ಕನ್ನಡಪ್ರಭ ವಾರ್ತೆ ತಿಪಟೂರು
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಹಾಗೂ ಧಾರ್ಮಿಕ ಕಾರ್ಯಗಳಿಗೆ ತಮ್ಮ ಕೈಲಾದ ದಾನ ಧರ್ಮ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದಲ್ಲದೆ ಮನುಷ್ಯ ಜನ್ಮ ಸಾರ್ಥಕವಾಗಲಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.ತಾಲೂಕು ಹೊನ್ನವಳ್ಳಿಯ ಶ್ರೀ ಗುರು ಕರಿಸಿದ್ದೇಶ್ವರ ಮಠದಲ್ಲಿ ನಡೆದ ಕರ್ಪೂರ ಸೇವೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ದೇವಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ದಾಸೋಹ ಭವನಕ್ಕೆ ಭಕ್ತರ ಸಹಕಾರ ಅಗತ್ಯವಿದ್ದು, ಭಕ್ತರೊಂದಿಗೆ ನಾವು ಸಹ ಕೈಜೋಡಿಸುತ್ತೇನೆ ಎಂದರು.ಮನುಷ್ಯನು ದೇವಾಲಯಗಳ ನಿರ್ಮಾಣ ಮಾಡುವುದರ ಜೊತೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವಂತಹ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಧರ್ಮ ಮಾರ್ಗದಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸಿ ಅದರಲ್ಲಿನ ಒಂದು ಭಾಗವನ್ನು ದಾನ, ಸೇವೆಗಳ ರೂಪದಲ್ಲಿ ನೀಡುವ ಮೂಲಕ ಜೀವನವನ್ನು ಸಂತೃಪ್ತಿಗೊಳಿಸಿಕೊಳ್ಳಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಸ್ಥಾನ ಸಮಿತಿ ವತಿಯಿಂದ ಐಟಿಐ ಕಾಲೇಜು ಕಟ್ಟಡ ನಿರ್ಮಾಣದ ಬಗ್ಗೆ ಚಿಂತಿಸಲಾಗುತ್ತಿದೆ. ಪ್ರಸ್ತುತ ದೇವಸ್ಥಾನದ ವತಿಯಿಂದ ಸಮುದಾಯ ಭವನ, ರಾಜ ಗೋಪುರ ನಿರ್ಮಾಣ ಮತ್ತು ದೇವಸ್ಥಾನದ ಸುತ್ತಲೂ ಕಾಂಪೌಂಡ್ ಗೋಡೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೇವಸ್ಥಾನ ಅಭಿವೃದ್ಧಿಯಾದಂತೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಲಭ್ಯಗಳು ಕೈಗೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಗುಣಿಯ ರಂಭಾಪುರಿ ಶಾಖಾಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಚಿಕ್ಕನಾಯಕನಹಳ್ಳಿ ಕಪ್ಪೂರು ಗದ್ದಿಗೆ ಮಠದ ವಾಗೀಶ ಪಂಡಿತ್ ಸ್ವಾಮೀಜಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ನಂತರ ಎಲ್ಲಿಯೂ ಪ್ರಸಾದ ವಿನಯೋಗ ನಡೆಯಿತು.ಫೋಟೋ 24-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಶ್ರೀ ಗುರು ಕರಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ.