ಜಪ್ತಿಯಾದ ವಾಹನದ ಸುಪರ್ದಿ ಬಗ್ಗೆ ಇಲ್ಲ ನಿರ್ದಿಷ್ಟ ನಿಯಮ : ಕೇಂದ್ರ ಸರ್ಕಾರ ವಿಫಲ

KannadaprabhaNewsNetwork | Updated : Aug 30 2024, 07:35 AM IST

ಸಾರಾಂಶ

ಮಾದಕ ದ್ರವ್ಯ ಸಾಗಣೆಗೆ ಬಳಸಿದ ಆರೋಪದ ಮೇಲೆ ಜಪ್ತಿ ಮಾಡಲಾದ ವಾಹನವನ್ನು ಪ್ರಕರಣದ ಇತ್ಯರ್ಥವಾಗುವರೆಗೆ ಮಾಲೀಕನ ಸುಪರ್ದಿಗೆ ನೀಡುವ ವಿಚಾರದಲ್ಲಿ ನಿರ್ದಿಷ್ಟ ನಿಯಮ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು : ಮಾದಕ ದ್ರವ್ಯ ಸಾಗಣೆಗೆ ಬಳಸಿದ ಆರೋಪದ ಮೇಲೆ ಜಪ್ತಿ ಮಾಡಲಾದ ವಾಹನವನ್ನು ಪ್ರಕರಣದ ಇತ್ಯರ್ಥವಾಗುವರೆಗೆ ಮಾಲೀಕನ ಸುಪರ್ದಿಗೆ ನೀಡುವ ವಿಚಾರದಲ್ಲಿ ನಿರ್ದಿಷ್ಟ ನಿಯಮ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.

ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಜಪ್ತಿ ಮಾಡಿರುವ ಕಂಟೈನರ್‌ ಅನ್ನು ತನ್ನ ಸುಪರ್ದಿಗೆ ನೀಡಲು ಕೋರಿ ಅದರ ಮಾಲೀಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಿಚಾರಣೆ ನಡೆಸಿ ನೀಡಿರುವ ತೀರ್ಪುನಲ್ಲಿ ಕೇಂದ್ರ ಸರ್ಕಾರದ ಈ ಲೋಪವು ಬಹಿರಂಗವಾಗಿದೆ.

ಕೇಂದ್ರ ಸರ್ಕಾರವು 2 ಬಾರಿ ನೋಟಿಫಿಕೇಷನ್‌ ಹೊರಡಿಸಿದ್ದರೂ, ಅದರಲ್ಲಿ ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡು ವಾಹನದ ಮಧ್ಯಂತರ ಬಿಡುಗಡೆ ಕುರಿತಂತೆ ನಿರ್ದಿಷ್ಟ ನಿಯಮ, ಮಾರ್ಗಸೂಚಿ ರಚನೆ ಮಾಡಿಲ್ಲ ಹಾಗೂ ಸ್ಪಷ್ಟನೆ ನೀಡಿಲ್ಲ. ಒಂದು ಅಧಿಸೂಚನೆಯಲ್ಲಿ ಸ್ಪಷ್ಟನೆ ಇಲ್ಲದಕ್ಕೆ ಅದನ್ನು ರದ್ದುಪಡಿಸಿದ ಕೇಂದ್ರ ಸರ್ಕಾರ, ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿಯೂ ಸಹ ವಾಹನ ಬಿಡುಗಡೆಗೆ ನಿರ್ದಿಷ್ಟ ನಿಯಮ ರಚನೆ ಮಾಡದಿರುವುದು ಹಾಗೂ ಸ್ಪಷ್ಟನೆ ನೀಡದಿರುವುದು ಕಂಡುಬಂದಿದೆ.

