ಕುಷ್ಟಗಿ: ಕನ್ನಡಿಗರಾದ ನಾವು ಮನೆ ಮನಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮುಂದಾಗಬೇಕು ಎಂದು ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕನ್ನಡಪರ ಸಂಘಟನೆ ಹಾಗೂ ಇಲಾಖೆಗಳು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸದೆ ಹಬ್ಬದಂತೆ ಮನೆ ಮನಗಳಲ್ಲಿ ಆಚರಣೆ ಮಾಡಬೇಕು ಎಂದರು.
ಯುವಕರು ದೇಶಾಭಿಮಾನ ಭಾಷಾಭಿಮಾನ ಹೊಂದಬೇಕು, ಜೀವನ ಸಾಗಿಸಲು ಎಲ್ಲ ಭಾಷೆ ಕಲಿಯಬೇಕು ಆದರೆ ನಮ್ಮ ಕನ್ನಡ ಭಾಷೆ ಪೂಜಿಸುವ ಜತೆಗೆ ಪ್ರೀತಿಸಬೇಕು ನಮ್ಮ ರಾಜ್ಯದಲ್ಲಿ ಬಂದ ಅನ್ಯರಿಗೆ ಕನ್ನಡ ಕಲಿಸಬೇಕು ಎಂದರು.ಮಾಜಿ ಜಿಪಂ ಸದಸ್ಯ ಕೆ.ಮಹೇಶ ಮಾತನಾಡಿ, ನಮ್ಮ ಕರ್ನಾಟಕ ಎಲ್ಲ ಭಾಷೆಗಳಿಗೂ ಆಶ್ರಯ ಕೊಟ್ಟಿರುವ ನಾಡು, ಆದರೆ ಇಂದು ಅನ್ಯಭಾಷೆಯವರು ನಮ್ಮ ಭಾಷೆಯ ಮೇಲೆ ನಮ್ಮ ನಾಡಿನ ಜನರ ಮೇಲೆ ದಾಳಿ ಮಾಡುತ್ತಿರುವದು ಖಂಡನೀಯ ಎಂದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ದೇವರಾಜ ಹಜಾಳದಾರ ಮಾತನಾಡಿ, ಕರ್ನಾಟಕ ರಾಜ್ಯದ ನಿರ್ಮಾಣಕ್ಕೆ ಅನೇಕ ಮಹನಿಯರ ಕೊಡುಗೆ ನೀಡಿದ್ದಾರೆ. ಕರ್ನಾಟಕವಾಗಿ 70 ವರ್ಷ ಗತಿಸಿದರೂ ಸಹಿತ ನಮ್ಮ ಮೇಲೆ ಇನ್ನೂ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕರ್ನಾಟಕದಲ್ಲಿ ಶೇಕಡವಾರು ಕನ್ನಡಕ್ಕೆ ಮೀಸಲಾತಿ ನೀಡುವ ಬದಲಿಗೆ ಶೇ100ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದರು.ಸನ್ಮಾನ: ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮದ ಜಾನಪದ ಕಲಾವಿದ ಬಸಪ್ಪ ಚೌಡ್ಕಿ ಅವರಿಗೆ ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಅದ್ಧೂರಿ ಮೆರವಣಿಗೆ:ಕುಷ್ಟಗಿ ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸ್ ನಿಲ್ದಾಣ, ಮಾರುತಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಕನ್ನಡ ಧ್ವಜ ಕಟ್ಟೆಯವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ ಕಲಾತಂಡಗಳಾದ ಡೊಳ್ಳುಕುಣಿತ, ಕರಡಿ ಮಜಲು, ನಂದಿಕೋಲು ಕುಣಿತ, ಚಂಡಿ ವಾದ್ಯ ಮತ್ತು ಕಳಶ ಕುಂಭಗಳ ಮೆರವಣಿಗೆಯು ನೋಡುಗರ ಗಮನ ಸೆಳೆಯಿತು.ಈ ಸಂದರ್ಭದಲ್ಲಿ ಉಮೇಶ ಮಂಗಳೂರು, ಮರಸಣ್ಣ ತಾಳದ, ಜಿ.ಕೆ.ಹಿರೇಮಠ, ಕಿರಣಜ್ಯೋತಿ, ಶರಣಪ್ಪ ವಡಗೇರಿ, ಶಶಿಧರ ಕವಲಿ, ನೀಲಪ್ಪ ಆಡೀನ್, ಶರಣಯ್ಯ ಹಿರೇಮಠ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಕಲಾವಿದರು ಇದ್ದರು.