ಎಚ್.ಜಿ.ರವಿಕುಮಾರ್
ಚನ್ನಪಟ್ಟಣ ಉಪ ಚುನಾವಣೆ ಹವಾ ಪಕ್ಕದ ಮದ್ದೂರಿಗೂ ತಟ್ಟಿದೆ. ಚುನಾವಣೆಯ ಸೋಲು- ಗೆಲುವಿನ ಲೆಕ್ಕಾಚಾರ ತಾಲೂಕಿನಲ್ಲೂ ಬಿರುಸಾಗಿ ನಡೆದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪರ ಬೆಟ್ಟಿಂಗ್ ಭರಾಟೆಯೂ ಜೋರಾಗಿದ್ದು, ಇಬ್ಬರ ಪರವಾಗಿಯೂ ಲಕ್ಷಾಂತರ ರು. ಹಣವನ್ನು ಪಣಕ್ಕಿಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ಕುರಿತಂತೆ ಎರಡೂ ಪಕ್ಷದವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಗೆಲುವಿನ ಲೆಕ್ಕಾಚಾರ ಹಾಕಿದ್ದಾರೆ. ಆ ಮತ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್ನಲ್ಲಿ ತೊಡಗಿದ್ದಾರೆ.೫೦ ಸಾವಿರ ರು.ನಿಂದ ೫ ಲಕ್ಷದವರೆಗೆ ಬೆಟ್ಟಿಂಗ್:
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ಗೆ ಚುನಾವಣಾ ಪೂರ್ವದಲ್ಲಿದ್ದ ವಾತಾವರಣಕ್ಕೂ ಚುನಾವಣೆ ವೇಳೆಗೆ ಸೃಷ್ಟಿಯಾದ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ದೇವೇಗೌಡರ ಆಗಮನ ನಿಖಿಲ್ ಪರವಾಗಿ ಹೆಚ್ಚಿನ ಶಕ್ತಿ ತಂದುಕೊಟ್ಟರೆ ಜಮೀರ್ ಅಹಮದ್ ಮಾತುಗಳು ನಿಖಿಲ್ಗೆ ವರದಾನವಾಗಿರುವುದಾಗಿ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಂಡಿರುವವರ ಹೇಳಿಕೆಯಾಗಿದೆ.
ಮಾಜಿ ಸಂಸದ ಡಿ.ಕೆ.ಸುರೇಶ್ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಗೆಲುವಿಗಾಗಿ ಭಾರೀ ಶ್ರಮವಹಿಸಿದ್ದಾರೆ. ಚುನಾವಣೆಯ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕೈ ಕಾರ್ಯಕರ್ತರನ್ನೆಲ್ಲಾ ಒಗ್ಗೂಡಿಸಿಕೊಂಡು ಚುನಾವಣೆ ನಡೆಸಿದ್ದಾರೆ. ಇದರೊಂದಿಗೆ ಯೋಗೇಶ್ವರ್ ವರ್ಚಸ್ಸು ಕ್ಷೇತ್ರದಲ್ಲಿರುವುದರಿಂದ ಸಿ.ಪಿ.ಯೋಗೇಶ್ವರ್ಗೆ ಜಯ ದೊರಕಲಿದೆ ಎಂಬ ವಿಶ್ವಾಸ ಮದ್ದೂರು ಭಾಗದ ಅಭಿಮಾನಿಗಳಲ್ಲಿದೆ.
ಚನ್ನಪಟ್ಟಣ ಉಪ ಚುನಾವಣೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿಕೆಯಿಂದ ಕೈ ಕಾರ್ಯಕರ್ತರಲ್ಲಿ ಸೋಲಿನ ಆತಂಕ ಶುರುವಾಗಿದೆ. ಜಮೀರ್ ಅವರನ್ನು ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕಳುಹಿಸಬಾರದಿತ್ತು ಎಂಬ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗಳು ಶುರುವಾಗಿವೆ.
ನಿಖಿಲ್ ನನ್ನ ಮಗನಿದ್ದಂತೆ ಎಂದಾಗಲೇ ನಾವು ಅರ್ಥ ಮಾಡಿಕೊಳ್ಳಬೇಕಿತ್ತು. ಜಮೀರ್ನನ್ನು ಪ್ರಚಾರಕ್ಕೇ ಕಳಿಸಿದ್ದೇ ತಪ್ಪಾಯಿತು ಎಂದು ನಾಗಮಂಗಲ ಯುವ ಕಾಂಗ್ರೆಸ್ ಟೀಮ್ ಜಮೀರ್ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಕಿಡಿಕಾರಿದೆ.