ಮಾಜಿ ಸಚಿವ ಎಚ್.ಆಂಜನೇಯ ಅವರು ನಾಗಮಂಗಲಕ್ಕೆ ಬಂದು ಆ ರೀತಿ ಹೇಳಿಕೆ ನೀಡಲಿ ಎಂದು ಬೆದರಿಕೆ ಹಾಕಿರುವ ಅರ್ಚಕ ಸಂತೋಷ್ಕುಮಾರ್ ಅವರೇ ನಾಗಮಂಗಲ ನಿಮ್ಮ ಸ್ವಂತ ಆಸ್ತಿಯಲ್ಲ. ನಾವೂ ಕೂಡ ಇದೇ ತಾಲೂಕಿನವರು. ಇಂತಹ ಬೆದರಿಕೆ, ದಬ್ಬಾಳಿಕೆ, ದೌರ್ಜನ್ಯಗಳು ಪುರಾತನ ಕಾಲದಿಂದಲೂ ನಡೆದುಬಂದಿವೆ ಎಂದು ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಏಕವಚನದಲ್ಲಿ ನಿಂದಿಸಿ ಅವರ ಸರ್ವನಾಶಕ್ಕೆ ಎಲ್ಲಾ ದೇವಾಲಯಗಳಲ್ಲಿ ಸಂಕಲ್ಪ ಪೂಜೆ ಮಾಡುವುದಾಗಿ ಹೇಳಿಕೆ ನೀಡಿರುವ ತಾಲೂಕು ಮುಜರಾಯಿ ದೇವಸ್ಥಾನಗಳ ಅರ್ಚಕರ ಸಂಘದ ಅಧ್ಯಕ್ಷ ಸಂತೋಷ್ಕುಮಾರ್ ಅವರದು ದರ್ಪ, ದುರಂಹಕಾರ ಮತ್ತು ಗೂಂಡಾವರ್ತನೆಯಾಗಿದೆ ಎಂದು ಮಾದರ ಮಹಾಸಭಾ ರಾಜ್ಯಸಮಿತಿ ಸದಸ್ಯ ಹಾಗೂ ವಕೀಲ ಎನ್.ಆರ್.ಚಂದ್ರಶೇಖರ್ ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಿಷಯಾಧಾರಿತವಾಗಿ ಸುದ್ದಿಗೋಷ್ಠಿ ನಡೆಸಲು ನಮ್ಮ ಯಾವುದೇ ಅಭ್ಯಂತರವಿಲ್ಲ. ಅರ್ಚಕರ ಬಗ್ಗೆ ತಮಗೆ ಅಪಾರ ಗೌರವವಿದೆ. ಆದರೆ, ವ್ಯಕ್ತಿಗತವಾಗಿ ವ್ಯಕ್ತಿಯ ಮೂಲ ಕೆದಕಿ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಅವರ ಹೇಳಿಕೆಯನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳದೆ ಅವರ ಸರ್ವನಾಶಕ್ಕೆ ಪೂಜೆ ಮಾಡುತ್ತೇವೆಂದು ಹೇಳಿಕೆ ನೀಡಿರುವುದು ಅರ್ಚಕರ ಗುಣವೇ ಅಥವಾ ಸಂಸ್ಕಾರವೇ ಎಂದು ಪ್ರಶ್ನಿಸಿದರು.
ಇತ್ತೀಚಿನ ದಿನಗಳಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ರಾಜಣ್ಣ ಸೇರಿದಂತೆ ಕೆಲ ದಲಿತ ನಾಯಕರು ಮತ್ತು ಅಂಬೇಡ್ಕರ್ ವಾದಿಗಳನ್ನು ಮನುವಾದಿಗಳು ಟಾರ್ಗೆಟ್ ಮಾಡಿಕೊಂಡು ಅವರ ಸರ್ವನಾಶಕ್ಕೆ ಮುಂದಾಗಿ ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆಂದು ದೂರಿದರು.
ಮಾಜಿ ಸಚಿವ ಎಚ್.ಆಂಜನೇಯ ಅವರು ನಾಗಮಂಗಲಕ್ಕೆ ಬಂದು ಆ ರೀತಿ ಹೇಳಿಕೆ ನೀಡಲಿ ಎಂದು ಬೆದರಿಕೆ ಹಾಕಿರುವ ಅರ್ಚಕ ಸಂತೋಷ್ಕುಮಾರ್ ಅವರೇ ನಾಗಮಂಗಲ ನಿಮ್ಮ ಸ್ವಂತ ಆಸ್ತಿಯಲ್ಲ. ನಾವೂ ಕೂಡ ಇದೇ ತಾಲೂಕಿನವರು. ಇಂತಹ ಬೆದರಿಕೆ, ದಬ್ಬಾಳಿಕೆ, ದೌರ್ಜನ್ಯಗಳು ಪುರಾತನ ಕಾಲದಿಂದಲೂ ನಡೆದುಬಂದಿವೆ ಎಂದು ಕಿಡಿಕಾರಿದರು.
ಸಚಿವ ಎಚ್.ಆಂಜನೇಯ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಸಂತೋಷ್ಕುಮಾರ್ ಅವರು ಮೊದಲು ಬಹಿರಂಗ ಕ್ಷಮೆ ಯಾಚಿಸದಿದ್ದಲ್ಲಿ ನಾವೂ ಸಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಬಾಬು ಜಗಜೀವನ್ರಾಂ ಸಂಘದ ತಾಲೂಕು ಅಧ್ಯಕ್ಷ ನರಸಿಂಹ, ಗೌರವಾಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಶೇಖರ್, ಮುಖಂಡರಾದ ಎಸ್.ಕೆ.ರಾಮಕೃಷ್ಣ, ಉಮೇಶ್ ಮತ್ತು ತಿಮ್ಮಪ್ಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.