- ರಾಜ್ಯಾದ್ಯಂತ ಸಿಬಿಎಸ್ಇ 198 ಶಾಲೆಗಳ 3000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ
ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಿಂದ ಸೆ.15 ರಿಂದ 18ರವರೆಗೆ ನಗರದ ಡಾ.ಶಾಮನೂರು ಶಿವಶಂಕರಪ್ಪ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕರ್ನಾಟಕದ ವಿವಿಧ ಸಿಬಿಎಸ್ಇ ಶಾಲೆಗಳ ವಲಯಮಟ್ಟದ 14 ವರ್ಷದೊಳಗಿನ, 17 ವರ್ಷದೊಳಗಿನ, 19 ವರ್ಷದೊಳಗಿನ ಬಾಲಕ- ಬಾಲಕಿಯರ ಕಬಡ್ಡಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಸಿಬಿಎಸ್ಇ 198 ಶಾಲೆಗಳ ಸುಮಾರು 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ಈ ಸಂದರ್ಭ ಶಾಲೆ ಮುಖ್ಯಸ್ಥ ಮಂಜುನಾಥ ರಂಗರಾಜು ಕ್ರೀಡಾಕೂಟದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅತ್ಯಂತ ಯಶಸ್ವಿಯಾಗಿ ನಡೆಸಲು ವ್ಯವಸ್ಥಿತವಾದ ಸಿದ್ಧತೆ ಮಾಡಿಕೊಂಡಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸುವ ಹಾಗೂ ವಿದ್ಯಾರ್ಥಿಗಳನ್ನು ಕ್ರೀಡಾ ಸಾಧನೆಗೆ ತಯಾರು ಮಾಡಿದ ತರಬೇತುದಾರರು ಹಾಗೂ ಪ್ರಬಂಧಕರಿಗೆ ಸಭೆ ನಡೆಸಿ, ಅತ್ಯಂತ ಶಿಸ್ತಿನಿಂದ ಹಾಗೂ ನೀತಿ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿ, ಕ್ರೀಡಾಕೂಟ ಯಶಸ್ವಿಗೊಳಿಸಲು ಸೂಚನೆ ನೀಡಿದರು.ಆರಂಭದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಬೆಂಗಳೂರಿನ ಗಂಗೋತ್ರಿ ಅಂತರ ರಾಷ್ಟ್ರೀಯ ಶಾಲೆ ಹಾಗೂ ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆ ನಡುವೆ ನಡೆದ ಪೈಪೋಟಿಯಲ್ಲಿ ಪಿಎಸ್ಎಸ್ಇಎಂಆರ್ ಶಾಲೆ 60- 37 ಅಂಕಗಳ ಅಂತರದಲ್ಲಿ ಗೆದ್ದಿದೆ. ಎರಡನೆಯದಾಗಿ ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ ರಾಣೇಬೆನ್ನೂರಿನ ಕಣ್ಣೂರು ವಿದ್ಯಾನಿಕೇತನ ತಂಡಗಳ ನಡುವೆ ನಡೆದ ಪೈಪೋಟಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯು 57-56 ಪಾಯಿಂಟ್ಗಳಿಂದ ಜಯಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯೆ ಜಿ.ಎಸ್.ವನಿತಾ, ಬಾಪೂಜಿ ಶಾಲೆಯ ದೈಹಿಕ ಶಿಕ್ಷಕ ಎಸ್.ಶಿವಯೋಗಿ ಮತ್ತು ತಂಡದವರು, ಶೈಕ್ಷಣಿಕ ಮುಖ್ಯಸ್ಥ ಎಂ.ವಾಸೀಮ್ ಪಾಷಾ, ಪ್ರೌಢಶಾಲೆ ವಿಭಾಗದ ಪಿ.ವಿ.ಪ್ರಭು ಪಿ.ವಿ, ಪ್ರಾಥಮಿಕ ವಿಭಾಗದ ಶೀಬಾರಾಣಿ, ಎಸ್ಸೆಸ್ ನ್ಯಾಷನಲ್ ಪಬ್ಲಿಕ್ ಶಾಲೆ ಪ್ರಾಚಾರ್ಯ ಬಿ.ಎನ್. ಕಮಲ್, ಉಪ ಪ್ರಾಚಾರ್ಯ ರಮೇಶ ಬಾಬು, ದೈಹಿಕ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ದಾವಣಗೆರೆಯಲ್ಲಿ ಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಿಂದ ಆಯೋಜಿಸಿರುವ ರಾಜ್ಯದ ವಿವಿಧ ಸಿಬಿಎಸ್ಇ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯ ನಡೆಯಿತು.