ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬೆಳಗ್ಗೆ 10 ಗಂಟೆಯಿಂದ 18 ಅರ್ಜಿ ಸ್ವೀಕಾರ ಕೇಂದ್ರಗಳಲ್ಲಿ ಕೇವಲ 34 ಅರ್ಜಿಗಳು ಸ್ವೀಕೃತವಾಗಿದ್ದು, ಅರ್ಜಿದಾರರ ಕೂಗಾಟ, ಅಧಿಕಾರಿಗಳೊಂದಿಗೆ ವಾಗ್ವಾದದಿಂದ ಕಾರ್ಯಕ್ರಮ ಕೆಲಕಾಲ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿತು.
ಶನಿವಾರ ತೇರದಾಳದ ಗುರುಕುಲ ಆವರಣದಲ್ಲಿರುವ ಜಿನಸೇನಾಚಾರ್ಯ ಸಭಾಮಂಟಪದಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಯೋಜನೆಯಡಿ ಪ್ರಜಾ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿಗದಿತ ಸಮಯಕ್ಕಿಂತ ಸುಮಾರು ಎರಡು ಗಂಟೆ ತಡವಾಗಿ ಆರಂಭವಾದ ಕಾರ್ಯಕ್ರಮಕ್ಕೆ ಸಚಿವ ವಿಜಯಾನಂದ ಕಾಶಪ್ಪನವರ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.ಎಸಿ ಶ್ವೇತಾ ಬೀಡಕರ ಮಾತನಾಡಿ, ಸರ್ಕಾರದ ವಿವಿಧ ಸೌಲಭ್ಯಗಳನ್ನು ಜನರಿಗೆ ನೇರವಾಗಿ ತಲುಪಿಸುವ ಉದ್ದೇಶದಿಂದ ಜಿಲ್ಲಾಡಳಿತ ತಾಲೂಕು ಕೇಂದ್ರಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಗುಳೇದಗುಡ್ಡದಲ್ಲಿ ಮೊದಲ ಕಾರ್ಯಕ್ರಮ ನಡೆದಿದ್ದು, ತೇರದಾಳದಲ್ಲಿ ಎರಡನೇ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಸರ್ಕಾರದ ವಿವಿಧ ಯೋಜನೆಗಳು ರೈತರು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೆರವಾಗುತ್ತಿವೆ. ಯುವಶಕ್ತಿಯನ್ನು ಸಂಘಟಿಸುವ ಉದ್ದೇಶದಿಂದ ಪ್ರತಿ ಗ್ರಾಪಂ ವ್ಯಾಪ್ತಿಯ ಯುವಕ ಸಂಘಗಳಿಗೆ ₹5 ಲಕ್ಷ ಅನುದಾನ ನೀಡುವ ಮೂಲಕ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಯೋಜನಾಧಿಕಾರಿ ನಾನಾಸಾಹೇಬ ಬಸರಿಗಿಡದ, ಲೆಕ್ಕಾಧಿಕಾರಿ ಸಿದ್ದು ಉಕ್ಕಲಿ, ತಹಶೀಲ್ದಾರ ವಿಜಯಕುಮಾರ ಕಡಕೋಳ, ಗ್ರೇಡ್ 2 ತಹಶೀಲ್ದಾರರಾದ ಎಸ್.ಬಿ.ಕಾಂಬಳೆ, ಸುನೀಲಕುಮಾರ, ಉಪತಹಶೀಲ್ದಾರ ಸಂಗಮೆಶ ಕಾಗಿಯವರ, ಶಿರಸ್ತೇದಾರ ರಾಜಶೇಖರ ಸಾತಿಹಾಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಆಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ಪ್ರಕಾಶ ಪವಾರ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್ಸೈ ಶಿವಾನಂದ ಸಿಂಗನ್ನವರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿದ್ದರು.
ಕಾರ್ಯಕ್ರಮ ಆರಂಭವಾದ ಕೆಲವೇ ಹೊತ್ತಿನಲ್ಲಿ ಹೊಸ ಪಡಿತರ ಚೀಟಿ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತು. ಇದರಿಂದ ಕೆಲ ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಬುದ್ಧಿಮಾಂದ್ಯ ಮಹಿಳೆಯೊಬ್ಬರು ಪೊಲೀಸ್ ಇಲಾಖೆಯಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ವೇದಿಕೆಯ ಸಮೀಪ ಕೂಗಾಟ ನಡೆಸುತ್ತ ಬೊಬ್ಬೆ ಹಾಕಿದಳು.
ಜಿಲ್ಲಾ ಹೆಸ್ಕಾಂ ಅಭಿಯಂತರ ಯಂಕಂಚಿಗೆ ಕನಿಷ್ಠ 12 ತಾಸು ಸಿಂಗಲ್ಫೇಸ್, 6.5 ತಾಸು ತ್ರೀಫೇಸ್ ವಿದ್ಯುತ್ ಪೂರೈಸುವಂತೆ ಸಚಿವ ಕಾಶಪ್ಪನವರ ತಾಕೀತು ಮಾಡಿದರು. ಜಿಎಲ್ಬಿಸಿ ಕಾಲುವೆ ನೀರು ಹರಿಸಲು ಒತ್ತಾಯಿಸಿದ ರೈತರಿಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೀರು ಹರಿಸುವಂತೆ ಸೂಚಿಸಿದರು. ಕಳೆದ ೮ ತಿಂಗಳಿಂದ ವಿಧವಾ, ವಿಕಲಚೇತನ, ಸಂಧ್ಯಾಸುರಕ್ಷಾ ಯೋಜನೆಯ ಮಾಸಾಶನ ದೊರೆತಿಲ್ಲವೆಂದು ಹಲವರು ಅಲವತ್ತುಗೊಂಡರು.