ಉಡುಪಿ : ಕೃಷ್ಣನಗರಿ ಉಡುಪಿಯಲ್ಲಿ ಶುಕ್ರವಾರ ಶ್ರೀ ಕೃಷ್ಣಜಯಂತಿಯನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯಾಗಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು, ದಿನವಿಡೀ ಉಪವಾಸ, ಜಪ, ಪಾರಾಯಣಗಳಲ್ಲಿ ಕಳೆದ ಕೃಷ್ಣಭಕ್ತರು ಸಾವಿರಾರು ಸಂಖ್ಯೆಯಲ್ಲಿ ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭೇಟಿ ನೀಡಿ, ಅಷ್ಟಮಿಯ ಕೃಷ್ಣನನ್ನು ವೀಕ್ಷಿಸಿದರು.
ಶನಿವಾರ ಮಧ್ಯಾಹ್ನ 3 ಗಂಟೆಯ ನಂತರ ರಥಬೀದಿಯಲ್ಲಿ ವೈಭವದ ಶ್ರೀ ಕೃಷ್ಣ ಲೀಲೋತ್ಸವ - ಮೊಸರುಕುಡಿಕೆ ಉತ್ಸವ ನಡೆಯಲಿದೆ. ರಥಬೀದಿಯಲ್ಲಿ ಹಾಕಲಾಗಿರುವ ಗುಜ್ಜಿ (ಕಮಾನು)ಗಳಲ್ಲಿ ಕಟ್ಟಿರುವ ಪಂಚಕಜ್ಜಾಯ, ಮೊಸರು, ಓಕುಳಿ ನೀರು ಇತ್ಯಾದಿಗಳಿರುವ ಮಡಕೆಗಳನ್ನು ಗೊಲ್ಲವೇಷಧಾರಿಗಳು ಕೊಲಿನಿಂದ ಒಡೆದು ಬಾಯಿಬಡಿದುಕೊಂಡು ಕುಣಿಯುತ್ತಾ ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸುತ್ತಾರೆ.ಇಲ್ಲಿ ನೂರಾರು ಮಂದಿ ಹುಲಿವೇಷಧಾರಿಗಳ ಅಬ್ಬರದ ಕುಣಿತ ಪ್ರದರ್ಶನ ಉತ್ಸವದ ಪ್ರದಾನ ಆಕರ್ಷಣೆಯಾಗಿರುತ್ತದೆ, ಇದೇ ಸಂದರ್ಭದಲ್ಲಿ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹವನ್ನಿಟ್ಟು ಮಹಾಪೂಜೆ, ರಥೋತ್ಸವ ನಡೆಸಲಾಗುತ್ತದೆ, ನಂತರ ಆ ಮೃಣ್ಮಯ ವಿಗ್ರಹವನ್ನು ಮಧ್ವಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಳ್ಳುತ್ತದೆ.
ಕೃಷ್ಣನ ನೈವೇದ್ಯಕ್ಕಾಗಿ ಸ್ವತಃ ಪರ್ಯಾಯ ಶ್ರೀ ವೇದವರ್ಧನ ತೀರ್ಥರು ವಿವಿಧ ಬಗೆಯ ಲಡ್ಡುಗಳ ತಯಾರಿಗೆ ಸ್ವತಃ ಉಂಡೆಗಟ್ಟುವ ಮೂಲಕ ಚಾಲನೆ ನೀಡಿದರು. ಅವರಿಗೆ ಮಠದ ದಿವಾಣರಾದ ವಿದ್ವಾನ್ ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರ್ ಸಾಥ್ ನೀಡಿದರು.