ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಯೋಚಿಸಿ

KannadaprabhaNewsNetwork | Published : Jun 22, 2025 11:47 PM

ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ನೀವು ನವ ಮಾಧ್ಯಮದಲ್ಲಿ ಮುಂದುವರಿಯಬೇಕಾದರೆ ಕ್ರಿಯಾಶೀಲಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ, ತುಮಕೂರು

ಪ್ರಸ್ತುತ ದಿನಗಳಲ್ಲಿ ನವ ಮಾಧ್ಯಮ ಅಥವಾ ಡಿಜಿಟಲ್ ಮಾಧ್ಯಮ ಎಂಬುದು ಪ್ರಪಂಚದಾದ್ಯಂತ ಅತಿ ಹೆಚ್ಚು ವ್ಯಾಪಕತೆಯನ್ನ ಹೊಂದಿದೆ. ಹೀಗಿರುವಾಗ ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ನೀವು ನವ ಮಾಧ್ಯಮದಲ್ಲಿ ಮುಂದುವರಿಯಬೇಕಾದರೆ ಕ್ರಿಯಾಶೀಲಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಬೇಕು ಎಂದು ಅಂತರ್ಯಾಮಿ ಚಲನಚಿತ್ರದ ನಟ, ನಿರ್ಮಾಪಕ ನವೀನ್ ಎನ್. ಜಿ ವಿದ್ಯಾರ್ಥಿಗಳಿಗೆ ಹೇಳಿದರು.

ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಮತ್ತು ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ದೃಶ್ಯ ಸಂಕಲನ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ವಿಡಿಯೋ ಎಡಿಟಿಂಗ್ ಎಂದರೆ ಮನರಂಜನೆ ಶಿಕ್ಷಣ ಅಥವಾ ಮಾರ್ಕೆಟಿಂಗ್ ಗಾಗಿ ಕಚ್ಚಾ ದೃಶ್ಯಗಳನ್ನು ಆಕರ್ಷಕ ಉತ್ಪನ್ನವಾಗಿ ಪರಿವರ್ತಿಸಲು ವಿಡಿಯೋ ಸಂಕಲನ ನಿರ್ಣಾಯಕವಾಗಿದೆ. ಇದು ದೃಶ್ಯ ಸಂವಹನ, ಕಥೆ ಹೇಳುವಿಕೆ ಮತ್ತು ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ವಿಷಯವನ್ನು ಹೆಚ್ಚು ಆಕರ್ಷಕವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ. ಶಾಟ್ ಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವ ಮೂಲಕ ಅನಗತ್ಯ ದೃಶ್ಯ ಭಾಗಗಳನ್ನ ಟ್ರಿಮ್ ( ಕತ್ತರಿಸಿ) ಮಾಡುವ ಮೂಲಕ ಮತ್ತು ಪರಿಣಾಮಗಳನ್ನು ( ಎಫೆಕ್ಟ್) ಸೇರಿಸಿ ವೀಕ್ಷಕರನ್ನು ಆಕರ್ಷಿಸುವ ಮತ್ತು ಉದ್ದೇಶವನ್ನು ರವಾನಿಸುವ ಪ್ರಕ್ರಿಯೆಯಾಗಿದೆ ಎಂದರು.

ಉಪನ್ಯಾಸದ ಜೊತೆಗೆ ಪ್ರಾಯೋಗಿಕವಾಗಿ ಅಭ್ಯಾಸ ನಡೆಸಲು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪಿಟಿಸಿ ವಿಡಿಯೋ, ಸಂದರ್ಶನ ಹೇಗೆ ಮಾಡುವುದು ಎಂಬುವುದರ ಕುರಿತಾಗಿ ತಿಳಿಸುವುದರ ಜೊತೆಗೆ ತದನಂತರ ವಿದ್ಯಾರ್ಥಿಗಳಿಗೆ ವಿಡಿಯೋ ಮಾಡುವುದರ ಜೊತೆಗೆ ತಂತ್ರಾಂಶಗಳ ಬಳಕೆ ಕೂಡ ತಿಳಿದಿರಬೇಕು ಎಂದು ವಿದ್ಯಾರ್ಥಿಗಳೇ ಸಂಗ್ರಹಿಸಿದ ವಿಡಿಯೋಗಳನ್ನು ಅವರ ಮೂಲಕವೇ ವಿಡಿಯೋ ಎಡಿಟಿಂಗ್ ಮಾಡುವುದರ ತರಬೇತಿ ನೀಡಿ ವಿದ್ಯಾರ್ಥಿಗಳೇ ಪ್ರಾಯೋಗಿಕ ಅಭ್ಯಾಸ ನಡೆಸುವಂತೆ ನಿರ್ದೇಶಿಸಿದರು.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿದಾಯಕವಾಗಿ ಭಾಗವಹಿಸಿದ್ದು, ದೃಶ್ಯ ಸಂಕಲನ ಕಾರ್ಯಗಾರವನ್ನು ಯಶಸ್ವಿಯಾಗಿ ನಡೆಸಲು ಸಾಕ್ಷಿಯಾದರು.

ಈ ಕಾರ್ಯಗಾರದಲ್ಲಿ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ಸಿ, ಸಹಾಯಕ ಪ್ರಾಧ್ಯಾಪಕಿ ಶ್ವೇತ ಎಂ ಪಿ, ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶಿಲ್ಪಾಶ್ರೀ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.