ಗಜೇಂದ್ರಗಡ ಪಟ್ಟಣ ಹಾಗೂ ಸುತ್ತಲಿನ ಕೆಲ ಗ್ರಾಮದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಜಿಪಂ ಸಿಇಒ ಭರತ್ ಎಸ್. ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿದರು.
ಗಜೇಂದ್ರಗಡ: ಪಟ್ಟಣ ಹಾಗೂ ಸುತ್ತಲಿನ ಕೆಲ ಗ್ರಾಮದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಜಿಪಂ ಸಿಇಒ ಭರತ್ ಎಸ್. ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿದರು.
ಪಟ್ಟಣ ಸಮೀಪದ ಕಾಲಕಾಲೇಶ್ವರ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದ ವೇಳೆ ೯ನೇ ತರಗತಿಯಲ್ಲಿ ೯೮% ಪ್ರತಿಶತ ಸಾಧನೆ ಮಾಡಿದ್ದಾಳೆ ಎಂದು ವಸತಿ ನಿಲಯದ ಶಿಕ್ಷಕರು ಸಿಇಒ ಅವರಿಗೆ ವಿದ್ಯಾರ್ಥಿಯನ್ನು ಪರಿಚಯಿಸಿದರು. ಈ ವೇಳೆ ವಿದ್ಯಾರ್ಥಿನಿಗೆ ಸಿಇಒ ಅವರು, ೧೦ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮಳಾಗಿ ತೇರ್ಗಡೆ ಹೊಂದುವಂತೆ ಶುಭ ಹಾರೈಸಿದಾಗ ಜಿಲ್ಲೆಗೆ ಪ್ರಥಮ ಬೇಡ ಸರ್, ರಾಜ್ಯಕ್ಕೆ ಪ್ರಥಮ ಬರುತ್ತೇನೆ ಎಂದು ವಿದ್ಯಾರ್ಥಿನಿ ಭರವಸೆಯ ನುಡಿಗಳನ್ನಾಡಿದಾಗ ಸಿಇಒ ಅವರು ವಿದ್ಯಾರ್ಥಿಯ ಮಾತು ಕೇಳಿ ನಾನೇ ಚಿಕ್ಕವನಾದೆ ಎಂದು ವಿದ್ಯಾರ್ಥಿನಿಗೆ ಬೆನ್ನು ತಟ್ಟಿ ಶುಭ ಕೋರಿದರು. ಬಳಿಕ ವಸತಿ ನಿಲಯದ ಕಟ್ಟಡ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆಯೇ ಎಂದು ತಿಳಿಯಲು ಸ್ವತಃ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಕುಳಿತು ಶಿಕ್ಷಕರ ಪಾಠ ಆಲಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಉಪಾಹಾರ ಸವಿದು ವಸತಿ ನಿಲಯದ ಆಹಾರ ಗುಣಮಟ್ಟ ಮತ್ತು ವಸತಿ ನಿಲಯದ ಕಟ್ಟಡ ಪರಿಶೀಲಿಸಿದರು. ಬಳಿಕ ತಾಲೂಕಿನ ಶಿಕ್ಷಕರಿಗೆ ಜಿಲ್ಲೆಯ ಫಲಿತಾಂಶ ಹೆಚ್ಚಿಸಲು ಸೂಚನೆ ನೀಡಿದರು.ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ತಾಲೂಕಿನ ನಿಡಗುಂದಿ ಹಾಗೂ ಮಾರನಬಸರಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದರು.ನಿಡಗುಂದಿ ಗ್ರಾಮದ ಸೊಬಗಿನ ಅವರ ಹೊಲದಿಂದ ಕೆಂಪಯ್ಯನವರ ಹೊಲದವರೆಗೆ ೨.೨೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಅಭಿವೃದ್ಧಿ ಕಾರ್ಯವು ಕ್ರಿಯಾಯೋಜನೆಯಂತೆ ರಸ್ತೆ ನಿರ್ಮಾಣವಾಗಿದೆಯೇ ಎಂಬುದನ್ನು ಕಡತ ಪರಿಶೀಲಿಸಿದರು. ಬಳಿಕ ಗ್ರಾಮದ ಸಂಜೀವಿನಿ ವರ್ಕ್ ಶೆಡ್ ಮತ್ತು ಸಿಸಿ ರಸ್ತೆ ನಿರ್ಮಾಣ ಹಾಗೂ ಸರ್ಕಾರಿ ಕಾಲೇಜಿನಲ್ಲಿ ನಿರ್ಮಿಸಿದ ಪಿಂಕ್ ಶೌಚಾಲಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಅವಲೋಕಿಸಿ, ಮಾರಣಬಸರಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಗ್ರಂಥಾಲಯ ಕಟ್ಟಡಕ್ಕೆ ಬೇಟಿ ನೀಡಿದ ಸಿಇಒ ಭರತ ಎಸ್ ಅವರು, ಗ್ರಂಥಾಲಯದ ಪುಸ್ತಕಗಳ ಸಂಗ್ರಹ ಕೋಣೆ, ಓದುಗರಿಗೆ ಅನುಕೂಲಕರವಾಗಿರುವ ಪೀಠೋಪಕರಣಗಳ ಗುಣಮಟ್ಟ, ಗ್ರಂಥಾಲಯದಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ಸೇರಿ ಅಗತ್ಯ ಮಾಹಿತಿ ಪಡೆದುಕೊಂಡರು. ಬಳಿಕ ನರೇಗಾ ಕಾಮಗಾರಿಗಳಿಂದ ಗ್ರಾಮಸ್ಥರಿಗೆ ಅನುಕೂಲತೆಯಾಗಿರುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯವನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ಗಜೇಂದ್ರಗಡ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ, ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ಫಣಿಬಂದ, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ, ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.