ರೋಟರಿ ಮಡಿಕೇರಿ ವುಡ್ಸ್ನಿಂದ ಮಹಿಳಾ ದಿನಾಚರಣೆ ನಡೆಯಿತು. ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.
ಕ್ಲಬ್ ನ ಮಹಿಳಾ ಸದಸ್ಯರಾದ ರೊ. ಪ್ರಮಿಳಾ ಶೆಟ್ಟಿ, ರೊ. ಲೀಲಾವತಿ, ರೊ. ಗೀತಾ ಸೂರ್ಯ, ರೊ.ಶಿಲ್ಪಾ ಸತೀಶ್, ರೊ. ಪದ್ಮಾ ಗಿರಿ ಹಾಗೂ ರೊ.ವಿಶಾಲಾಕ್ಷಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ರೊ.ವಸಂತ್ ಕುಮಾರ್ ಮಾತನಾಡಿ, ನಾವೆಲ್ಲರೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಬೇಕು. ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರೇರೇಪಿಸುವಂತೆ ಕರೆ ನೀಡಿದರು.
ಮಹಿಳಾ ಸದಸ್ಯರನ್ನು ಸನ್ಮಾನಿಸಲು ನಮಗೆ ಹೆಮ್ಮೆಯಾಗುತ್ತದೆ. ಕ್ಲಬ್ ಗೆ ಮಹಿಳೆಯರು ಅಪಾರ ಕೊಡುಗೆ ನೀಡಿದ್ದು, ಅವರು ಕ್ಲಬ್ ನ ಶಕ್ತಿಯೂ ಹೌದು ಎಂದರು.
ರೊ.ಪದ್ಮಗಿರಿ ಮಾತನಾಡಿ, ಪುರುಷ ಪ್ರಧಾನವಾಗಿರುವ ಇಂದಿನ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ, ಹಕ್ಕುಗಳನ್ನು ನೀಡಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬೇಕು. ವರದಕ್ಷಿಣೆ, ಲೈಂಗಿಕ ಕಿರುಕುಳದಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವಲ್ಲಿ ರೋಟರಿ ಸಂಸ್ಥೆ ಮತ್ತಷ್ಟು ಕೆಲಸಗಳನ್ನು ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಹಿರಿಯ ಸದಸ್ಯೆ ರೊ.ಲೀಲಾವತಿ ಮಾತನಾಡಿ, ಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಬೇಕು, ಮಹಿಳೆಯರಿಗೆ ಶಿಕ್ಷಣ ಅತ್ಯಗತ್ಯ. ಮಹಿಳೆಯರ ಮೇಲಿನ ದೌರ್ಜನ್ಯ ವಿಶ್ವದಲ್ಲಿ ಕೊನೆಯಾಗಲೇಬೇಕು. ನಮ್ಮನ್ನು ಸನ್ಮಾನಿಸಿದ್ದು ಬಹಳ ಸಂತೋಷವಾಗಿದೆ, ಈ ಪರಂಪರೆ ಮುಂದುವರಿಯಲಿ. ರೋಟರಿ ಕ್ಲಬ್ ನಲ್ಲಿ ಮಹಿಳೆಯರಿಗೆ ಆರಂಭದ ದಿನದಿಂದಲೂ ಅಪಾರ ಗೌರವ ಲಭ್ಯವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೊ.ವಿಶಾಲಾಕ್ಷಿ ಮಾತನಾಡಿ, ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳು ಸಿಗಬೇಕು ಎಂದರು.
ರೊ.ಪ್ರಮಿಳಾ ಶೆಟ್ಟಿ ಮಾತನಾಡಿ, ಮಹಿಳೆಯರು ಯಾವುದಕ್ಕೂ ಕಡಿಮೆಯಿಲ್ಲ, ಇಂದು ಯಾವುದೇ ಕ್ಷೇತ್ರದಲ್ಲಿ ನಾವು ಹೋದಾಗ ಮಹಿಳೆಯರನ್ನು ಕಾಣಬಹುದು. ಇದು ಸ್ವಲ್ಪ ಮಟ್ಟಿಗೆ ಸಾಮಾಜಿಕ ಅಸಮತೋಲನವನ್ನು ಹೋಗಲಾಡಿಸಿದೆ. ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ನಿರೂಪಿಸಬೇಕು, ಆ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಹಿರಿಯ ರೋಟರಿ ಸಲಹೆಗಾರ ರೊ.ಬಿ.ಜಿ.ಅನಂತಶಯನ ಅವರು ಮಾತನಾಡಿ, ಪ್ರತಿಯೊಬ್ಬ ಮಹಿಳೆ ಸಾಹಿತ್ಯ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತನ್ನನ್ನು ತಾನು ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷವಾಗಿ ಮಹಿಳಾ ಸದಸ್ಯರಿಗೆ ಗೌರವ ನೀಡುವ ಉದ್ದೇಶದಿಂದ ಸಭೆಯಲ್ಲಿ ರೊ.ಲೀಲಾವತಿ ಗೌರವ ಅಧ್ಯಕ್ಷರಾಗಿ ಹಾಗೂ ರೊ.ಗೀತಾ ಸೂರ್ಯ ಅವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಮಹಿಳೆಯರಿಂದಲೇ ಕಾರ್ಯಕ್ರಮ ನಡೆದದ್ದು ವಿಶೇಷವಾಗಿತ್ತು. ರೋಟರಿ ವುಡ್ಸ್ ಕಾರ್ಯದರ್ಶಿ ರೊ.ಹರೀಶ್ ಕಿಗ್ಗಾಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.