ಕನ್ನಡಪ್ರಭ ವಾರ್ತೆ ಕಡೂರು
ಪೂರ್ಣಾವಧಿ ಅಧಿಕಾರ ನಡೆಸಲು ಕಾಲಾವಕಾಶ ನೀಡುವಂತೆ ರಾಜ್ಯದ ವಿವಿಧ ನಗರಸಭೆ ಮತ್ತು ಪುರಸಭೆ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರು ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು. ಕಡೂರಿನ ತಮ್ಮ ಮನೆಯಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ ಹೈಕೋರ್ಟಲ್ಲಿ ಗುರುವಾರ ನಾವು ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪು ಬರುವುದಿತ್ತು, ನ್ಯಾಯಾಧೀಶರು ಅಧಿಕಾರಿಗಳು ಮೀಸಲಾತಿ ಕಲ್ಪಿಸುವಲ್ಲಿ ವಿಳಂಬವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇದೇ 25ನೇ ತಾರೀಖಿಗೆ ಮುಂದೂಡಿದ್ದಾರೆ.ಈ ಹಿನ್ನೆಲೆಯಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ನೇತೃತ್ವದಲ್ಲಿ ನಮ್ಮ ಜಿಲ್ಲೆಯ ಕಡೂರು, ಬೀರೂರಿನ ಮೋಹನ್ ಕುಮಾರ್, ನರಸಿಂಹರಾಜಪುರದ ಜುಬೇದಾ, ಮೂಡಿಗೆರೆ ವೆಂಕಟೇಶ್, ಹೊಳಲ್ಕೆರೆಯ ವಿಜಯಸಿಂಹ, ಮೇಲು ಕೋಟೆ, ಗೌರಿಬಿದನೂರು, ಹೊಸದುರ್ಗ ಪುರಸಭಾಧ್ಯಕ್ಷರು, ಮುಳಬಾಗಿಲು, ಕೋಲಾರ, ಹಿರಿಯೂರು, ಕಲಬುರಗಿ ನಗರ ಸಭೆ, ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿ, ನರಗುಂದ ಮೊದಲಾದ ಪುರಸಭೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ "ನಮ್ಮಲ್ಲಿ ಬಹಳ ಮಂದಿ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತಿದ್ದು ನಮ್ಮ 16 ತಿಂಗಳ ಅಧಿಕಾರಾವಧಿ ಮೊಟಕುಗೊಳಿಸಲಾಗುತ್ತಿದೆ. ಇದನ್ನು ತಪ್ಪಿಸಿ ನಮಗೆ ನ್ಯಾಯ ದೊರೆಯಲು ಸಹಕರಿಸಬೇಕು ಎಂದು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಅಡ್ವೊಕೇಟ್ ಜನರಲ್ ಅವರ ಜತೆ ಈ ವಿಷಯವಾಗಿ ಖುದ್ದಾಗಿ ಮಾತನಾಡಿ ನ್ಯಾಯ ಒದಗಿಸಲು ಖಂಡಿತವಾಗಿ ಪ್ರಯತ್ನಿಸುತ್ತೇನೆ. ಜನಪ್ರತಿನಿಧಿಗಳ ಹಕ್ಕು ಮೊಟಕು ಗೊಳಿಸಲು ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿ.ಆರ್.ಮೋಹನ್ ಕುಮಾರ್, ಸೈಯದ್ ಯಾಸೀನ್, ಶಂಕರ್, ಮನು ಇದ್ದರು. 17ಕೆಕೆಡಿಯು2ಪುರಸಭೆ, ನಗರಸಭೆಗಳ ಜನಪ್ರತಿನಿಧಿಗಳು ಪೂರ್ಣಾವಧಿ ಕಾರ್ಯ ನಿರ್ವಹಿಸಲು ಸಹಕರಿಸಬೇಕು ಎಂದು ಕೋರಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಇದ್ದರು.