)
ಕಡೂರು ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳ ಕೊಡುಗೆ । ಶಾಶ್ವತ ನೀರಾವರಿ, ನಿರುದ್ಯೋಗ ನಿವಾರಣೆಗೆ ಆದ್ಯತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಡೂರಿಗೂ ದಶಕಗಳ ಕಾಲದ ಅವಿನಾಭಾವ ಸಂಬಂಧ ಇದ್ದರೂ ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಆಗಮಿಸುತ್ತಾರೆಂಬ ಅಭಿಮಾನಿಗಳ ಕನಸು ಅವರ ರಾಜೀನಾಮೆಯಿಂದ ಕಮರಿದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರೆ ಕಡೂರು ಜನತೆಗೆ ರಾಜಕೀಯಕ್ಕಿಂತ ಮಿಗಿಲಾಗಿ ಭಾವನಾತ್ಮಕ ಸಂಬಂಧ ಬೆಸೆದಿದೆ. ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಅವರನ್ನು ಕಡೂರಿಗೆ ಕರೆಸಬೇಕೆಂಬ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರ ಆಸೆ ಕೂಡ ಈಡೇರಲಿಲ್ಲ. ತಾಲೂಕಿನಲ್ಲಿ ಶಾಸಕ ಕೆ.ಎಂ.ಕೃಷ್ಮಮೂರ್ತಿ ಅವರನ್ನು ಒಳಗೊಂಡು ಅಹಿಂದ ಸಂಘಟನೆಗೆ ಈ ಭಾಗದಲ್ಲಿ ಸಿದ್ದರಾಮಯ್ಯ ಬಲ ತುಂಬಿದ್ದರು.ಕೆ.ಎಂ.ಕೃಷ್ಣಮೂರ್ತಿ ಮತ್ತು ಅವರ ಸಹೋದರ ದಿ.ಕೆ.ಎಂ.ಕೆಂಪರಾಜು ನಿಧನರಾದಾಗ ಸಿದ್ದರಾಮಯ್ಯ ಆಗಮಿಸಿ ಅಂತಿಮ ಸಂಸ್ಕಾರ ಮುಗಿಯುವ ತನಕ ಇದ್ದುದ್ದನ್ನು ಕಡೂರು ಜನತೆ ಮರೆತಿಲ್ಲ. 2023ರಲ್ಲಿ ಕೆ.ಎಸ್.ಆನಂದ್ ಅವರ ಪರ ಚುನಾವಣಾ ಪ್ರಚಾರ ಮಾಡುವ ಮೂಲಕ ಅವರ ಭರ್ಜರಿ ಗೆಲುವಿಗೆ ಸಿದ್ದರಾಮಯ್ಯ ಕಾರಣರಾಗಿದ್ದರು ಎಂಬುದು ಸುಳ್ಳಲ್ಲ.
ಇಂದು ರಾಜಕೀಯ ಹೊರತುಪಡಿಸಿ ನೋಡುವುದಾದರೆ ತಾಲೂಕಿನ ಜನರ ಜೀವನಾಡಿಯಾದ ಈ ಶಾಶ್ವತ ನೀರಾವರಿ ಯೋಜನೆಗೆ ₹455 ಕೋಟಿ ಮಂಜೂರಾತಿ ನೀಡಿ ಕಡೂರು ತಾಲೂಕಿಗೆ ನೀರಾವರಿ ಕೊಡುಗೆ ನೀಡಿದ್ದು ಸಿದ್ದರಾಮಯ್ಯನವರು.
ಸಿದ್ದರಾಮಯ್ಯ ಮತ್ತು ನನ್ನ ಸಂಭಂದ ಅತ್ಯಂತ ಆತ್ಮೀಯವಾದುದು. ಪರಿವಾರದಲ್ಲಿ ಇದ್ದಾಗಿನಿಂದಲೂ ಅವರ ಒಡನಾಟ ಮರೆಯಲಾಗದು ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು. ಅವರು ಜೆಡಿಎಸ್ ಅಧ್ಯಕ್ಷರಾಗಿದ್ದಾಗ ನಾನು ಪ್ರಧಾನ ಕಾರ್ಯದರ್ಶಿಯಾಗಿ ಪ್ರತಿನಿತ್ಯ ಅವರ ಭೇಟಿಯಾಗಿದ್ದ ಸಂದರ್ಭದಲ್ಲಿ ಅವರ ವೈಚಾರಿಕ ನಿಲುವು ಮತ್ತಷ್ಟು ಹತ್ತಿರಕ್ಕೆ ತಂದಿತು. ಕಡೂರಿನ ಶಾಸಕ ನಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನಾನು ಕ್ಷೇತ್ರಕ್ಕೆ ಕೇಳಿದ ಯಾವುದನ್ನು ಇಲ್ಲ ಎನ್ನದೆ ನೀಡಿದ್ದರು. ಕೆ.ಎಂ ಕೃಷ್ಣಮೂರ್ತಿ ನಿಧನದಿಂದ ಕಡೂರಿನಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಂಪರಾಜ್ ಪರಾಭವಗೊಂಡಾಗ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಅವರ ನೈತಿಕತೆಗೆ ಸಾಕ್ಷಿ. ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿರುವುದು ವರ್ಣ ರಂಜಿತ ಅಧ್ಯಾಯವೊಂದು ಕೊನೆಗೊಂಡಿದೆ ಎಂದು ಹೇಳಿದ್ದಾರೆ.