ಕೆ.ಆರ್.ರವಿಕಿರಣ್ ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರದಕ್ಷಿಣ ಭಾರತದ ಪ್ರಮುಖ ರಾಸುಗಳ ಜಾತ್ರೆಗಳಲ್ಲಿ ಒಂದಾಗಿರುವ ಘಾಟಿ ದನಗಳ ಜಾತ್ರೆಗೆ ಅಧಿಕೃತ ಚಾಲನೆ ದೊರೆತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಸಂಘ-ಸಂಸ್ಥೆಗಳೂ ಸಹಕಾರ ನೀಡಿವೆ.
ಜಾತ್ರೆಗೆ ಬರುವ ಅಮೃತ ಮಹಲ್, ಹಳ್ಳಿಕಾರ್ ಸೇರಿದಂತೆ ಹತ್ತಾರು ತಳಿಗಳ ಕಟ್ಟುಮಸ್ತು ಎತ್ತುಗಳನ್ನು ಪ್ರತಿಯೊಬ್ಬ ರೈತನೂ ಆಸೆಗಣ್ಣಿನಿಂದ ನೋಡುತ್ತಾನೆ. ಆ ಎತ್ತುಗಳಿಗೆ ತಾವೇ ಒಡೆಯನಾಗಬೇಕೆಂದು ಪೈಪೋಟಿಗೆ ಬೀಳುವ ರೈತರು ಅವುಗಳನ್ನು ಕೊಳ್ಳಲು ದೊಡ್ಡ ಮೊತ್ತದ ಹಣ ಹೂಡಲು ಸಿದ್ಧರಾಗುತ್ತಾರೆ. ಈ ಸಮಯದಲ್ಲಿ ರಂಗೇರುವ ಎತ್ತುಗಳ ವ್ಯಾಪಾರ ನೋಡುವುದೇ ಚೆನ್ನ. ಆದರೆ ಇತ್ತೀಚೆಗೆ ವಿಭಿನ್ನ ತಳಿಗಳ ರಾಸುಗಳ ಕೊರತೆ ಕಾಡುತ್ತಿದೆ. ಜಾತ್ರೆ ಈಗಷ್ಟೇ ಆರಂಭವಾಗಿದ್ದು, ಇನ್ನೂ 10 ದಿನಗಳ ಕಾಲ ನಡೆಯಲಿದೆ. ಹೀಗಾಗಿ ಮತ್ತಷ್ಟು ರಾಸುಗಳು ಬಂದು ಸೇರುವ ನಿರೀಕ್ಷೆ ಇದೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆ ರಾಜ್ಯಗಳಿಂದಲೂ ರೈತರು ಎತ್ತುಗಳನ್ನು ಕೊಳ್ಳಲು, ಮಾರಾಟ ಮಾಡಲು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಆಕರ್ಷಕ ಚಪ್ಪರಗಳ ನಿರ್ಮಾಣ:ಎತ್ತುಗಳ ಮಾರಾಟಕ್ಕೆ ಮೊದಲು ಬಯಲನ್ನೇ ಆಶ್ರಯಿಸುತ್ತಿದ್ದ ರೈತರು ಈಗ ಸ್ವಲ್ಪ ಮಾರ್ಪಾಟು ಮಾಡಿಕೊಳ್ಳುವತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಹತ್ತಾರು ಎತ್ತುಗಳನ್ನು ಮಾರಾಟಕ್ಕೆ ತರುವ ದೊಡ್ಡ ಪ್ರಮಾಣದ ರೈತರು ಆಕರ್ಷಕ ಬಿದಿರು ಚಪ್ಪರಗಳನ್ನು ನಿರ್ಮಿಸಿಕೊಂಡು, ತಳಿರು ತೋರಣಗಳಿಂದ ಅಲಂಕರಿಸಿ, ಬಣ್ಣದ ಕಾಗದಗಳ ಅಲಂಕಾರದೊಂದಿಗೆ ಎತ್ತುಗಳನ್ನು ಮಾರಾಟಕ್ಕಿಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.ವಿವಿಧೆಡೆಗಳಿಂದ ರೈತರು ಆಗಮನ:
ದನಗಳ ಜಾತ್ರೆಗೆ ರಾಜ್ಯದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಆಂಧ್ರಪ್ರದೇಶದ ಹಿಂದುಪುರ, ಅನಂತಪುರ, ಪೆನುಕೊಂಡ, ಮಡಕಶಿರಾ, ತಮಿಳುನಾಡಿನ ಕೃಷ್ಣಗಿರಿ, ಹೊಸೂರು ಸೇರಿದಂತೆ ವಿವಿಧ ಭಾಗಗಳ ರೈತರು ತಮ್ಮ ರಾಸುಗಳೊಂದಿಗೆ ಆಗಮಿಸಿದ್ದಾರೆ.ಉತ್ತಮ ತಳಿಯ ಎತ್ತುಗಳಿಗೆ ಬಹುಮಾನ!ರೈತರು ತಾವು ತರುವ ರಾಸುಗಳನ್ನು ವರ್ಷವಿಡೀ ಯಾವ ರೀತಿ ನೋಡಿಕೊಂಡಿದ್ದಾರೆ ಹಾಗೂ ಮುಂದಿನ ರೈತರೂ ಸಹ ರಾಸುಗಳನ್ನು ಉತ್ತಮವಾಗಿ ನೋಡಿಕೊಳ್ಳಲು ಪ್ರೋತ್ಸಾಹಿಸುವ ಸಲುವಾಗಿ ದೇವಸ್ಥಾನ ಆಡಳಿತ ವ್ಯವಸ್ಥಾಪನ ಸಮಿತಿಯ ವತಿಯಿಂದ ಪ್ರತಿ ವರ್ಷವೂ ಸಹ ವಿಶೇಷ ಬಹುಮಾನವನ್ನು ನೀಡಲಾಗುತ್ತದೆ.ಡಿ.25ಕ್ಕೆ ರಥೋತ್ಸವ:ಡಿ.25ರಂದು ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಪ್ರತಿವರ್ಷದಂತೆ ರಥೋತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಆರಂಭಿಸಿದೆ. ದೇವಾಲಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.ಫೋಟೋ-11ಕೆಡಿಬಿಪಿ3-ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯದಲ್ಲಿ ದನಗಳ ಜಾತ್ರೆ ಭರಾಟೆ.. ಕಣ್ಣು ಹಾಯಿಸಿದಷ್ಟೂ ಕಾಣಸಿಗುತ್ತಿರುವ ನೂರಾರು ರಾಸುಗಳು.
11ಕೆಡಿಬಿಪಿ4- ಘಾಟಿ ಜಾತ್ರೆಯಲ್ಲಿ ಎಲ್ಲೆಲ್ಲೂ ದನಗಳದ್ದೇ ಕಾರುಬಾರು.--
11ಕೆಡಿಬಿಪಿ6- ಇತಿಹಾಸ ಪ್ರಸಿದ್ದ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ.--
11ಕೆಡಿಬಿಪಿ9- ರಾಸುಗಳ ಮಾರಾಟಕ್ಕೆಂದೇ ಸಿದ್ದವಾಗಿರುವ ಆಕರ್ಷಕ ಬಿದಿರು ಚಪ್ಪರಗಳು.--