ಚಿಕ್ಕಬಳ್ಳಾಪುರದ ಬೇಬಿ ಇರಾನ್‌ನಲ್ಲಿ 10 ಸಾವಿರ ಜನರ ಪ್ರತಿಭಟನಾ ರ್‍ಯಾಲಿ

Published : Mar 02, 2026, 05:29 AM IST
 Chikkaballapura

ಸಾರಾಂಶ

ಅಮೆರಿಕ-ಇಸ್ರೇಲ್‌ ಜಂಟಿ ದಾಳಿಯಲ್ಲಿ ಇರಾನ್‌ ಪರಮೋಚ್ಚ ನಾಯಕ ಅಯತೋಲ್ಲ ಅಲಿ ಖಮೇನಿ ಸಾವನ್ನಪ್ಪಿರುವ ಸುದ್ದಿ ಕೇಳಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ‘ಬೇಬಿ ಇರಾನ್‌’ ಅಲೀಪುರ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆ ನಡೆಸಿ ತಮ್ಮ ಅಸಮಾಧಾನ

  ಚಿಕ್ಕಬಳ್ಳಾಪುರ :  ಅಮೆರಿಕ-ಇಸ್ರೇಲ್‌ ಜಂಟಿ ದಾಳಿಯಲ್ಲಿ ಇರಾನ್‌ ಪರಮೋಚ್ಚ ನಾಯಕ ಅಯತೋಲ್ಲ ಅಲಿ ಖಮೇನಿ ಸಾವನ್ನಪ್ಪಿರುವ ಸುದ್ದಿ ಕೇಳಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ‘ಬೇಬಿ ಇರಾನ್‌’ ಅಲೀಪುರ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಮೇನಿ ಹತ್ಯೆ ಖಂಡಿಸಿ ಇಲ್ಲಿನ ಶಿಯಾ ಮುಸ್ಲಿಮರು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಸೀದಿಯಿಂದ ಆರಂಭವಾದ ಮೆರವಣಿಗೆ ಸೈಯದ್‌ ಮುಸ್ತಫಾ ಹುಸೇನ್‌ ವೃತ್ತದವರೆಗೆ ಸಾಗಿತು. ಮೆರವಣಿಗೆಯಲ್ಲಿ ಹಾಡಿನ ಮೂಲಕ ಖಮೇನಿ ಅವರ ಸಾಧನೆಯನ್ನು ಸ್ಮರಿಸಲಾಯಿತು. ಬಳಿಕ, ಗ್ರಾಮದ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅತ್ತರು. ಅವರ ಸ್ಮರಣಾರ್ಥ ಗ್ರಾಮದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಜೊತೆಗೆ, 3 ದಿನಗಳ ಕಾಲ ʻಬ್ಲಾಕ್ ಡೇʼ (ಕರಾಳ ದಿನ) ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಗ್ರಾಮದ ಪ್ರತಿಮನೆಯ ಮೇಲೂ ಕಪ್ಪು ಬಾವುಟ ಹಾರಿಸಿ ಶೋಕಾಚರಣೆ ನಡೆಸಲಾಗುತ್ತಿದೆ.

ಅಲೀಪುರಕ್ಕೆ ಖಮೇನಿಯದು ಭಾವನಾತ್ಮಕ ನಂಟು:

‘ಬೇಬಿ ಆಫ್‌ ಇರಾನ್’ ಅಂತಲೇ ಕರೆಸಿಕೊಳ್ಳುವ ಅಲೀಪುರ ಗ್ರಾಮ, ಖಮೇನಿಯೊಂದಿಗೆ 1986ರಿಂದಲೂ ಆಳವಾದ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ನಂಟನ್ನು ಹೊಂದಿದೆ. ಈ ಹಿಂದೆ ‘ಬೆಳ್ಳಿಕುಂಟೆ’ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮ, ಬಿಜಾಪುರದ ಆದಿಲ್‌ಶಾಹಿಗಳ ಕಾಲದಲ್ಲಿ ವಲಸೆ ಬಂದವರಿಂದ ‘ಅಲೀಪುರ’ವಾಗಿ ರೂಪಾಂತರಗೊಂಡಿತು.

ಅಯತೋಲ್ಲಾ ಇಮಾಮ್ ಖಮೇನಿ ಅವರ ಹೆಸರಿನಲ್ಲಿ ಗ್ರಾಮದಲ್ಲಿ ಆಸ್ಪತ್ರೆ

ಖಮೇನಿ ಅವರ ಗುರು ಅಯತೋಲ್ಲಾ ಇಮಾಮ್ ಖಮೇನಿ ಅವರ ಹೆಸರಿನಲ್ಲಿ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, 1986ರಲ್ಲಿ ಈ ಆಸ್ಪತ್ರೆಯ ಶಂಕುಸ್ಥಾಪನೆಗೆ ಅಯತೋಲ್ಲ ಅಲಿ ಖಮೇನಿ ಆಗಮಿಸಿದ್ದರು. 1991ರ ಜನವರಿ 27ರಂದು ಮತ್ತೊಮ್ಮೆ ಆಗಮಿಸಿ, ಆಸ್ಪತ್ರೆ ಉದ್ಘಾಟಿಸಿದ್ದರು. ಆಗ ಗ್ರಾಮದಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

ಅಲೀಪುರದ ಕೆಲವರು ಧಾರ್ಮಿಕ ಶಿಕ್ಷಣ ಪಡೆಯುವ ಸಲುವಾಗಿ ಇರಾನ್ ನಲ್ಲಿ ನೆಲೆಸಿದ್ದಾರೆ. ಈ ಗ್ರಾಮದ ಪ್ರತಿಯೊಬ್ಬರಿಗೂ ಇರಾನ್ ಜೊತೆ ವ್ಯಾಪಾರ ಹಾಗೂ ಶಿಕ್ಷಣದ ಗಾಢ ಸಂಬಂಧವಿದೆ. ಈ ಗ್ರಾಮದ 150ಕ್ಕೂ ಹೆಚ್ಚು ಮಂದಿ ಇರಾನ್ ನಲ್ಲಿ ನೆಲೆಸಿದ್ದಾರೆ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರೇ ಹೆಚ್ಚಿದ್ದಾರೆ. ಇಲ್ಲಿನ ಜನರು ಅಯತೋಲ್ಲಾ ಖಮೇನಿಯವರ ಧಾರ್ಮಿಕ ಆದೇಶಗಳನ್ನು ಪಾಲಿಸುತ್ತಿದ್ದು, ಇಲ್ಲಿನವರಿಗೆ ಖಮೇನಿ ಧರ್ಮಗುರುವಾಗಿದ್ದಾರೆ. ಖಮೇನಿ ತತ್ವ ಪಾಲಿಸುವ ದೊಡ್ಡ ಬಳಗವೇ ಇಲ್ಲಿದೆ. 

PREV
Get the latest news, reports and updates from Chikkaballapur district (ಚಿಕ್ಕಬಳ್ಳಾಪುರ ಸುದ್ದಿ) — politics, local developments, water supply, infrastructure, social issues and more on Kannada prabha News.
Read more Articles on

Recommended Stories

ಖಮೇನಿ ಹತ್ಯೆ ಖಂಡಿಸಿ ಪೊತೇನಹಳ್ಳಿ ಗ್ರಾಮದಲ್ಲಿ 3 ದಿನಗಳ ಶೋಕಾಚರಣೆ
ಜಿ ರಾಮ್‌ ಜಿ ರದ್ಧತಿವರೆಗೂ ಹೋರಾಟ ನಿಲ್ಲಲ್ಲ : ಸಿದ್ದರಾಮಯ್ಯ