ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದ್ಯ ೧೫ ದಿನಗಳಿಗೊಮ್ಮೆ ಪರಿಶೀಲನಾ ಕಾರ್ಯ ನಡೆಸುತ್ತಿದ್ದು, ಇದನ್ನು ವಾರಕ್ಕೊಮ್ಮೆ ಪರಿಶೀಲಿಸಿ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನೀರನ್ನು ನೀರಿನ ಮೂಲದಲ್ಲಿ ಪರಿಶೀಲಿಸುವುದರ ಜೊತೆಗೆ ಅದರ ವಿತರಣಾ ಬಿಂದುವಿನಲ್ಲೂ ಸಹ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅವರು ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ಪರಿಶೀಲಿಸಬೇಕು. ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳು ವಾರಕೊಮ್ಮೆ ಮಾದರಿಗಳನ್ನು ನೀಡಿ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.ಕುಡಿಯುವ ನೀರು ಸಂಗ್ರಹಿಸಿ ವಿತರಣೆ ಮಾಡುವ ಓವರ್ ಹೆಡ್ಟ್ಯಾಂಕ್ಗಳು ಹಾಗೂ ಜಲ ಸಂಗ್ರಹಗಾರಗಳನ್ನು ಕಡ್ಡಾಯವಾಗಿ ವರ್ಷಕ್ಕೆ ಎರಡು ಬಾರಿ ಶುಚಿಗೊಳಿಸಿ ವರದಿ ನೀಡಬೇಕು ಎಂದರು.
ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿ ರಹಿತ ಬಡವರ ಮಾಹಿತಿ ಸಂಗ್ರಹಿಸಲು ನಗರಸಭೆ ಕಚೇರಿ ವತಿಯಿಂದ ಪ್ರಚಾರ ಕೈಗೊಂಡು ಅರ್ಜಿಗಳನ್ನು ಸ್ವೀಕರಿಸಿ ನಿವೇಶನ ಹಾಗೂ ವಸತಿ ರಹಿತರ ಮಾಹಿತಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಮಂಜೂರಾಗಿರುವ ಅನುದಾನವನ್ನು ವೆಚ್ಚ ಮಾಡಿ ಶೇ.೧೦೦ ರಷ್ಟು ಗುರಿ ಸಾಧಿಸಬೇಕು. ಇಂದಿರಾ ಕ್ಯಾಂಟೀನ್ಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿರುವ ಆಹಾರದ ಶುದ್ಧತೆ, ಪ್ರಮಾಣ ಮತ್ತು ಗ್ರಾಹಕರ ತೃಪ್ತಿ ಎಲ್ಲದರ ಬಗ್ಗೆ ಗಮನಹರಿಸಿ ಗ್ರಾಹಕರಿಗೆ ಪ್ರತಿದಿನ ಆರೋಗ್ಯಕರ ಆಹಾರ ಒದಗಿಸಬೇಕು ಎಂದು ಸಲಹೆ ನೀಡಿದರು.
ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ಉಳಿತಾಯವಾಗಿರುವ ಹಣವನ್ನು ಸಮಪರ್ಕವಾಗಿ ಗೃಹ ಅಭಿವೃದ್ಧಿಗಾಗಿ ಬಳಸಿ, ನಿವೇಶನ ರಹಿತರಿಗಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ನಿವಾರಿಸಿ ಫಲನುಭವಿಗಳಿಗೆ ನಿವೇಶನ ಒದಗಿಸುವಲ್ಲಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.