ಕಾರ್ಕಳ: ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲಿನ ದಾಳಿ ಯತ್ನ ಖಂಡನೀಯವೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.
ಶೂ ಎಸೆಯಲು ಪ್ರಯತ್ನಿಸಿದ ವ್ಯಕ್ತಿ ವೃತ್ತಿಯಲ್ಲಿ ವಕೀಲನಾಗಿದ್ದು, ಬಿಜೆಪಿ ಪರವಾಗಿರುವ ಸಂಘಟನೆಗಳ ಸದಸ್ಯನಾಗಿರುವುದಾಗಿ ವರದಿಯಾಗಿದೆ. ಬಿಜೆಪಿ ಪರ ಸಂಘಟನೆಗಳ ಅಸಹಿಷ್ಣುತೆ ಮಿತಿ ಮೀರಿದೆ, ಆದರೆ ಅದನ್ನು ನಿಯಂತ್ರಿಸಬೇಕಾದ ಕೇಂದ್ರ ಸರ್ಕಾರವೇ ಅವರ ಬೆನ್ನಿಗೆ ನಿಂತಿದೆ ಎಂದು ಬೇಲಾಡಿ ಆರೋಪಿಸಿದ್ದಾರೆ.
ಈ ಘಟನೆಗೆ ವಿರೋಧ ಪಕ್ಷಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದರೂ, ಆಡಳಿತ ಪಕ್ಷದ ನಾಯಕರಾದ ಬಿಜೆಪಿ ಸಂಸದರು, ಮಂತ್ರಿಗಳು, ಶಾಸಕರು ಮೌನವಾಗಿರುವುದು ಮೌನಂ ಸಮ್ಮತಿ ಲಕ್ಷಣಮ್ ಎಂಬಂತೆ ಕಾಣುತ್ತದೆ. ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಸಾಮಾನ್ಯ ವಿಷಯಗಳ ಮೇಲೂ ಹೇಳಿಕೆ ನೀಡುವವರು, ಆದರೆ ಈ ಗಂಭೀರ ಘಟನೆಯ ಕುರಿತು ಮೌನವಾಗಿರುವುದು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಟೀಕಿಸಿದರು.ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಈ ಘಟನೆಯನ್ನು ಸಂಭ್ರಮಿಸುತ್ತಿರುವುದು ಅತ್ಯಂತ ವಿಷಾದನೀಯ. ಇದು ಬಿಜೆಪಿಯ ನಿಜವಾದ ಮನಸ್ಥಿತಿಯ ಪ್ರತಿಫಲನವಾಗಿದೆ ಎಂದು ಪ್ರದೀಪ್ ಬೇಲಾಡಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.