ಶಿರಹಟ್ಟಿ: ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ಶಿಕ್ಷಣವೇ ಹೆಬ್ಬಾಗಿಲು. ಉನ್ನತ ಮಟ್ಟಕ್ಕೆ ಹೋಗಲು ಅಕ್ಷರ ಜ್ಞಾನವೇ ಮೊದಲ ಮೆಟ್ಟಿಲು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.ಪಟ್ಟಣದ ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ೨೦೨೫- ೨೬ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಕರೀಮುನ್ನೀಸಾ ಸೈಯದ್ ಮಾತನಾಡಿ, ಉತ್ತಮ ಭವಿಷ್ಯಕ್ಕೆ ನಿರ್ದಿಷ್ಟವಾದ ಗುರಿ ಅತಿ ಮುಖ್ಯ. ಇದನ್ನು ಸಮಯದ ಮಹತ್ವದೊಂದಿಗೆ ಪ್ರಯತ್ನ ಮಾಡಿದಾಗ ಉತ್ತಮ ಸಾಧನೆ ನಮ್ಮದಾಗುತ್ತದೆ. ಪದವಿ ಕಾಲೇಜುಗಳ ಇತಿಮಿತಿಗಳಲ್ಲಿಯೂ ಸರ್ಕಾರ ಶಿಕ್ಷಣಕ್ಕೆ ನೀಡುತ್ತಿರುವ ಸೌಲಭ್ಯಗಳನ್ನು ಅರಿತು ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಉಮೇಶ ಅರಹುಣಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧಿಸುವ ಛಲ, ದೂರದೃಷ್ಟಿ ಮತ್ತು ದೃಢಸಂಕಲ್ಪ ಅಳವಡಿಸಿಕೊಂಡರೆ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು. ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಗುರಿ ಸ್ಪಷ್ಟವಾಗಿರಬೇಕು. ಆಗ ಮಾತ್ರ ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದರು.
ಗದಗ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಸಿದ್ದಲಿಂಗ ಸಜ್ಜನಶೆಟ್ಟರ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಫಕೀರೇಶ ಜಾಲಿಹಾಳ್, ಶಿವಪ್ರಸಾದ್ ಕಿನ್ನಾಳ, ಸಂತೋಷ್ ಮುರಶಿಳ್ಳಿ, ಪವಿತ್ರ ಹೂಗಾರ, ಸಿ.ಪಿ. ಕಾಳಗಿ, ಕೆ.ಎ. ಬಳಿಗೇರ, ಎಸ್.ಆರ್. ಶಿರಹಟ್ಟಿ, ಪರಶುರಾಮ ಡೊಂಕಬಳ್ಳಿ, ಮಂಜುನಾಥ ಸೊಂಟನೂರ, ಅಜ್ಜಪ್ಪ ಪಾಟೀಲ್, ಸಂದೀಪ ಕಪ್ಪತ್ತನವರ, ಸಿ.ಸಿ. ನೂರಶೆಟ್ಟರ, ಹುಮಾಯೂನ್ ಮಾಗಡಿ, ನಾಗರಾಜ್ ಲಕ್ಕುಂಡಿ, ಸುನೀಲ್ ಬುರಬುರೆ, ಗೀತಾ ಪ್ರಭು ಹಲಸೂರ, ಎಚ್.ಎಂ. ದೇವಗಿರಿ, ಫಕೀರೇಶ ರಟ್ಟಿಹಳ್ಳಿ ಇದ್ದರು.ಕಳೆದ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಜಮಾಲಸಾಬ್ ದಿನ್ನಿ, ನೈನಾಜ್ ಚಿಕ್ಕೇನಕೊಪ್ಪ, ಲಾವಣ್ಯ ಮುರಶಿಳ್ಳಿ, ನವೀನ್ ಕಮ್ಮಾರ್ ಅವರನ್ನು ಸನ್ಮಾನಿಸಲಾಯಿತು.