ಹೈಸ್ಪೀಡ್‌ ರೈಲು ಕರ್ನಾಟಕಕ್ಕೆ ಗೇಮ್‌ ಚೇಂಜರ್‌: ಅಶ್ವಿನಿ

KannadaprabhaNewsNetwork |  
Published : Feb 03, 2026, 02:00 AM IST
ಅಶ್ವಿನ್‌ ವೈಷ್ಣವ್‌ | Kannada Prabha

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆಗೆ ಬರೋಬ್ಬರಿ ₹7,748 ಕೋಟಿ ಅನುದಾನ ಮೀಸಲಿಟ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ₹184 ಕೋಟಿ ಹೆಚ್ಚುವರಿಯಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ್‌ ವೈಷ್ಣವ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ/ನವದೆಹಲಿ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆಗೆ ಬರೋಬ್ಬರಿ ₹7,748 ಕೋಟಿ ಅನುದಾನ ಮೀಸಲಿಟ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ₹184 ಕೋಟಿ ಹೆಚ್ಚುವರಿಯಾಗಿದೆ. ಈ ನಡುವೆ ಹೈಸ್ಪೀಡ್‌ ಟ್ರೈನ್‌ಗಳು ರಾಜ್ಯದಲ್ಲಿ ಗೇಮ್‌ ಚೇಂಜರ್‌ನಂತೆ ಕಾರ್ಯ ನಿರ್ವಹಿಸಲಿವೆ. ರಾಜ್ಯದ ಅಭಿವೃದ್ಧಿಗೆ ಹೇರಳ ಕೊಡುಗೆ ನೀಡಲಿವೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ್‌ ವೈಷ್ಣವ್‌ ತಿಳಿಸಿದರು.

ದೆಹಲಿಯಿಂದ ವರ್ಚುವಲ್‌ ಮಾಧ್ಯಮಗೋಷ್ಠಿ ನಡೆಸಿದ ಅವರು, ಕರ್ನಾಟಕಕ್ಕೆ ಈ ವರ್ಷ ₹7,748 ಕೋಟಿ ಹಂಚಿಕೆ ಮಾಡಲಾಗಿದೆ. 53 ಸಾವಿರ ಕೋಟಿ ರು.ಗಳ ಯೋಜನಾ ಕಾಮಗಾರಿಗಳು ನಡೆಯುತ್ತಿವೆ. ಕಳೆದ ಸಲಕ್ಕಿಂತ ಈ ಸಲ ಹೆಚ್ಚಿನ ಅನುದಾನ ನೀಡಲಾಗಿದೆ. 2009-14ರ ವರೆಗೆ ಯುಪಿಎ ಸರ್ಕಾರ ಇದ್ದಾಗ ಪ್ರತಿ ವರ್ಷ ಸರಾಸರಿ ₹835 ಕೋಟಿ ಮಾತ್ರ ನೀಡಲಾಗುತ್ತಿತ್ತು ಎಂದರು.

ರೈಲು ಮಾರ್ಗ ನಿರ್ಮಾಣ, ಜೋಡಿ ಹಳಿ, ವಿದ್ಯುದ್ದೀಕರಣ ಸೇರಿದಂತೆ ಮೂಲಸೌಕರ್ಯಗಳಿಗೆ ಅನುದಾನ ನೀಡಲಾಗುತ್ತಿದೆ. ಜತೆಗೆ ರೈಲ್ವೆ ಪ್ರಯಾಣ ಸುರಕ್ಷಿತ ಹಾಗೂ ಭದ್ರತೆಯ ಭಾವ ಕಲ್ಪಿಸುವುದಾಗಿದೆ ಎಂದರು.

