ಕನ್ನಡಪ್ರಭ ವಾರ್ತೆ ವಿಜಯಪುರ
ಜನಸಾಮಾನ್ಯರು ಸಹ ನಿಸರ್ಗದಲ್ಲಾಗುವ ಬದಲಾವಣೆಯಿಂದಲೇ ಯುಗಾದಿ ಹಬ್ಬ ಗುರುತಿಸುತ್ತಾರೆ. ಸನಾತನ ಸಂಸ್ಕೃತಿಯ ಸಂವತ್ಸರದ ಆರಂಭದ ಹಬ್ಬವೇ ಯುಗಾದಿ ಎಂದು ವಿಶ್ರಾಂತ ಡಿ.ಎಸ್.ಪಿ. ಬಸವರಾಜ ಚೌಕಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಯುಗಾದಿ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇವು ಬೆಲ್ಲದ ಸಂಕೇತವಾಗಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವಲ್ಲಿ ಯುಗಾದಿ ವೈಶಿಷ್ಟ್ಯತೆ ಪಡೆದುಕೊಂಡಿದೆ. ಕವಿಗಳು ವಾಚನ ಮಾಡಿರುವ ಕವನಗಳನ್ನು ಮೆಲುಕು ಹಾಕುತ್ತಾ ನಿರಂತರ ಅಧ್ಯಯನ ಶೀಲತೆಯಿಂದ ಕಾವ್ಯ ರಚಿಸುವ ಸಾಮರ್ಥ್ಯ ಪಡೆಯಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಈರಣ್ಣ ಬಿರಾದಾರಗೌಡರ ಮಾತನಾಡಿ, ಕವಿತೆ ಹುಡುಗಾಟವಲ್ಲ, ಅದೊಂದು ಹುಡುಕಾಟ. ಕವಿಯಾದವನು ನಿರಂತರ ಸಂಶೋಧಕನಾಗಿರಬೇಕು. ಸಮಾಜ ತಿದ್ದುವ ಕಾವ್ಯಗಳು ಅತ್ಯವಶ್ಯಕವಾಗಿವೆ. ಯುವ ಸಾಹಿತಿಗಳನ್ನು ಸಾಹಿತ್ಯದ ಮುಖ್ಯವಾಹಿನಿಗೆ ತರುವಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ಕಸಾಪದಲ್ಲಿ ಯುಗಾದಿ ಕಾವ್ಯ ಸಂಭ್ರಮ ಹಮ್ಮಿಕೊಂಡಿದ್ದು ಸಂತೋಸ ತಂದಿದೆ. ಜಿಲ್ಲಾದ್ಯಂತ ಎಲೆಮರೆಯ ಕಾಯಿಯಂತಿರುವ ಯುವ ಪ್ರತಿಭಾವಂತ ಕವಿಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಜ್ಯೋತಿ ಚೌಕಿಮಠ ಕವಿಗಳಿಗೆ ಸನ್ಮಾನಿಸಿದರು. ಗುರಣ್ಣ ಹಂಚನಾಳ, ಇಸಾಕ್ ಸಾರವಾಡ, ಅಭಿಷೇಕ ಚಕ್ರವರ್ತಿ ವೇದಿಕೆಯಲ್ಲಿದ್ದರು.ವಿರೇಶ ವಾಲಿ ಮತ್ತು ತಂಡ ಪ್ರಾರ್ಥನಾಗೀತೆ ಹಾಡಿದರು. ಪ್ರೊ.ಸುಭಾಶ್ಚಂದ್ರ ಕನ್ನೂರ ಸ್ವಾಗತಿಸಿ ಪರಿಚಯಿಸಿದರು. ಡಾ.ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ವೇತಾ ಮೂಲ್ಕಿ ಪಾಟೀಲ ನಿರೂಪಿಸಿದರು. ಸುರೇಶ ಜತ್ತಿ ವಂದಿಸಿದರು.
ಕವಿಗಳಾದ ಶಿಲ್ಪಾ ಹಂಜಿ, ಶೋಭಾ ಮೇಡೆಗಾರ, ವಿದ್ಯಾ ಕಲ್ಯಾಣಶೆಟ್ಟಿ, ರುದ್ರಮ್ಮ ಗಿಡ್ಡಪ್ಪಗೋಳ, ಶಿಲ್ಪಾ ಬಸ್ಮೆ, ಶಿವಲೀಲಾ ಕೊರವಾರ, ಶೀವಲೀಲಾ ಕೋರಿ, ಶಾಂತಲಾ ಪಾಟೀಲ, ಸಿದ್ದನಗೌಡ ಕಾಶಿನಕುಂಟೆ, ಮಡಿವಾಳಮ್ಮ ನಾಡಗೌಡ, ಶಿವಾಜಿ ಮೋರೆ, ಶ್ರೀಕಾಂತ ಮಾದರ, ಪ್ರತಿಭಾ ತೊರವಿ, ರಜಿಯಾ ದಳವಾಯಿ, ಶೋಭಾ ಹರಿಜನ, ಜಿ.ಪಿ.ಬಿರಾದಾರ, ಸಾವಿತ್ರಿ ಮಾನೋಜಿ, ಜಗದೀಶ ಬಿರಾದಾರ, ರೂಪಾ ರಜಪೂತ, ಅನ್ನಪೂರ್ಣ ಚೋಳಕೆ, ಕಾಶಿರಾಯ ಹತ್ತಳ್ಳಿ, ಲಕ್ಷ್ಮಿ ಕಾತ್ರಾಳ, ಆನಂದ ಪೂಜಾರಿ, ಪಾವ೯ತಿ ಸೊನ್ನದ ಕವನ ವಾಚಿಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಡಾ.ಸಂಗಮೇಶ ಮೇತ್ರಿ, ಕಮಲಾ ಮುರಾಳ, ರಾಜೇಸಾಬ ಶಿವನಗುತ್ತಿ, ಜಿ.ಎಸ್. ಬಳ್ಳೂರ, ರಜಾಕ್ ಮುಲ್ಲಾ, ಯಾಕೂಬ್ ನಾಟೀಕಾರ, ಲತಾ ಗುಂಡಿ, ಸತ್ಯಣ್ಣ ಹಡಪದ, ಅವಿನಾಶ ಧನ್ಯಾಳ, ಅಣ್ಣುಗೌಡ ಬಿರಾದಾರ ಉಪಸ್ಥಿತರಿದ್ದರು.