ಕನ್ನಡಪ್ರಭ ವಾರ್ತೆ ಮಂಡ್ಯ
ಬಸರಾಳು ಹೋಬಳಿ ಮಳೆಯಾಶ್ರಿತ ಪ್ರದೇಶವಾಗಿದ್ದು, ಹೇಮಾವತಿ ನೀರಿನ ಕೊನೆಯ ಭಾಗದಲ್ಲಿದೆ. ನಾಲೆಯ ಮೂಲಕ ನಿರೀಕ್ಷಿತ ಪ್ರಮಾಣದ ನೀರು ಹರಿದುಬರುತ್ತಿಲ್ಲ. ಇದರಿಂದ ಈ ಭಾಗದ ರೈತರು ನೀರಾವರಿ ಬೆಳೆಗಳನ್ನು ಬೆಳೆಯಲಾಗದೆ. ರಾಗಿ, ಜೋಳದ ಬೆಳೆಗಷ್ಟೇ ಸೀಮಿತವಾಗಿದ್ದಾರೆ. ಈ ಭಾಗದ ರೈತರು ವ್ಯವಸಾಯ ಮಾಡುವುದಕ್ಕೆ ನೀರಿಗೆ ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡ ಶಾಸಕ ಪಿ.ರವಿಕುಮಾರ್ ಅವರು ಶ್ರೀರಂಗಪಟ್ಟಣದಿಂದ ಕಾಲುವೆ ಮೂಲಕ ಕಾವೇರಿ ನೀರನ್ನು ಬಸರಾಳು ವ್ಯಾಪ್ತಿಗೆ ಹರಿಸುವ ಯೋಜನೆಯನ್ನು ರೂಪಿಸಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದಾರೆ. ಅದನ್ನು ಸಚಿವರಿಗೆ ಸಲ್ಲಿಸಿ ಯೋಜನೆ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ.
೪೦ ಗ್ರಾಮಗಳಲ್ಲಿ ನೀರಿನ ಸಮಸ್ಯೆ:೧೧೫೦ ಕೋಟಿ ರು. ವೆಚ್ಚದ ಯೋಜನೆ ಇದಾಗಿದ್ದು, ಶ್ರೀರಂಗಪಟ್ಟಣದಿಂದ ೩೫ ಕಿ.ಮೀ. ದೂರದಲ್ಲಿರುವ ಬಸರಾಳು ಹೋಬಳಿಗೆ ನೀರು ಹರಿಸುವುದರಿಂದ ಆ ಭಾಗದ ೪೦ ಗ್ರಾಮಗಳ ಜನರ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸುವುದು. ನೀರಿಲ್ಲದೆ ಬರಡಾಗಿರುವ ಹೋಬಳಿಯನ್ನು ಸ್ವಲ್ಪಮಟ್ಟಿಗಾದರೂ ಹಸಿರಿನಿಂದ ಕಂಗೊಳಿಸುವಂತೆ ಮಾಡುವುದಕ್ಕೆ ಶಾಸಕ ರವಿಕುಮಾರ್ ಸಂಕಲ್ಪ ಮಾಡಿದ್ದಾರೆ.
ಬಸರಾಳು ಹೋಬಳಿಗೆ ಕಾವೇರಿ ನೀರು ಹರಿಸುವ ಕುರಿತಂತೆ ಶಾಸಕ ಪಿ.ರವಿಕುಮಾರ್ ಕಳೆದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಗಮನಸೆಳೆದಿದ್ದರು. ಕಾವೇರಿ ನೀರಿನಿಂದ ಬಸರಾಳು ಹೋಬಳಿ ಸಂಪೂರ್ಣ ವಂಚಿತವಾಗಿದ್ದು, ಬರಡು ಪ್ರದೇಶವಾಗಿದೆ. ಈ ಭಾಗದಲ್ಲಿ ಯಾವುದೇ ನೀರಾವರಿ ವ್ಯವಸ್ಥೆಗಳಿಲ್ಲ. ಹೇಮಾವತಿ ನೀರು ಈ ಭಾಗಕ್ಕೆ ಇದ್ದೂ ಇಲ್ಲದಂತಾಗಿದೆ. ಕಾವೇರಿ ನೀರನ್ನು ಬಸರಾಳು ಹೋಬಳಿಗೆ ಹರಿಸಲೇಬೇಕಾದ ಅನಿವಾರ್ಯತೆಯನ್ನು ವಿಸ್ತೃತವಾಗಿ ವಿವರಿಸಿದ್ದರು. ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಲೇಬೇಕು. ಇಲ್ಲದಿದ್ದರೆ ಈ ಭಾಗದ ಜನರ ದಶಕದ ನೀರಿನ ಬೇಡಿಕೆಗೆ ಸ್ಪಂದನೆ ಸಿಗದಂತಾಗುತ್ತದೆ. ಶ್ರೀರಂಗಪಟ್ಟಣದಿಂದ ನೀರನ್ನು ಹರಿಸುವುದರಿಂದ ಬಸರಾಳು ಪ್ರದೇಶದ ಜನರ ನೀರಾವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅದಕ್ಕಾಗಿ ಆರು ಚೆಕ್ಡ್ಯಾಂಗಳನ್ನು ನಿರ್ಮಿಸುವ ಅಗತ್ಯವಿದೆ ಎಂದೆಲ್ಲಾ ಯೋಜನೆಯ ಬಗ್ಗೆ ವಿವರಿಸಿದ್ದರು.
- ಪಿ.ರವಿಕುಮಾರ್, ಶಾಸಕ