ಗೇಮ್‌ ಚೇಂಜರ್‌ ರೈಲು:

ಕರ್ನಾಟಕಕ್ಕೆ ಎರಡು ಹೈಸ್ಪೀಡ್‌ ರೈಲು ಘೋಷಿಸಲಾಗಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದ್ರಾಬಾದ್‌ ಮಾರ್ಗದಲ್ಲಿ ಹೈಸ್ಪೀಡ್‌ ರೈಲು ಘೋಷಿಸಲಾಗಿದೆ. ಚೆನ್ನೈಯಿಂದ ಬೆಂಗಳೂರಿಗೆ ಬರೀ 1.30 ಗಂಟೆಯಲ್ಲೇ ಬರಬಹುದು; ಹೋಗಬಹುದು. ಇನ್ನು ಬೆಂಗಳೂರು-ಹೈದ್ರಾಬಾದ್‌ ನಡುವಿನ ಪ್ರಯಾಣದ ಅವಧಿ ಬರೀ 2 ಗಂಟೆ. ಈ ಎರಡು ಹೊಸ ರೈಲುಗಳ ಸಂಚಾರದಿಂದ ಸಾಕಷ್ಟು ಬದಲಾವಣೆಯಾಗುತ್ತದೆ. ಎರಡು ನಗರಗಳಲ್ಲಿ ಬಹಳಷ್ಟು ಬದಲಾವಣೆ ತರುವಲ್ಲಿ ಸಂಶಯವಿಲ್ಲ. ರಾಜ್ಯದಲ್ಲಿ ಹೈಸ್ಪೀಡ್ ಟ್ರೈನ್ ಕಾರಿಡಾರ್ ಮಾಡಲಾಗುತ್ತದೆ ಎಂದು ಹೇಳಿದರು.

ಈ ರೈಲು ಓಡಾಟ ಬೆಂಗಳೂರಿನಲ್ಲಿ ಉತ್ಪಾದನೆ, ಐಟಿ ಸೇವೆ ಉತ್ತೇಜಿಸಲಿದೆ. ಕರ್ನಾಟಕಕ್ಕೆ ಈ ಎರಡು ರೈಲುಗಳು ಗೇಮ್‌ ಚೇಂಜರ್‌ ಆಗಿ ಕೆಲಸ ಮಾಡುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೂರ್ಣ ಮಾಹಿತಿ ಬಂದಿಲ್ಲ:

ಈ ನಡುವೆ ಹುಬ್ಬಳ್ಳಿಯ ರೈಲ್‌ ಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಚ್ಚುವರಿ ಮಹಾಪ್ರಬಂಧಕ ಪಿ.ಅನಂತಯ್ಯ ಮಾತನಾಡಿ, ಕರ್ನಾಟಕಕ್ಕೆ ಕಳೆದ ಸಲಕ್ಕಿಂತ ₹184 ಕೋಟಿ ಹೆಚ್ಚುವರಿ ಅನುದಾನ ದೊರೆತಿದೆ. ಆದರೆ, ಯಾವ್ಯಾವ ಯೋಜನೆಗಳಿಗೆ ಎಷ್ಟೇಷ್ಟು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ರೈಲ್ವೆ ಮಂಡಳಿಯಿಂದ ಇನ್ನಷ್ಟು ಮಾಹಿತಿ ಬರಬೇಕಿದೆ. ಅದು ಬರಲು ಇನ್ನು ಎರಡ್ಮೂರು ದಿನಗಳು ಬೇಕಾಗುತ್ತದೆ. ಅದು ಬಂದ ನಂತರವೇ ಯಾವ ಯೋಜನೆಗೆ ಎಷ್ಟು ಅನುದಾನ ಹಂಚಿಕೆಯಾಗಿದೆ. ಹೊಸ ಮಾರ್ಗ, ಹಳೆ ಕಾಮಗಾರಿಗಳಿಗೆಷ್ಟು ಎಂಬ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಬ್ಬ ಧೈರ್ಯವಂತ ಬಹುಮತ ಸೃಷ್ಟಿಸಬಲ್ಲ: ಡಿಕೆಶಿ
ಮೋದಿ ದ್ರೋಹಿ ಎಂದ ನಸೀರ್‌: ಕೋಲಾಹಲ