ಇದೇ ಕಾರಣ ಪರಿಗಣಿಸಿ ಜಪ್ತಿ ಮಾಡಲಾದ ವಾಹನವನ್ನು ಪ್ರಕರಣದ ಇತ್ಯರ್ಥವಾಗುವರೆಗೆ ಮಾಲೀಕನ ಮಧ್ಯಂತರ ಸುಪರ್ದಿಗೆ ನೀಡಲು ಕೋರ್ಟ್‌ಗೆ ಅಧಿಕಾರವಿದೆ ಎಂದು ಹೈಕೋರ್ಟ್‌ ತೀರ್ಮಾನಿಸುತ್ತದೆ.

ಪ್ರಕರಣದ ಹಿನ್ನೆಲೆ:

ರಾಜಸ್ಥಾನದ ಜೈಪುರ ನಿವಾಸಿ ಕಜ್ವಲ್‌ ಜೀತ್‌ ಕೌರ್‌ ಎಂಬುವರು ಸರಕು ಕಂಟೈನರ್‌ ವಾಹನವೊಂದರ ಮಾಲೀಕರಾಗಿದ್ದಾರೆ. 2023ರಲ್ಲಿ ಲೂಧಿಯಾನ, ಪಂಜಾಬ್‌, ತ್ರಿಪುರ ಮತ್ತು ತಮಿಳುನಾಡಿಗೆ ಬಟ್ಟೆಗಳನ್ನು ಸಾಗಿಸುತ್ತಿದ್ದ ಆ ಕಂಟೈನರ್‌ ಅನ್ನು ವಿಜಯಪುರದ ಶೈರಾಡನ್‌ ಚೆಕ್‌ ಪೋಸ್ಟ್‌ ಬಳಿ ತಡೆದಿದ್ದ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಚಾಲಕನ ಸೀಟಿನ ಕಳಗೆ 10 ಪ್ಲಾಸ್ಟಿಕ್‌ ಚೀಲಗಳಲ್ಲಿ ಗಾಂಜಾ ಪತ್ತೆಯಾಗಿದ್ದವು. ಗಾಂಜಾ ಚೀಲ, ವಾಹನವನ್ನು ಜಪ್ತಿ ಮಾಡಲಾಗಿತ್ತು.

