ಕನ್ನಡಪ್ರಭ ವಾರ್ತೆ, ಕೊಪ್ಪ
ಒತ್ತುವರಿ ತೆರವು ಹೆಸರಿನಲ್ಲಿ ಅರಣ್ಯ ಇಲಾಖೆಯವರು ಮರ, ಗಿಡಗಳನ್ನು ಕಡಿಯುತ್ತಿದ್ದಾರೆ.ಇನ್ನೂ ಮುಂದೆ ಗಿಡ ಕಡಿದರೇ ಇಲಾಖೆ ವಿರುದ್ಧ ಜೆಡಿಎಸ್ ನಿಂದ ಕೇಸ್ ದಾಖಲಿಸಲಾಗುತ್ತದೆ ಎಂದು ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಹೇಳಿದರು. ಮಂಗಳವಾರ ಬಾಳಗಡಿ ಪಕ್ಷದ ಕಚೇರಿಯ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಇಲಾಖೆಗೆ ಗಿಡಗಳನ್ನು ಬೆಳೆಸುವ ಹಕ್ಕಿದೆ, ಹೊರತು ಕಡಿಯುವ ಹಕ್ಕಿಲ್ಲ. ಅರಣ್ಯ ಸಚಿವರು ೨೦೧೫ರ ನಂತರದ ಒತ್ತುವರಿ ತೆರವುಗೊಳಿಸಿ ಎಂದು ಆದೇಶಿಸಿದ್ದಾರೆ. ಸಚಿವರಿಗೆ ಬೀದರ್ ಹಾಗೂ ಚಿಕ್ಕಮಗಳೂರು ಪರಿಸರದ ಬಗ್ಗೆ ತಿಳಿದಿಲ್ಲ. ಬಡವರು ಜೀವನಕ್ಕಾಗಿ ೨-೩ ಎಕರೆ ಜಮೀನು ಒತ್ತುವರಿ ಮಾಡಿ ಕೃಷಿ ನಡೆಸುತ್ತಿದ್ದಾರೆ. ಈ ಭೂಮಿ ತೆರವು ಮಾಡಿದರೆ ರೈತರು ಬೀದಿಗೆ ಬರಬೇಕಾಗುತ್ತದೆ. ರೈತರನ್ನು ಅರಣ್ಯ ಇಲಾಖೆ ಇಂತಹ ಪರಿಸ್ಥಿತಿಗೆ ದೂಡಿದಲ್ಲಿ ಜೆಡಿಎಸ್ ಆಮರಣಾಂತ ಉಪವಾಸ ನಡೆಸಲಿದೆ ಎಂದು ಎಚ್ಚರಿಸಿದರು.ಮಲೆನಾಡಿನಲ್ಲಿ 4-5 ತಲೆಮಾರಿನಿಂದ ಕೃಷಿಕರು ಜೀವನಕ್ಕಾಗಿ ಒಂದಷ್ಟು ಭೂಮಿ ಒತ್ತುವರಿ ಮಾಡಿದ್ದಾರೆ. ಈಗ ಆದೇಶವಿದೆ ಎಂದು ಅರಣ್ಯ ಇಲಾಖೆ ತೆರವಿಗೆ ಮುಂದಾಗಿದೆ. ಕಂದಾಯ- ಅರಣ್ಯ ಭೂಮಿ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ ಎಂದರು.ಒತ್ತುವರಿ ತೆರವು ಕಾರ್ಯದ ಬಗ್ಗೆ ಶಾಸಕರ ಟಿ.ಡಿ. ರಾಜೇಗೌಡರು ಮಾತನಾಡ ಬೇಕು. ರೈತರಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ, ಇಲಾಖೆ ಹಂತದಲ್ಲಿ ಮಾತನಾಡಿ ಸಮಸ್ಯೆ ಪರಿಹರಿಸಬೇಕಿದ್ದ ಶಾಸಕರು ಮೌನಕ್ಕೆ ಶರಣಾಗಿದ್ದಾರೆ ಎಂದರು.ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡ ಪ್ರತಿಭಟನೆಗೆ ಶಾಸಕರು ಬರಬೇಕು. ಪ್ರತಿಭಟನೆಯಲ್ಲಿ ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದರು. ನಮ್ಮ ಜಿಲ್ಲೆಯಿಂದ ಕಾಂಗ್ರೆಸ್ನ ೫ ಶಾಸಕರು ಗೆದ್ದಿದ್ದಾರೆ. ಆದರೇ, ಯಾರುಒತ್ತುವರಿ ಸಮಸ್ಯೆ ಬಗ್ಗೆ ಮಾತನಾಡಿಲ್ಲ, ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಸಹ ಆಡಳಿತಾತ್ಮಕ ನಿರ್ವಹಣೆ ಯಲ್ಲಿ ವಿಫಲರಾಗಿದ್ದಾರೆ ಎಂದರು. ಆ.೧೭ರಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಕೊಪ್ಪದಲ್ಲಿ ಹಮ್ಮಿಕೊಂಡ ಪ್ರತಿಭಟನೆಗೆ ಜೆಡಿಎಸ್ ನಿಂದ ಸಂಪೂರ್ಣ ಬೆಂಬಲವಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ಎನ್.ಆರ್.ಪುರ ಅಧ್ಯಕ್ಷ ಚಂದ್ರಶೇಖರ್, ಶೃಂಗೇರಿ ಅಧ್ಯಕ್ಷ ಭರತ್, ದೀಪಕ್, ಯೇಸುದಾಸ್ ಮುಂತಾದವರಿದ್ದರು.