ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಆರೋಪ ಎದುರಿಸುತ್ತಿದ್ದ ಚಿಕ್ಕಬಳ್ಳಾಪುರ ನಗರಸಭೆಯ 6 ಜನ ಕಾಂಗ್ರೆಸ್ ಚುನಾಯಿತ ಸದಸ್ಯರು ಮತ್ತು ಗೌರಿಬಿದನೂರಿನ ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿ ಶುಕ್ರವಾರ ಸಂಜೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.
ಚಿಕ್ಕಬಳ್ಳಾಪುರ : ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಆರೋಪ ಎದುರಿಸುತ್ತಿದ್ದ ಚಿಕ್ಕಬಳ್ಳಾಪುರ ನಗರಸಭೆಯ 6 ಜನ ಕಾಂಗ್ರೆಸ್ ಚುನಾಯಿತ ಸದಸ್ಯರು ಮತ್ತು ