ಶಿರಹಟ್ಟಿ: ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗಾಗಿ ಮೊಬೈಲ್ಗೆ ನೆಟ್ವರ್ಕ್ ಸಿಗದ ಕಾರಣ ಸಮೀಕ್ಷೆಗೆ ನಿಯುಕ್ತಿಗೊಂಡ ಶಿಕ್ಷಕರು ಗುರುವಾರ ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿ ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಅವರಿಗೆ ತಮ್ಮ ಅಳಲು ತೋಡಿಕೊಂಡರು.
ಈ ವೇಳೆ ಶಿಕ್ಷಕರು ಮಾತನಾಡಿ, ಜಾತಿಗಣತಿ ಮಾಡುವಾಗ ಲಾಗಿನ್ ಸಮಸ್ಯೆ, ವೆಬ್ ಲಿಸ್ಟ್ನಲ್ಲಿ ಆಗದ ಗಣತಿದಾರರು, ಸಮರ್ಪಕವಾಗಿಲ್ಲದ ಲೊಕೇಶನ್, ಬಾರದ ಓಟಿಪಿ, ಸಮೀಕ್ಷೆಯ ಮನೆಗಳ ಸರಿಯಾದ ಜೋಡಣೆ ಇಲ್ಲದಿರುವುದು ಮುಖ್ಯವಾಗಿ ಆನ್ಲೈನ್ಲ್ಲಿ ಇರುವುದರಿಂದ ನೆಟ್ವರ್ಕ ಸಮಸ್ಯೆ, ಪ್ರತಿಯೊಂದು ಮನೆಯ ಸಮೀಕ್ಷೆಗೆ ೬೦ ಪ್ರಶ್ನೆಗಳನ್ನು ಮ್ಯಾಂಡಿಟರಿ ಮಾಡಿರುವುದು, ಆಧಾರ್ ಓಟಿಪಿ ಸಮಸ್ಯೆ ಜತೆಗೆ ಒಂದು ಗಂಟೆಗಳ ಕಾಲ ಮಾಹಿತಿ ತುಂಬಿದ ನಂತರ ಸಮೀಕ್ಷೆ ಮಾಹಿತಿದಾರರ ದೃಢೀಕರಣ ಅಪ್ಲೋಡ್ ನಾಟ್ ಸಕ್ಸಸ್ ಅಂತಾ ಬರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು.
ಒಬ್ಬಂಟಿ ಮಹಿಳಾ ಶಿಕ್ಷಕಿಯರು ಸಮೀಕ್ಷೆ ಗಣತಿ ಕಾರ್ಯದಲ್ಲಿ ಮುಜುಗುರಕ್ಕೆ ಉಂಟಾಗುತ್ತಿರುವುದು, ದೈಹಿಕ ನ್ಯೂನ್ಯತೆ ಉಳ್ಳ, ಅನಾರೋಗ್ಯ ಮತ್ತು ವಯಸ್ಸಾದ ಹಿರಿಯ ಶಿಕ್ಷಕರಿಗೆ ತೊಂದರೆ, ಕೆಲವು ಶಿಕ್ಷಕರಿಗೆ ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ತಾಂತ್ರಿಕ ಜ್ಞಾನ ಇಲ್ಲದೇ ಇರುವುದು ಈ ಎಲ್ಲ ಸಮಸ್ಯೆಯಿಂದ ಗಣತಿದಾರ ಶಿಕ್ಷಕರು ಬೇಸತ್ತು ಹೋಗಿದ್ದಾರೆ. ಬಹುತೇಕ ಶಿಕ್ಷಕರು ಗುರುವಾರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರರನ್ನು ಅವರನ್ನು ಭೇಟಿಯಾಗಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಿಕೊಂಡರು.ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು ೭ ಕ್ಲಸ್ಟರ್ ಗುರುತಿಸಿಕೊಂಡಿದ್ದು, ೨೦೨ ಶಿಕ್ಷಕರನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಒಟ್ಟು ೨೦.೨೦೦ ಮನೆಗಳು ಬರುತ್ತಿವೆ. ೨೦ ಸಮೀಕ್ಷೆದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಒಬ್ಬ ಸಮೀಕ್ಷೆದಾರರಿಗೆ ೮೦ರಿಂದ ೧೦೦ ಮನೆಗಳು ಬರುತ್ತಿದ್ದು, ಗುರುವಾರ ತಾಂತ್ರಿಕ ಸಮಸ್ಯೆಯಿಂದ ಒಂದು ಮನೆ ಕೂಡ ಸಮೀಕ್ಷೆ ಮಾಡಲಾಗಿಲ್ಲ. ನಾಲ್ಕನೆ ದಿನಕ್ಕೆ ಬರೀ ೩೨೫ ಮನೆಗಳ ಸಮೀಕ್ಷೆ ಕಾರ್ಯ ಮುಗಿದಿದೆ ಎಂದು ಸಮೀಕ್ಷೆದಾರರು ಅಳಲು ತೋಡಿಕೊಂಡರು.
ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಯ ವಾಸ್ತವಿಕ ಸ್ಥಿತಿಗತಿ ಅರಿಯುವುದು ಸೇರಿದಂತೆ ಜನಸಮುದಾಯಗಳ ಅಂಕಿ-ಅಂಶಗಳ ಸಂಗ್ರಹಸ ಮೀಕ್ಷೆಗಾಗಿ ಇರುವ ಆ್ಯಪ್ನಲ್ಲಿ ಕೆಲ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದು, ಸಮಸ್ಯೆ ನಿವಾರಣೆಗಾಗಿ ಸರ್ಕಾರ ತಾಂತ್ರಿಕ ಪರಿಣಿತರ ಮೂಲಕ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.