ದಲಿತರ ಹಕ್ಕುಗಳ ಮಂಡನೆ
ಕನ್ನಡಪ್ರಭ ವಾರ್ತೆ ಅರಸೀಕೆರೆಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕದ ದಲಿತ ಚಳುವಳಿಗೆ ೫೦ ವರ್ಷಗಳು ಸಂದಿದ್ದು ಈ ಸಂದರ್ಭದಲ್ಲಿ ಸಂಭ್ರಮೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ದಲಿತಪರ ಸಮಾಜ ಬಾಂಧವರು ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಆರ್.ಪ್ರಕಾಶ್ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜು.೧೦ ರ ಬುಧವಾರ ಬೆಂಗಳೂರಿನ ವಸಂತನಗರದ ಮಿಲ್ಲರ್ಸ್ನಲ್ಲಿರುವ ಡಾ.ಅಂಬೇಡ್ಕರ್ ಭವನದಲ್ಲಿ ಸಂಭ್ರಮೋತ್ಸವವನ್ನು ಹಮ್ಮಿಕೊಂಡಿದ್ದು ಇಲ್ಲಿ ಹಲವು ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಾಡಲಾಗುವುದು. ಅದರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಕಾಂತರಾವ್ ಆಯೋಗದ ವರದಿಯನ್ನು ಅಂಗೀಕರಿಸಿ ಅನುಷ್ಠಾನಗೊಳಿಸಬೇಕು, ಬಡವರಿಗೆ ವಸತಿ ನಿರ್ಮಾಣಕ್ಕಾಗಿ ತಲಾ ೧೦ ಲಕ್ಷ ರು. ಸಹಾಯಧನ ಮಂಜೂರು ಮಾಡಬೇಕು, ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ ಸಾಲ ಸೌಲಭ್ಯಗಳ ಗುರಿಯನ್ನು ಹೆಚ್ಚಿಸಬೇಕು, ಹಾಸ್ಟಲ್ ವಿದ್ಯಾರ್ಥಿಗಳ ಭೋಜನಾ ವೆಚ್ಚವನ್ನು ಹೆಚ್ಚಿಸುವುದು ಸೇರಿ ಹಲವು ಹಕ್ಕೊತ್ತಾಯಗಳನ್ನು ಮಾಡಲಾಗುವುದು ಎಂದು ಹೇಳಿದರು.ರಾಜ್ಯ ವಿಭಾಗೀಯ ಸಂಚಾಲಕ ಜಾಜೂರು ಭಾಸ್ಕರ್ ಮಾತನಾಡಿ, ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ೫೦ ಸಾವಿರಕ್ಕೂ ಹೆಚ್ಚಿನ ಮತದಾರರಿದ್ದು ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ನಾಲ್ಕು ಬಾರಿಯಿಂದ ಮತ ನೀಡಿ ಸಹಕರಿಸಿದ್ದು ಸಮಾಜದ ಏಳಿಗೆಗೆ ಸಹಕರಿಸುವ ನಿಟ್ಟಿನಲ್ಲಿ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ಒತ್ತಾಯಿಸಲಾಗುವುದು ಎಂದರು.
ತಾಲೂಕು ಅಧ್ಯಕ್ಷ ಬಾಣಾವರ ಮಹೇಶ್, ನಗರ ಘಟಕದ ಅಧ್ಯಕ್ಷ ಕೆಜೆಪಿ ಅರುಣ್, ಗೌರವ ಅಧ್ಯಕ್ಷ ರಂಗಾಪುರ ಚಲ್ಲಾಪುರ, ಕಾರ್ಮಿಕ ಘಟಕದ ಅಧ್ಯಕ್ಷ ಚಿಕ್ಕಾರಹಳ್ಳೀ ನಾಗರಾಜ್, ದುಮ್ಮೇನಹಳ್ಳಿ ಕುಮಾರ್, ನರಸೀಪುರ ಕೊಟ್ರೇಶ್, ಕಾಂತರಾಜ್, ಶಂಕರಪ್ಪ, ಅರೇಹಳ್ಳಿ ಪ್ರಭುಕುಮಾರ್ ಇದ್ದರು.