ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಕಲ್ಲೇಸೋಮನಹಳ್ಳಿ ಗ್ರಾಮದ ಹಿರಿಯ ಮುಖಂಡ ಹಾಗೂ ಮಾಜಿ ಛೇರ್ಮನ್ ನಿಂಗೇಗೌಡರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ದೂರದೃಷ್ಟಿಯ ನಾಯಕತ್ವ ಅಗತ್ಯವಾಗಿದ್ದು, ನಿಂಗೇಗೌಡರು ಹಲವು ದಶಕಗಳ ಹಿಂದೆಯೇ ತಗಡೂರು ಗ್ರಾಮದ ಭವಿಷ್ಯದ ಅಭಿವೃದ್ಧಿಯ ಕುರಿತು ಚಿಂತನೆ ನಡೆಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಂಬತ್ತರ ದಶಕದಲ್ಲಿಯೇ ತಗಡೂರು ಗ್ರಾಮವನ್ನು ಕೇವಲ ಒಂದು ಸಾಮಾನ್ಯ ಗ್ರಾಮವಾಗಿ ನೋಡದೆ, ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗುವಂತೆ ಅಭಿವೃದ್ಧಿಪಡಿಸುವ ಕನಸನ್ನು ನಿಂಗೇಗೌಡರು ಹೊಂದಿದ್ದರು. ಆ ಕಾಲದಲ್ಲಿಯೇ ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯಗಳು, ಶಿಕ್ಷಣ, ಆರೋಗ್ಯ ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅವರು ನಿರಂತರ ಹೋರಾಟ ನಡೆಸಿದ್ದರು ಎಂದು ಹೇಳಿದರು.
ತಗಡೂರಿನಲ್ಲಿ ಪ್ರೌಢಶಾಲೆ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯ, ಪಶು ಆಸ್ಪತ್ರೆ ಹಾಗೂ ಬಿಸಿಎಂ ವಿದ್ಯಾರ್ಥಿನಿಲಯ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಸೌಲಭ್ಯಗಳು ದೊರಕಲು ನಿಂಗೇಗೌಡರ ನೇತೃತ್ವದ ಹೋರಾಟ ಮತ್ತು ಸಂಘಟಿತ ಪ್ರಯತ್ನವೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಛೇರ್ಮನ್ ನಿಂಗೇಗೌಡರು, ತಗಡೂರು ಗ್ರಾಮದ ಅಭಿವೃದ್ಧಿ ತನ್ನೊಬ್ಬರ ಪ್ರಯತ್ನದಿಂದ ಸಾಧ್ಯವಾದದ್ದಲ್ಲ ಎಂದು ವಿನಮ್ರವಾಗಿ ಹೇಳಿದರು.
ತಗಡೂರು ಪುರುದೇಗೌಡರು, ಪಟೇಲ್ ಕೆಂಪೇಗೌಡರು, ಹಿಂದಲಮನೆ ಶಿವಗಂಗಪ್ಪ ಸೇರಿದಂತೆ ಅನೇಕ ಹಿರಿಯರ ಮಾರ್ಗದರ್ಶನ ಮತ್ತು ಸಹಕಾರವನ್ನು ಅವರು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಂಡರು. ಅಲ್ಲದೇ ಲಕ್ಕರಸನಹಳ್ಳಿ, ರಂಗಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ತಗಡೂರು ಅಭಿವೃದ್ಧಿಗೆ ನೀಡಿದ ಬೆಂಬಲವನ್ನು ವಿಶೇಷವಾಗಿ ಸ್ಮರಿಸಿದರು.