ಆಧುನಿಕತೆಗೆ ತಕ್ಕಂತೆ ವೈದ್ಯಕೀಯ ಉಪಕರಣ ಬದಲಾವಣೆ : ಆದರ್ಶ

KannadaprabhaNewsNetwork | Published : Apr 27, 2025 1:35 AM

ಸಾರಾಂಶ

ಚಿಕ್ಕಮಗಳೂರು, ಆಧುನಿಕತೆ ಬೆಳೆದಂತೆ ವೈದ್ಯಕೀಯ ಉಪಕರಣಗಳು ಬದಲಾವಣೆ ಯಾಗುತ್ತಿವೆ. ಡಿಜಿಟಲ್ ಸ್ಟೆತೊಸ್ಕೋಪ್‌ನ ಅತ್ಯಾಧುನಿಕ ತಂತ್ರಜ್ಞಾನದಿಂದ ರೋಗಿಯ ಲಕ್ಷಣಗಳು ಶೀಘ್ರಗತಿಯಲ್ಲಿ ಕಂಡು ಹಿಡಿಯಲು ಸಾಧ್ಯವಾಗುತ್ತಿದೆ ಎಂದು ಆಯು ಡಿವೈಜ್ಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆದರ್ಶ ಹೇಳಿದರು.

- ಎಐಟಿ ಕಾಲೇಜಿನಲ್ಲಿ ’ವಿದ್ಯುಯೂತ್’ ಕಾರ್ಯಕ್ರಮ । ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಆಧುನಿಕತೆ ಬೆಳೆದಂತೆ ವೈದ್ಯಕೀಯ ಉಪಕರಣಗಳು ಬದಲಾವಣೆ ಯಾಗುತ್ತಿವೆ. ಡಿಜಿಟಲ್ ಸ್ಟೆತೊಸ್ಕೋಪ್‌ನ ಅತ್ಯಾಧುನಿಕ ತಂತ್ರಜ್ಞಾನದಿಂದ ರೋಗಿಯ ಲಕ್ಷಣಗಳು ಶೀಘ್ರಗತಿಯಲ್ಲಿ ಕಂಡು ಹಿಡಿಯಲು ಸಾಧ್ಯವಾಗುತ್ತಿದೆ ಎಂದು ಆಯು ಡಿವೈಜ್ಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆದರ್ಶ ಹೇಳಿದರು.ನಗರದ ಆದಿಚುಂಚನಗಿರಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ಧ ’ವಿದ್ಯುಯೂತ್’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚೆಗೆ ಹೊಸ ಹೊಸ ಆವಿಷ್ಕಾರಗಳು ಪ್ರಚಲಿತಕ್ಕೆ ಬರುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಹೊಸ ಆಯಾಮವನ್ನೇ ವೈದ್ಯಲೋಕ ಸೃಷ್ಟಿಸುತ್ತಿದೆ. ಆಪರೇಷನ್ ಅಥವಾ ಇನ್ನಿತರೆ ಚಿಕಿತ್ಸೆಗಳಿಗೆ ತಂತ್ರಜ್ಞಾನ ಪೂರಕ ವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಉತ್ತಮ ಆರೋಗ್ಯ ಸೇವಾ ಅನುಭವಕ್ಕಾಗಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇಜಿಜಿ, ಡಿಜಿಟಲ್ ಸ್ಟೆತೊ ಸ್ಕೋಪ್ ಹಾಗೂ ಭವಿಷ್ಯದಲ್ಲಿ ಬೆರಳು ಆಧಾರಿತ ರಕ್ತದೊತ್ತಡ ಕಂಡು ಹಿಡಿಯಬಹುದು. ಸ್ಪಷ್ಟತೆ ಮತ್ತು ನಿಖರತೆಗಾಗಿ ಮೀಸಲಾದ ಫಿಲ್ಟರ್ ಅನ್ನು ಒದಗಿಸಲು ಈ ತಂತ್ರಜ್ಞಾನ ವಿನ್ಯಾ ಸಗೊಳಿಸಲಾಗಿದೆ ಎಂದು ಹೇಳಿದರು.