ನರಗುಂದ: ಬೆಂಬಲ ಬೆಲೆಯಡಿ ಕಡಲೆ ಖರೀದಿ ಪ್ರಕ್ರಿಯೆಯನ್ನು ಮೇ 28ರ ವರೆಗೆ ವಿಸ್ತರಿಸಲಾಗಿದೆ. ಇದರಿಂದ ರೈತರು ಹರ್ಷಗೊಂಡಿದ್ದಾರೆ.
ಅಧಿಕಾರಿಗಳಿಗೆ ಪತ್ರ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನ ಕಡಲೆ ಹುಟ್ಟುವಳಿ ಖರೀದಿ ಅವಧಿ ವಿಸ್ತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಶಾಸಕ ಸಿ.ಸಿ. ಪಾಟೀಲ ಪತ್ರ ಬರೆದು ಆಗ್ರಹಿಸಿದ್ದರು.
ಜಿಲ್ಲಾದ್ಯಂತ 72 ಕಡಲೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಖರೀದಿ ಕೇಂದ್ರಗಳಲ್ಲಿ ಒಟ್ಟು 19133 ರೈತರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಈವರೆಗೆ ಒಟ್ಟು 15510 ಜನ ರೈತರು ಕಡಲೆ ಮಾರಾಟ ಮಾಡಿದ್ದಾರೆ. ಜಿಲ್ಲೆ ಸೇರಿ ಎಲ್ಲ ತಾಲೂಕಿನಲ್ಲಿ 3623 ರೈತರು ಕಡಲೆ ಹುಟ್ಟುವಳಿ ಮಾರಾಟ ಮಾಡಬೇಕಾಗಿದೆ.ಬೆಂಬಲ ಬೆಲೆ ಯೋಜನೆಯಡಿ ರೈತರ ಹಿತದೃಷ್ಟಿಯಿಂದ ಈಗಾಗಲೇ ನೋಂದಣಿ ಆಗಿರುವ ರೈತರ ಕಡಲೆ ಖರೀದಿ ಕಾಲಾವಧಿ ವಿಸ್ತರಿಸಲು ಜಿಲ್ಲಾಧಿಕಾರಿಗಳ ಮೂಲಕ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯಲಾಗಿತ್ತು. ಇದಕ್ಕೆ ಸರ್ಕಾರ ಸ್ಪಂದನೆ ಮಾಡಿದ್ದು ಹರ್ಷ ತಂದಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಮುಂಡರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ, ಶರಣ ಎಚ್.ಎಸ್. ಪಾಟೀಲ ಪ್ರತಿಷ್ಠಾನ, ರಾಮೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 7 ಹಾಗೂ 8ರಂದು ಕನ್ನಡ ಕವಿತೆಗಳ ವಾಚನ- ಗೀತಗಾಯನ ಮಕ್ಕಳ ಶಿಬಿರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ಜರುಗಲಿದೆ.ಮೇ 7ರಂದು ಬೆಳಗ್ಗೆ 10.30ಕ್ಕೆ ಶಿಬಿರದ ಉದ್ಘಾಟನೆ ಜರುಗಲಿದೆ. ಎಸ್ಡಿಎಂಸಿ ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ ವಹಿಸುವರು. ಶರಣ ಎಚ್.ಎಸ್. ಪಾಟೀಲ ಪ್ರತಿಷ್ಠಾನದ ಮುಖ್ಯಸ್ಥರು ಹಾಗೂ ಶಿಕ್ಷಣಪ್ರೇಮಿ ಆನಂದಗೌಡ ಪಾಟೀಲ ಶಿಬಿರದ ಉದ್ಘಾಟನೆ ನೆರವೇರಿಸಲಿದ್ದಾರೆ.ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ, ಶಿಕ್ಷಣ ಪ್ರೇಮಿಗಳಾದ ಬಸವರಾಜ ತಿಗರಿ, ಸಹದೇವಪ್ಪ ಡಂಬಳ, ಪ್ರೊ. ಎಂ.ಜಿ. ಗಚ್ಚಣ್ಣವರ, ಶಿಬಿರದ ನಿರ್ದೇಶಕ ಡಾ. ನಿಂಗು ಸೊಲಗಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.