ಚನ್ನಗಿರಿ: ಪಟ್ಟಣದ ತುಮ್ಕೋಸ್ ಸಂಸ್ಥೆಯಲ್ಲಿ ಕಳಪೆ ಗುಣಮಟ್ಟದ ಅಡಕೆಯನ್ನು ಖರೀದಿಗೆ ಪಾಸು ಮಾಡಿ, ಗುಣಮಟ್ಟದ ಅಡಕೆಯನ್ನು ತಿರಸ್ಕರಿಸಿರುವ ಕ್ರಮ ಪ್ರಶ್ನಿಸಿ, ಸಂಘದ ಸದಸ್ಯರು ಮತ್ತು ರೈತರು ಧಿಡೀರನೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಗುರುವಾರ ಅಡಕೆಯ ಗುಣಮಟ್ಟವನ್ನು ತಹಸೀಲ್ದಾರ್ ಶಂಕರಪ್ಪ ನೇತೃತ್ವದಲ್ಲಿ ಮರುಪರಿಶೀಲನೆ ನಡೆಸಲಾಯಿತು.
ತಹಸೀಲ್ದಾರರು ಈ ಕುರಿತು ಮಾತನಾಡಿ, ಸದರಿ ವಿಚಾರವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂದು ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋಗಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲಾಯಿತು. ಮೂವರು ರೈತರು ಮಾರಾಟಕ್ಕೆ ತಂದಿದ್ದ 71 ಚೀಲ ಅಡಕೆಯನ್ನು ಪೊಲೀಸ್ ಅಧಿಕಾರಿಗಳ ಸಮಕ್ಷಮ ತುಮ್ಕೋಸ್ ಗೋದಾಮಿನಲ್ಲಿರಿಸಿ, ಸೀಲ್ ಮಾಡಲಾಯಿತು ಎಂದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಮೂರನೇ ತಂಡದಿಂದ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ಮನವಿ ಮಾಡಲಾಗಿತ್ತು. ಅಂತೆಯೇ, ಇಲ್ಲಿನ ಎಪಿಎಂಸಿ ಸಿಬ್ಬಂದಿ ಸಹಯೋಗದಲ್ಲಿ 71 ಚೀಲದ ಅಡಕೆಯ ಗುಣಮಟ್ಟವನ್ನು ಮರುಪರಿಶೀಲನೆ ಮಾಡಲಾಗಿದೆ. ಒಟ್ಟು 3,224 ಕೆ.ಜಿ. ತೂಕದ ಅಡಕೆಯಲ್ಲಿ 100 ಕೆ.ಜಿ.ಗೆ ಶೇ.7.59ರಷ್ಟು ಗೊರಬಲು ಬಂದಿದ್ದು, ಉಳಿದಂತೆ ಎಲ್ಲವೂ ರಾಶಿ ಅಡಕೆಯಾಗಿದೆ ಎಂದು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾಹಿತಿ ನೀಡಿದರು.