ರಾಮನಗರ: ಯುದ್ಧದಲ್ಲಿ ತಾಂತ್ರಿಕ ನಿಪುಣರು, ಅಖಂಡ ಭಾರತ ಸ್ವರಾಜ್ಯ ಕನಸು ಕಂಡ ಧೀಮಂತ ನಾಯಕರಾದ ಛತ್ರಪತಿ ಶಿವಾಜಿ ಮಹಾರಾಜರು ಕೆಚ್ಚೆದೆಯ ಹೋರಾಟಗಾರ ಹಾಗೂ ಭಾರತೀಯ ನೌಕಾಪಡೆಯ ಪಿತಾಮಹ ಎಂದು ಸಮುದಾಯದ ಮುಖಂಡರಾದ ನವೀನ್ ಕುಮಾರ್ ಸಿಂಧೆ ಬಣ್ಣಿಸಿದರು.
ಶಿವಾಜಿ ಮಹಾರಾಜರು ಯುದ್ಧ ಕಲೆಗಳು, ಕತ್ತಿವರಸೆ, ಕುದುರೆ ವರಸೆಗಳನ್ನು ತನ್ನ ಗುರುಗಳಾದ ದಾದಾಜಿ ಕೊಂಡದೇವ ಅವರಿಂದ ತಿಳಿದುಕೊಂಡಿದ್ದರು. ಹಾಗೆಯೇ ಮಹಾಪುರುಷ ರಾಮದಾಸ ಅವರ ಮಾರ್ಗದರ್ಶನದಲ್ಲಿ ಶಿವಾಜಿ ಮಹಾರಾಜರು ಆದರ್ಶ ರಾಜರಾಗಿದ್ದರು. ಶಿವಾಜಿ ಮಹಾರಾಜರು ಕೇವಲ ಒಂದೇ ಸಮುದಾಯಕ್ಕೆ ಸೀಮಿತರಾಗದೇ ಎಲ್ಲಾ ವರ್ಗದವರನ್ನು ರಕ್ಷಿಸುತ್ತಿದ್ದರು. ಚಿಕ್ಕವಯಸ್ಸಿನಿಂದಲೂ ಹಿಂದೂ ಧರ್ಮವನ್ನು ರಕ್ಷಿಸುವ ಆಲೋಚನೆ ಹೊಂದಿದ್ದರು ಎಂದು ಹೇಳಿದರು.
ಸಮುದಾಯದ ಮುಖಂಡರಾದ ಕವಿತಾರಾವ್ ಮಾತನಾಡಿ, ಸೈನ್ಯಾಧಿಕಾರಿಯ ಮಗನಾಗಿ ದೂರದ ಆಲೋಚನೆಯಿಟ್ಟುಕೊಂಡು ಛತ್ರಪತಿ ಶಿವಾಜಿ ಮಹಾರಾಜರು ರಾಜ್ಯವನ್ನು ಮುನ್ನಡೆಸಿದವರು . ಅವರು ದಿಟ್ಟ ಗುರಿ ಹಾಗೂ ಪ್ರಬಲ ಆತ್ಮ ವಿಶ್ವಾಸ ಹೊಂದಿದ್ದರು. ಅವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಲಭಿಸುತ್ತಿತ್ತು. ಎಲ್ಲರೂ ಶಿವಾಜಿ ಮಹಾರಾಜರ ದಿಟ್ಟತನ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಕರಾದ ಸತೀಶ್ ಮಾತನಾಡಿ, ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆಗೆ ಹೋರಾಡಿದವರು, ಇಂದಿನ ನೌಕಾಪಡೆಗೆ ಅಂದೇ ಪ್ರಬಲ ತಳಪಾಯ ಹಾಕಿಕೊಟ್ಟವರು, ರಾಷ್ಟ್ರ ನಿರ್ಮಾಣಕ್ಕೆ ಸ್ವಾಭಿಮಾನಿಯಾಗಿ ಹೋರಾಡಿದವರು ಛತ್ರಪತಿ ಶಿವಾಜಿ ಮಹಾರಾಜರು ಅವರ ಶೌರ್ಯ, ಸಾಹಸ ಹಾಗೂ ರಾಷ್ಟ್ರ ಭಕ್ತಿ ನಮಗೆಲ್ಲಾ ಪ್ರೇರಣೆ ಎಂದು ತಿಳಿಸಿದರು.
ಸಮುದಾಯದ ಮುಖಂಡರಾದ ಶ್ರೀನಿವಾಸ್ ರಾವ್ ನಲಿಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರುಗಳಾದ ನಾರಾಯಣ್ ರಾವ್ ಚವ್ಹಾಣ್, ಶಂಕರ ರಾವ್ ಚವ್ಹಾಣ್, ತುಕಾರಾಂ ರಾವ್ ಖಾಂತೆ ಸೇರಿದಂತೆ ಸಮುದಾಯದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.19ಕೆಆರ್ ಎಂಎನ್ 7.ಜೆಪಿಜಿ
ರಾಮನಗರದ ಕಂದಾಯ ಭವನದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಿಸಲಾಯಿತು.