ಮಾಜಿ ಸಚಿವ ಡಿ.ಸಿ.ತಮ್ಮಣ್ಣನವರಿಂದ ಸುಳ್ಳಿನ ಸರಮಾಲೆ: ಸಿ.ಡಿ.ಗಂಗಾಧರ್

KannadaprabhaNewsNetwork |  
Published : Mar 09, 2026, 02:00 AM IST
೬ಕೆಎಂಎನ್‌ಡಿ-೩ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿದರು. | Kannada Prabha

ಸಾರಾಂಶ

ಅಭಿವೃದ್ಧಿ ವಿಚಾರವಾಗಿ ತಮ್ಮಣ್ಣನವರು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ನಾವು ಈಗಲೇ ಸಿದ್ಧ. ಎಲ್ಲಿಗೆ ಬೇಕಾದರೂ ಕರೆಯಲಿ. ನಾವು ಬರುತ್ತೇವೆ. ಸ್ಥಳ ಮತ್ತು ದಿನಾಂಕವನ್ನು ಅವರೇ ನಿಗದಿಪಡಿಸಲಿ. ಅಭಿವೃದ್ಧಿ ಯೋಜನೆಗಳ ಕುರಿತಂತೆ ದಾಖಲೆ ಸಮೇತವಾಗಿ ಬಂದು ಚರ್ಚಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಡಿ.ಸಿ.ತಮ್ಮಣ್ಣನವರು ಮಾಜಿ ಸಚಿವರಾಗಿದ್ದವರು. ಅವರ ಘನತೆಗೆ ತಕ್ಕಂತೆ ಮಾತನಾಡಬೇಕು. ಸುಳ್ಳು ಹೇಳುವುದರಿಂದ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಶಾಸಕರು ಮಾಡುತ್ತಿರುವ ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದೆ ಸುಳ್ಳಿನ ಸರಮಾಲೆಯನ್ನೇ ಸತ್ಯವೆಂಬಂತೆ ಬಿಂಬಿಸಿದ್ದಾರೆ. ಅವರ ಕಾಲದಲ್ಲೇ ಅನುಮೋದನೆಗೊಂಡ ಯೋಜನೆಗಳು ಜಾರಿ ಏಕೆ ಆಗಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಪ್ರಶ್ನಿಸಿದರು.

ಅಭಿವೃದ್ಧಿ ವಿಚಾರವಾಗಿ ತಮ್ಮಣ್ಣನವರು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ನಾವು ಈಗಲೇ ಸಿದ್ಧ. ಎಲ್ಲಿಗೆ ಬೇಕಾದರೂ ಕರೆಯಲಿ. ನಾವು ಬರುತ್ತೇವೆ. ಸ್ಥಳ ಮತ್ತು ದಿನಾಂಕವನ್ನು ಅವರೇ ನಿಗದಿಪಡಿಸಲಿ. ಅಭಿವೃದ್ಧಿ ಯೋಜನೆಗಳ ಕುರಿತಂತೆ ದಾಖಲೆ ಸಮೇತವಾಗಿ ಬಂದು ಚರ್ಚಿಸುತ್ತೇವೆ. ಆರೋಗ್ಯಕರ ಚರ್ಚೆಗೆ ನಾವೆಂದಿಗೂ ಸಿದ್ಧ ಎಂದು ಸುದ್ದಿಗೋಷ್ಠಿಯಲ್ಲಿ ಮುಕ್ತವಾಗಿ ಸವಾಲನ್ನು ಸ್ವೀಕರಿಸಿದರು.

ಶಾಸಕ ಕೆ.ಎಂ.ಉದಯ್ ಅವರು ಎರಡು ವರ್ಷದಲ್ಲಿ ೧೨೦೦ ಕೋಟಿ ರು. ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ತಮ್ಮಣ್ಣನವರ ಕಾಲದಲ್ಲಿ ಅಪೂರ್ಣಗೊಂಡಿದ್ದ ಕಾಮಗಾರಿಗಳನ್ನು ಇವರು ಪೂರ್ಣಗೊಳಿಸುತ್ತಿದ್ದಾರೆ. ಡಿ.ಸಿ.ತಮ್ಮಣ್ಣನವರ ಅವಧಿಯಲ್ಲಿ ಆರಂಭಗೊಂಡ ಕೆ.ಎಂ.ದೊಡ್ಡಿಯಿಂದ ಮದ್ದೂರು ಪಟ್ಟಣದ ನೀರು ವಿತರಣಾ ಜಾಲದ ನವೀಕರಣ ಮತ್ತು ಮನೆಗಳಿಗೆ ಸೇವಾ ಸಂಪರ್ಕವನ್ನು ಒದಗಿಸುವ ಯೋಜನೆ ಅರ್ಧಕ್ಕೇ ಸ್ಥಗಿತಗೊಂಡಿದೆ. ಇದರಲ್ಲಿ ೫.೩೦ ಕೋಟಿ ರು. ಹಣವನ್ನೂ ಯೋಜನೆ ಮುಗಿಯುವ ಮುನ್ನವೇ ಬಿಲ್ ಪಾವತಿಸಿದ್ದು ಇನ್ನೂ ೫.೫೦ ಕೋಟಿ ರು. ಹಣ ಬಿಡುಗಡೆಯಾಗಬೇಕಿದೆ. ಪೈಪ್‌ಲೈನ್‌ಗಳು ಕಳಪೆಯಿಂದ ಕೂಡಿದ್ದು, ಉಪಯೋಗಕ್ಕೆ ಯೋಗ್ಯವಿಲ್ಲವೆಂದು ವರದಿಗಳು ತಿಳಿಸಿವೆ. ತಾವು ಮಾಡಿರುವ ಕಳಪೆ ಕಾಮಗಾರಿಯನ್ನು ಶಾಸಕರ ತಲೆಗೆ ಕಟ್ಟಲು ಪ್ರಯತ್ನಿಸಿದ್ದಾರೆ ಎಂದು ದೂಷಿಸಿದರು.

ಸೂಳೆಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ನೀರು ಶೇಖರಣೆ ಹೆಚ್ಚಿಸಲು ಹೂಳೆತ್ತಿಸಲಾಗುತ್ತಿದೆ. ಈ ಮಣ್ಣನ್ನು ರೈತರಿಂದ ಹಣ ಪಡೆದು ಮಾರಾಟ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಾರೆ. ಅವರೇ ಸ್ಥಳಕ್ಕೆ ಬರಲಿ. ರೈತರನ್ನು ವಿಚಾರಿಸಲಿ. ಮಣ್ಣಿಗೆ ರೈತರಿಂದ ಹಣ ವಸೂಲಿ ಮಾಡುವ ದುರ್ಬುದ್ಧಿ ನಮಗಿಲ್ಲ. ಮಣ್ಣು ಅವರಿಗೆ ಬೇಕಾದಲ್ಲಿ ಟ್ರಾಕ್ಟರೋ, ಟಿಪ್ಪರೋ ತರಲಿ. ನಾವೇ ಪುಕ್ಕಟೆಯಾಗಿ ತುಂಬಿಸಿ ಕಳುಹಿಸುತ್ತೇವೆ ಎಂದು ವ್ಯಂಗ್ಯವಾಗಿ ಹೇಳಿದರು.

ಶಾಸಕ ಕೆ.ಎಂ.ಉದಯ್ ಅವರು ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಪೂರಕವಾದ ಸಲಹೆ-ಸಹಕಾರಗಳನ್ನು ಕೊಡಿ. ಅದನ್ನು ಮುಕ್ತವಾಗಿ ಸ್ವೀಕರಿಸುತ್ತೇವೆ. ನಿಮ್ಮಿಂದ ಮಾಡಲು ಸಾಧ್ಯವಾಗದ ಕೆಲಸವನ್ನು ಉದಯ್ ಮಾಡುತ್ತಿದ್ದಾರೆಂಬುದಕ್ಕೆ ದ್ವೇಷ ಸಾಧಿಸಬೇಡಿ. ಶಾಸಕರ ವಿರುದ್ಧ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಬೇಡಿ. ಹಾಗೇನಾದರೂ ನೀವು ಹೇಳುತ್ತಿರುವುದು ನಿಜವಾದಲ್ಲಿ ದಾಖಲೆ ಸಹಿತವಾಗಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಪ್ರತಿ ಸವಾಲೆಸೆದರು.

ಡಿ.ಸಿ.ತಮ್ಮಣ್ಣನವರ ಅವಧಿಯಲ್ಲಿ ನಡೆದಿರುವ ಅಕ್ರಮ ಕಾಮಗಾರಿಗಳ ಕುರಿತಂತೆ ತನಿಖೆ ನಡೆಸುವಂತೆ ಶಾಸಕರ ಮೂಲಕ ಸರ್ಕಾರಕ್ಕೆ ಪತ್ರ ಬರೆಸಲು ಸಿದ್ಧರಿದ್ದೇವೆ. ಆದರೆ, ಅಂತಹ ದ್ವೇಷದ ರಾಜಕಾರಣವನ್ನು ಮಾಡುವುದಿಲ್ಲ. ನಾವು ಅವರಂತೆ ಸುಳ್ಳು ಹೇಳುವುದಿಲ್ಲ. ದಾಖಲೆಗಳನ್ನು ಜನರ ಮುಂದಿಡುತ್ತೇವೆ. ಶೇ.೪೦ರಷ್ಟು ಕಮಿಷನ್, ಶೇ.೧೦ರಷ್ಟು ಕಮಿಷನ್ ಪಡೆದಿರುವ ಬಗ್ಗೆ ಹೇಳಿದ್ದಾರಲ್ಲ ಅದನ್ನು ಮೊದಲು ಸಾಬೀತುಪಡಿಸಲಿ ಎಂದು ನೇರವಾಗಿ ಹೇಳಿದರು.

ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಬಿ.ಬಸವರಾಜು, ಎಂ.ಎಸ್.ರಾಜೀವ್, ಎಂ.ಎಸ್.ಚಿದಂಬರ್, ಅಜ್ಜಹಳ್ಳಿ ರಾಮಕೃಷ್ಣ,, ಮೋಹನ್‌ಕುಮಾರ್, ಹೊಂಬಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಗೆ ಹಜ್ ಭವನ ಘೋಷಣೆ: ಸಲೀಂ ಅಹ್ಮದ್‌ಗೆ ಅಭಿನಂದನೆ
ಹಕ್ಕುಪತ್ರ ಪಡೆಯಲು ಮಾರ್ಚ್ ಅಂತ್ಯದೊಳಗೆ ಶುಲ್ಕ ಪಾವತಿಸಿʼ: ಕೆ.ಎಸ್‌.ಆನಂದ್‌.