ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಪುರಾತವಾದ ಧಾರ್ಮಿಕ, ಸಾಹಿತ್ಯ ಕಲೆ ಹೊಂದಿರುವ ಪುಣ್ಯಭೂಮಿ ಎಂದು ಮಲೆಯೂರು ಕನಕಗಿರಿಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರುನಗರದ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ೧೭ನೇ ಪ್ರತಿಜ್ಞಾ ವಾರ್ಷಿಕ ಪೂಜಾ ಮಹೋತ್ಸವ ಅಂಗವಾಗಿ ನಡೆದ ಕಾಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.ಧಾರ್ಮಿಕವಾಗಿ ಹರಳುಕೋಟೆ, ಹರದನಹಳ್ಳಿ, ಕನಕಗಿರಿ, ಚಾಮರಾಜನಗರ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಹಲವಾರು ಮಹಾಪುರುಷರು ಈ ನೆಲದಲ್ಲಿ ಜನಿಸಿ ರಾಜ್ಯಕ್ಕೆ ಅಲ್ಲ ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.ಸಾಹಿತ್ಯದಲ್ಲೂ ಸಹ ಹಲವಾರು ಸಾಹಿತಿ ಈ ಮಣ್ಣಿನ ಚರಿತೆಯನ್ನು ಗುಣಗಳನ್ನು ತಮ್ಮ ಸಾಹಿತ್ಯದ ಮೂಲ ಕೊಡುಗೆಯಾಗಿ ನೀಡಿದ್ದಾರೆ, ಕಲೆಯ ತವರೂರಾದ ಈ ನೆಲದಲ್ಲಿ ಹುಟ್ಟಿದ ಡಾ. ರಾಜ್ಕುಮಾರ್ ರಾಜ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಎಂದರು.ರಾಜಕೀಯವಾಗಿಯೂ ಈ ನೆಲ ಪವಿತ್ರವಾದದ್ದು, ಮೈಸೂರು ಒಡೆಯರು ದ್ವೇಷ, ಅಸೂಯೆ, ಯುದ್ದ ಇಲ್ಲದೇ ರಾಜ್ಯ ಕಟ್ಟಿದವರು ಅಂತಹ ಒಡೆಯರು ಈ ನೆಲದಲ್ಲಿ ಹುಟ್ಟಿದ್ದಾರೆ. ಇಲ್ಲಿ ಪರಸ್ಪರ ಸಹಕಾರ, ಭಾಂದವ್ಯ ಹೊಂದಾಣಿಕೆ ಬಹಳ ಮಹತ್ವವಾದದ್ದು ಎಂದರು.ಅಹಿಂಸೆ ಪಾಲನೆ ಮಾಡುವುದೇ ಜೈನ ಧರ್ಮದ ಮುಖ್ಯ ಉದ್ದೇಶ. ಶಾಂತಿ, ನೆಮ್ಮದಿ ಸಂಕೇತವಾಗಿ ಜೈನ ಧರ್ಮ ಮನುಷ್ಯನನ್ನು ಗೆಲ್ಲುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜೈನ ಸಮುದಾಯದ ಮೃತರ ಅಂತ್ಯಕ್ರಿಯೆಗೆ ಜಾಗ ನೀಡಿ ಸಹಕರಿಸುತ್ತಿರುವ ಆರ್ಯ ವೈಶ್ಯ ಮಂಡಳಿಯ ಮಾಜಿ ಅಧ್ಯಕ್ಷ ಜಿ.ಆರ್. ಅಶ್ವತ್ಥ್ನಾರಾಯಣ, ಹಾಲಿ ಅಧ್ಯಕ್ಷ ವೆಂಕಟನಾಗಪ್ಪ ಶೆಟ್ಡಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಸಾಹುಕಾರ್ ಬ್ರಹ್ಮದೇವಪ್ಪ ಕುಟುಂಬವರ್ಗದವರು ಬಸದಿಯ ಧರಣೇಂದ್ರಸ್ವಾಮಿಗೆ ಬೆಳ್ಳಿ ಕವಚವನ್ನು ದಾನವಾಗಿ ನೀಡಿದರು,ವಾರ್ಷಿಕೋತ್ಸವದ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ನಡೆದ ವಿವಿಧ ಅಭಿಷೇಕಗಳು ನಡೆದವು, ಸಂಜೆ, ಪಾರ್ಶ್ವನಾಥ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು,ಕಾರ್ಯಕ್ರಮದಲ್ಲಿ ಪಾರ್ಶ್ವನಾಥ ಜೈನ ಸಂಘದ ನಿರ್ಮಲಕುಮಾರ್, ಶ್ವೇತಾಂಬರ ಜೈನ ಸಂಘದದವರ, ಜಯಶಾಮದೇವಿ ಜೈನ ಮಹಿಳಾ ಸಂಘದ ಪದ್ಮಶ್ರೀ ಬ್ರಹ್ಮೇಶ್ಕುಮಾರ್, ಸತೀಶ್, ಸಿ.ವಿ.ನಾಗರಾಜಯ್ಯ, ಸಂಘಗಳ ಎಲ್ಲಾ ಪದಾಧಿಕಾರಿಗಳು, ಜೈನ ಭಾಂಧವರು ಇದ್ದರು.