ನಿಖರವಾದ ರೋಗನಿರ್ಣಯ ಮತ್ತು ಮೇಲ್ವಿಚಾರಣೆಗಾಗಿ ಔಷಧದೊಂದಿಗೆ ತಂತ್ರಜ್ಞಾನವನ್ನು ಮಿಶ್ರಣ ಮಾಡುವ ಮೂಲಕ ಆರೋಗ್ಯ ಸುಧಾರಿಸಲು ಮತ್ತು ಜೀವಿತಾವಧಿ ವಿಸ್ತರಿಸಲು ನಾವು ಶ್ರಮಿಸುತ್ತೇವೆ. ಆರೋಗ್ಯದ ಫಲಿತಾಂಶಗಳನ್ನು ಹೆಚ್ಚಿಸಲು ನವೀನ ಆರೋಗ್ಯ ಉತ್ಪನ್ನ ಮತ್ತು ಅಸಾಧಾರಣ ಸೇವೆ ನೀಡುವುದು ಧ್ಯೇಯವಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್, ಜ್ಞಾನದ ಬೆಳಕು ಎಲ್ಲಿಂದ ಬಂದರೂ ಸ್ವೀಕರಿಸುವ ಗುಣ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಜ್ಞಾನದ ಹಸಿವಿದ್ದವನಿಗೆ ಮಾತ್ರ ಬೆಳಕಿನ ಮಹತ್ವ ತಿಳಿಯಲಿದೆ. ಹೀಗಾಗಿ ಹೊಸ ಆವಿಷ್ಕಾರಗಳತ್ತ ಆಸಕ್ತಿ ವಹಿಸಬೇಕು ಎಂದು ಹೇಳಿದರು.ಬದುಕಿನಲ್ಲಿ ವಿದ್ಯಾಭ್ಯಾಸ ಹಾಗೂ ಅನುಭವಗಳು ಆಳವಾಗಿ ಇದ್ದಲ್ಲಿ ಯಾವುದೇ ಜಟಿಲ ಸಮಸ್ಯೆಯಾದರೂ ಕ್ಷಣಾರ್ಧದಲ್ಲಿ ಅರಿತು ಪರಿಹರಿಸಲು ಸಾಧ್ಯ. ಇದಕ್ಕೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಕೆ. ಆದರ್ಶ ಅತ್ಯುತ್ತಮ ಉದಾಹರಣೆ ಎಂದ ಅವರು, ಕೋವಿಡ್ ಸಮಯದಲ್ಲಿ ವಿಶೇಷ ಸೇವೆ ಸಲ್ಲಿಸುವ ಮೂಲಕ ಜೀವ ಮತ್ತು ಜೀವನ ಕಾಪಾಡಿದ್ದಾರೆ ಎಂದರು.ವಿದ್ಯುತ್ ಮತ್ತು ವಿದ್ಯುನ್ಮಾನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಆರ್.ವೀರೇಂದ್ರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ, ವಿನಯ ಅತಿ ಮುಖ್ಯ. ಕಾರ್ಯಾಗಾರದ ವಿಶೇಷ ಮಾಹಿತಿ ಅರಿತು ಮುನ್ನಡೆದರೆ ಮಾತ್ರ ಸಮಾಜದಲ್ಲಿ ಸ್ಥಾನಮಾನಗಳಿಸಲು ಸಾಧ್ಯ ಹಾಗೂ ಸುಂದರತೆ ಬದುಕು ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜೆ.ಎಂ.ಸತ್ಯನಾರಾಯಣ್, ಮಾಹಿತಿ ವಿಜ್ಞಾನದ ಮುಖ್ಯಸ್ಥ ಡಾ. ಸಂಪತ್, ಸಂಯೋಜಕ ವಸಂತ್‌ಕುಮಾರ್, ಶ್ರೀಧರ್ ಉಪಸ್ಥಿತರಿದ್ದರು. ಲಿಖಿತ ಸಂಗಡಿಗರು ಪ್ರಾರ್ಥಿಸಿದರು. ಸ್ಪೂರ್ತಿ ಸ್ವಾಗತಿಸಿದರು. ವಿಜಯ ವಿಕ್ರಮ್, ಶಾಯಿಲಾ ನಿರೂಪಿಸಿದರು. ಅರ್ಚನ ವಂದಿಸಿದರು.26 ಕೆಸಿಕೆಎಂ 1ಚಿಕ್ಕಮಗಳೂರಿನ ಆದಿಚುಂಚನಗಿರಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ಧ ’ವಿದ್ಯುಯೂತ್’ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್‌ ಉದ್ಘಾಟಿಸಿದರು. ಕೆ. ಆದರ್ಶ್, ಡಾ ಜೆ.ಎಂ. ಸತ್ಯನಾರಾಯಣ್‌ ಇದ್ದರು.

Share this article