ್ತೆಯಲ್ಲಿರುವ ಒಂದು ಕಾರ್ ಅಂಗಡಿಯ ಮಾಲೀಕರು ತಮ್ಮ ಜಾಗವನ್ನು ಪೂರ್ತಿಯಾಗಿ ಆಕ್ರಮಿಸಿಕೊಳ್ಳುವ ಜೊತೆಗೆ ಸಾರ್ವಜನಿಕ ರಸ್ತೆಯ ಇಕ್ಕೆಲಗಳಲ್ಲಿ, ಪಾದಾಚಾರಿ ಮಾರ್ಗದಲ್ಲಿ ಹಾಗೂ ಹೊಸ ಕಿರು ಮಾರ್ಗದಲ್ಲಿಯೂ ಸಹ ತಮ್ಮ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಸಾರ್ವಜನಿಕ ಸ್ಥಳಗಳನ್ನು ಶೇ. 100 ಅತಿಕ್ರಮಿಸಿಕೊಂಡಿದ್ದಾರೆ.

ತಮ್ಮ ಸ್ವಂತ ಜಾಗದಲ್ಲಿಯೇ ಶೇ. 20 ಜಾಗವನ್ನು ಸಾರ್ವಜನಿಕರ ಒಳಿತಿಗಾಗಿ ಮೀಸಲಿಡುವ ಜವಾಬ್ದಾರಿ ಹೊಂದಿರುವ ಈ ಮಹಾನುಭಾವರು ರಸ್ತೆ, ಪಾದಚಾರಿ ಮಾರ್ಗ, ಕಿರುಮಾರ್ಗ ಮುಂತಾದ ಶೇ. 100 ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡು ವಾಹನ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟುಮಾಡಿ ಸಾರ್ವಜನಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದರೂ ಕೂಡ ಪಾಲಿಕೆ ಮತ್ತು ಪೊಲೀಸರು ತೆಪ್ಪಗಿರುವುದೇಕೆ?

ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿಕೊಂಡ ಈ ಕಾರುಗಳು ದಿನದ 24 ಗಂಟೆಯೂ ಅಲ್ಲಿಯೇ ನಿಂತು ವಾಹನ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿರುವುದನ್ನು ನೋಡಲು ಯಾವುದೇ ಕೃತಕ ಬುದ್ದಿಮತ್ತೆಯ ಕ್ಯಾಮರಾ ಕಣ್ಣುಗಳ ಅವಶ್ಯಕತೆ ಇಲ್ಲ. ಪೊರೆ ಬಂದಿರುವ ಸಾಮಾನ್ಯ ಕಣ್ಣುಗಳಿಗೂ ಈ ದೃಶ್ಯ ಗೋಚರಿಸುತ್ತದೆ. ಆದರೆ ನಮ್ಮ ಮೈಸೂರಿನ ಪೊಲೀಸ್ ಹಾಗೂ ಪಾಲಿಕೆಯ ಅಧಿಕಾರಿಗಳ ಸಹಜ ಕಣ್ಣುಗಳಿಗೇಕೆ ಈ ಅಕ್ರಮ ಕಾಣುತ್ತಿಲ್ಲ?

ಮೈಸೂರಿನ ಪೊಲೀಸ್ ಮತ್ತು ಪಾಲಿಕೆಯ ಅಧಿಕಾರಿಗಳ ಜಾಣ ಮೌನ ಅನುಮಾನ ಮೂಡಿಸುತ್ತಿದೆ.ಈ ಕೂಡಲೇ ಮೈಸೂರು ನಗರ ಪೊಲೀಸ್ ಹಾಗೂ ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರು ಅಕ್ರಮಾದಿತ್ಯರ ಈ ಕಾರುಬಾರಿಗೆ ಬ್ರೇಕ್ ಹಾಕಿ ಸಾರ್ವಜನಿಕರ ಹಿತಾಸಕ್ತಿಗಳನ್ನು ಕಾಪಾಡಲಿ. ಇದು ಸಾಧ್ಯವಾಗದೇ ಹೋದರೆ ಮನುವನ ಉದ್ಯಾನವನ್ನೂ ನಾಶಪಡಿಸಿ, ಈ ಕಾರುಗಳ ಅಂಗಡಿಯ ಮಾಲೀಕರಿಗೆ ತಮ್ಮ ಕಾರುಗಳನ್ನು ನಿಲ್ಲಿಸಲು ಸದವಕಾಶ ಕಲ್ಪಿಸಿಕೊಡಿ!!

- ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