ಚಿಂಚೋಳಿ: ಚತುಷ್ಫಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಅಸ್ತು

KannadaprabhaNewsNetwork | Published : Feb 25, 2024 1:50 AM

ಸಾರಾಂಶ

ಚಿಂಚೋಳಿ ತಾಲೂಕಿಗೆ ಕೇಂದ್ರ ಸರ್ಕಾರದ ಒಟ್ಟು ರು.೪೦೫.೩೦ ಕೋಟಿ ಅನುದಾನದಲ್ಲಿ ೧೫.೮೭ ಕಿಮೀ ಚತುಷ್ಫಥ ರಸ್ತೆ ಮಂಜೂರಾಗಿದ್ದು, ಹೆದ್ದಾರಿಯು ತೆಲಂಗಾಣ ಗಡಿಯಿಂದ ಮಿರಿಯಾಣ, ಪೋಲಕಪಳ್ಳಿ, ಚಿಂಚೋಳಿಯವರೆಗೆ ಚತುಷ್ಫಥ ರಸ್ತೆ ಮಂಜೂರಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಬೀದರ್‌ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ತಾಲೂಕಿಗೆ ಕೇಂದ್ರ ಸರ್ಕಾರದ ಒಟ್ಟು ₹೪೦೫.೩೦ ಕೋಟಿ ಅನುದಾನದಲ್ಲಿ ೧೫.೮೭ ಕಿಮೀ ಚತುಷ್ಫಥ ರಸ್ತೆ ಮಂಜೂರಾಗಿದ್ದು, ಹೆದ್ದಾರಿಯು ತೆಲಂಗಾಣ ಗಡಿಯಿಂದ ಮಿರಿಯಾಣ, ಪೋಲಕಪಳ್ಳಿ, ಚಿಂಚೋಳಿಯವರೆಗೆ ಚತುಷ್ಫಥ ರಸ್ತೆ ಮಂಜೂರಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ, ಸದರಿ ರಾಷ್ಟ್ರೀಯ ಹೆದ್ದಾರಿಯಾಗಿರುವ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ ಗಡ್ಕರಿ ಅವರು, ಕೇಂದ್ರ ಸಚಿವ ಖೂಬಾ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಈ ಹೆದ್ದಾರಿಯೂ ಎನ್.ಎಚ್. ೧೬೭ ಕಿ.ಮೀ ನಿಂದ ಪ್ರಾರಂಭವಾಗಿ ಒಟ್ಟು ೧೫.೮೦ ಕಿಮೀ. ವರೆಗೆ ಚತುಷ್ಫಥ ರಸ್ತೆ ನಿರ್ಮಾಣವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಚತುಷ್ಫಥ ರಸ್ತೆಯ ನಿರ್ಮಾಣದಿಂದ ಚಿಂಚೋಳಿ ತಾಲೂಕಿಗೆ ಹೊಸ ಕಳೆ ಬರಲಿದ್ದು, ಸುತ್ತಮುತ್ತಲಿನ ಎಲ್ಲಾ ಗ್ರಾಮಗಳು ಅಭಿವೃದ್ಧಿಗೊಳ್ಳಲಿವೆ ಹಾಗೂ ನಗರದ ಸೌಂದರ್ಯೀಕರಣವು ಹೆಚ್ಚಲಿದೆ, ಹೆದ್ದಾರಿಗೆ ಹೊಂದಿಕೊಂಡ ಎಲ್ಲಾ ಗ್ರಾಮಗಳಲ್ಲಿಯ ಜನರಿಗೂ ಮತ್ತು ಬೆರೆ ಭಾಗದ ಜನರಿಗೂ ಈ ಹೆದ್ದಾರಿಯಿಂದ ಹಲವಾರು ರಿತಿಯ ಸಹಾಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಕಳೆದ ೧೦ ವರ್ಷಗಳಲ್ಲಿ ಪಿ.ಎಂ.ಜಿ.ಎಸ್.ವೈ. ಅಡಿ ಸುಮಾರು ₹೬೦ ಕೋಟಿ ಅನುದಾನದಲ್ಲಿ ೬೦ ಕಿಮೀ. ಗ್ರಾಮೀಣ ರಸ್ತೆಗಳು ನಿರ್ಮಿಸಲಾಗಿದೆ, ₹೫ ಕೋಟಿ ವೆಚ್ಚದಲ್ಲಿ ಕೊಡ್ಲಿ ದಿಂದ ತಾಂಡುರ ವಾಯಾ ಚಿಂಚೋಳಿವರೆಗೆ, ₹೮ ಕೋಟಿ ವೆಚ್ಚದಲ್ಲಿ ಚಿಂಚೋಳಿ ಮುಖ್ಯರಸ್ತೆಯ ತಾಂಡೂರ ರಸ್ತೆಯಿಂದ ಕೊಂಚಾವರಂವರೆಗೆ, ₹೨೦ ಕೋಟಿ ವೆಚ್ಚದಲ್ಲಿ ಕೊಡ್ಲಿ ಕ್ರಾಸ್‌ನಿಂದ ಚಂದನಕೇರಾವರೆಗೆ ರಸ್ತೆ ಅಭಿವೃದ್ಧಿಯನ್ನು ಸೆಂಟ್ರಲ್ ರೋಡ್ ಫಂಡ್ ಅಡಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Share this article