ರಾಜ್ಯಕ್ಕೇ ಸಿಇಟಿ-ಸಕ್ಷಮ್ ಮಾದರಿ

KannadaprabhaNewsNetwork | Published : Oct 8, 2024 1:03 AM

ಸಾರಾಂಶ

ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯಗಳ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ನೀಟ್-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಸಿಇಟಿ-ಸಕ್ಷಮ್ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯಗಳ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ನೀಟ್-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಸಿಇಟಿ-ಸಕ್ಷಮ್ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.

ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಪರೀಕ್ಷೆಗಳ ಕುರಿತು ಅಧ್ಯಯನಕ್ಕಾಗಿ ಶಿವಮೊಗ್ಗ ಜಿಲ್ಲೆಯ ತಂಡ ಜಿಲ್ಲೆಗೆ ಆಗಮಿಸಿ, ಮಾಹಿತಿ ಪಡೆದುಕೊಂಡಿತು.

ಬೆಳಗಾವಿ ಜಿಲ್ಲೆಯ ಉಪ ನಿರ್ದೇಶಕರ ಕಾರ್ಯಾಲಯ ಪಪೂ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸಿಇಟಿ-ಸಕ್ಷಮ್ ಕಾರ್ಯಕ್ರಮದ ಕಾರ್ಯವಿಧಾನವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಪ್ರೊಬೆಷನರಿ ಐಎಎಸ್ ಅಧಿಕಾರಿ ದೃಷ್ಟಿ ಜೇಸ್ವಾಲ್ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.

ಸರ್ಕಾರಿ ಪಪೂ ವಿದ್ಯಾಲಯಗಳಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಸಿಇಟಿ-ಸಕ್ಷಮ್ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ರಾಜ್ಯಮಟ್ಟದಲ್ಲಿಯೂ ಸಿಇಟಿ-ಸಕ್ಷಮ್ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸಿಇಟಿ-ಸಕ್ಷಮ್ ಕಾರ್ಯಕ್ರಮ ಅಳವಡಿಸಿಕೊಳ್ಳಬೇಕೆಂದು ಪ್ರೊಬೆಷನರಿ ಐಎಎಸ್ ಅಧಿಕಾರಿ ದೃಷ್ಟಿ ಜೇಸ್ವಾಲ್ ಅವರ ನೇತೃತ್ವದಲ್ಲಿ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಪ್ರಾಂಶುಪಾಲರಾದ ರವಿಶಂಕರ್, ಡಾ.ಜಿ.ಎಸ್.ಸಿದ್ಧಲಿಂಗಮೂರ್ತಿ, ಅರವಿಂದಕುಮಾರ್ ಕೆ., ವಾಸುದೇವ ಕೆ.ಎಚ್., ಉಪನ್ಯಾಸಕರಾದ ರಾಜೇಶ್ ಬೋಳಾರ್, ಜಾಕೀರ್ ಹುಸೇನ್, ಫ್ರಾನ್ಸಿಸ್ ಬೆಂಜಬಿನ್, ಎಸ್ಡಿಎ ಭರತ್, ಡಿಪಿಎಂ ಪ್ರದೀಪ್ ಒಳಗೊಂಡ ತಂಡ ಜಿಪಂ ಸಿಇಒ ರಾಹುಲ್ ಶಿಂಧೆ ಅವರನ್ನು ಭೇಟಿ ಮಾಡಿ ಸಮಗ್ರ ಮಾಹಿತಿ ಪಡೆದುಕೊಂಡಿತು.

ಕಾರ್ಯಕ್ರಮದ ಬಗ್ಗೆ ಬೆಳಗಾವಿ ಜಿಲ್ಲೆಯ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಂ. ಕಾಂಬಳೆ ಹಾಗೂ ಕಚೇರಿ ಸಿಬ್ಬಂದಿ ಮಾಹಿತಿ ನೀಡಿದರು.

ಏನಿದು ಸಿಇಟಿ -ಸಕ್ಷಮ್‌ ?:

ನೀಟ್‌ -ಸಕ್ಷಮ್‌ ಬೆಳಗಾವಿ ಜಿಪಂ ಸಿಇಒ ರಾಹುಲ್‌ ಶಿಂಧೆ ಅವರಿಂದ ರೂಪಿತವಾದ ವಿಶೇಷ ಯೋಜನೆ. ಸಾಮಾನ್ಯವಾಗಿ ಖಾಸಗಿ ಪ್ರತಿಷ್ಠಿತ ಕಾಲೇಜುಗಳು ಕಾಲೇಜುಗಳು ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯದ ಅಧ್ಯಯನದ ಜೊತೆಗೆ ನೀಟ್‌ ಪರೀಕ್ಷೆ ತಯಾರಿ ನಡೆಸುತ್ತವೆ. ಅನೇಕ ಖಾಸಗಿ ಸೆಂಟರ್‌ಗಳು ನೀಟ್‌ ಪರೀಕ್ಷೆ ತರಬೇತಿ ನೀಡುತ್ತಿವೆ. ಆದರೆ, ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಓದುತ್ತಿರುವ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ, ಮಾಹಿತಿ ಇಲ್ಲದೆ ಸಿಇಟಿ, ನೀಟ್‌ ಕಬ್ಬಿಣದ ಕಡಲೆಯಾಗಿದೆ. ಇದನ್ನು ಮನಗಂಡ ಜಿಪಂ ಸಿಇಒ ರಾಹುಲ್‌ ಶಿಂಧೆ ಡಿಡಿಪಿಯು ಇಲಾಖೆ ಜೊತೆಗೂಡಿ ನೀಟ್‌ ಸಕ್ಷಮ್‌ ಎಂಬ ಯೋಜನೆ ರೂಪಿಸಿ ಸರ್ಕಾರಿ ಪದವಿಪೂರ್ವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಜಿಲ್ಲೆಯಾದ್ಯಂತ ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವ ಮೂಲಕ ಸಿಇಟಿ ಮತ್ತು ನೀಟ್‌ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಬಡವರ್ಗದ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಸಿಇಟಿ-ಸಕ್ಷಮ್ ಕಾರ್ಯಕ್ರಮ ಎಂಬ ವಿನೂತನ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆಯಲ್ಲಿಯೂ ಅನುಷ್ಠಾನವಾಗಲಿದ್ದು, ಈ ನಿಟ್ಟಿನಲ್ಲಿ ಭೇಟಿ ನೀಡಿದ ಶಿವಮೊಗ್ಗ ಜಿಲ್ಲೆಯ ತಂಡ ಮಾಹಿತಿ ಕಲೆ ಹಾಕಿದೆ.

- ರಾಹುಲ್‌ ಶಿಂಧೆ, ಸಿಇಒ ಬೆಳಗಾವಿ

Share this article