ನಂತರ ಕಜ್ವಲ್‌ ಜೀತ್‌ ಕೌರ್‌, ವಾಹನದ ಮಧ್ಯಂತರ ಬಿಡುಗಡೆಗೆ ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ 2024ರ ಜು10ರಂದು ತಿರಸ್ಕರಿಸಿತ್ತು. ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ (ಎಚ್‌ಡಿಪಿಎಸ್‌) ಕಾಯ್ದೆಯಡಿ ಜಪ್ತಿ ಮಾಡಲಾದ ವಾಹನದ ಬಿಡುಗಡೆ ವಿಚಾರದಲ್ಲಿ 2015ರ ಜ.16 ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿದ್ದ ಕೇಂದ್ರ ಸರ್ಕಾರವು 2022ರ ಡಿ.23ರಂದು ಹೊಸ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ವಾಹನ ಬಿಡುಗಡೆಗೆ ತನಗೆ ಅಧಿಕಾರವಿಲ್ಲ ಎಂದು ಸೆಷನ್ಸ್‌ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು. ಇದರಿಂದ ವಾಹನ ಮಾಲೀಕ ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಪೀಠ, 2015ರ ಜ.16ರ ಅಧಿಸೂಚನೆಯಲ್ಲಿ ವಾಹನದ ಮಧ್ಯಂತರ ಬಿಡುಗಡೆಗೆ ಯಾವುದೇ ನಿಯಮಗಳು ರಚನೆಯಾಗಿಲ್ಲ ಮತ್ತು ಸ್ಪಷ್ಟನೆ ಇಲ್ಲದಿರುವುದು ಕಂಡು ಬಂದಿತ್ತು. ಇದರಿಂದ ಆ ಅಧಿಸೂಚನೆ ರದ್ದುಪಡಿಸಿದ್ದ ಕೇಂದ್ರ ಸರ್ಕಾರ, 2022ರ ಡಿ.23ರಂದು ಹೊಸ ಅಧಿಸೂಚನೆ ಹೊರಡಿಸಿದೆ. ಅದರಲ್ಲೂ ಕೇಂದ್ರ ಸರ್ಕಾರವು ವಾಹನದ ಮಧ್ಯಂತರ ಬಿಡುಗಡೆಗೆ ಯಾವುದೇ ನಿಯಮ ರಚನೆ ಮಾಡಿಲ್ಲ ಹಾಗೂ ಸ್ಪಷ್ಟನೆ ನೀಡಿಲ್ಲ. ಇನ್ನೂ ಎನ್‌ಡಿಪಿಎಸ್‌ ಕಾಯ್ದೆ ಸೆಕ್ಷನ್‌ 60(3) ಮತ್ತು 63ರ ಓದಿದರೆ, ವಾಹನದ ಮುಟ್ಟುಗೋಲು ಮಾಡಲು ವಿಚಾರಣಾ ನ್ಯಾಯಾಲಯವು ಆದೇಶ ಮಾಡಬಹುದಾಗಿದೆ. ಅದು ಬಿಟ್ಟು ವಾಹನದ ಮಧ್ಯಂತರ ಬಿಡುಗಡೆ ಸಂಬಂಧ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಇದೇ ಮಾದರಿಯ ಮತ್ತೊಂದು ಪ್ರಕರಣದಲ್ಲಿ ವಾಹನ ಬಿಡುಗಡೆಗೆ ಆದೇಶಿಸಲು ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ ಅಥವಾ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅಧಿಕಾರವಿದೆ ಎಂಬುದಾಗಿ ಹೈಕೋರ್ಟ್‌ ವಿಭಾಗೀಯ ಪೀಠ ಆದೇಶಿಸಿದೆ. ಇನ್ನೂ ಡಿಸಿಸಿಯು ಜಪ್ತಿ ಮಾಡಿದ ಮಾದಕ ವಸ್ತುಗಳ ವಿಲೇವಾರಿ ಮತ್ತು ಹಸ್ತಾಂತದ ಕುರಿತು ನಿರ್ಣಯ ತೆಗೆದುಕೊಳ್ಳಬಹುದಾಗಿದೆ. 

ಹಾಗಾಗಿ, ಕೇಂದ್ರ ಸರ್ಕಾರದ ಎರಡೂ ಅಧಿಸೂಚನೆಯಲ್ಲಿ ವಾಹನದ ಮಧ್ಯಂತರ ಬಿಡುಗಡೆಗೆ ಯಾವುದೇ ನಿಯಮ ಹಾಗೂ ಸ್ಪಷ್ಟನೆ ಕಂಡುಬಾರದ ಹಿನ್ನೆಲೆಯಲ್ಲಿ ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶ ಜಾರಿಯಲ್ಲಿರುತ್ತದೆ. ಅದರಂತೆ ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ಬಳಕೆಯಾದ ವಾಹನವನ್ನು ಪ್ರಕರಣದ ಇತ್ಯರ್ಥವಾಗುವರೆಗೆ ಮಾಲೀಕನ ಮಧ್ಯಂತರ ಸುಪರ್ದಿಗೆ ಬಿಡುಗಡೆ ಮಾಡಲು ಎಚ್‌ಡಿಪಿಎಸ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅಧಿಕಾರವಿದೆ ಎಂದು ಆದೇಶಿಸಿರುವ ನ್ಯಾಯಪೀಠ, ಅರ್ಜಿದಾರನ ಮಧ್ಯಂತರ ಸುಪರ್ದಿಗೆ ವಾಹನ ನೀಡುವಂತೆ ಪ್ರಕರಣದ ತನಿಖಾಧಿಕಾರಿಗಳಿಗೆ ನಿರ್ದೇಶಿಸಿದೆ.

Share this article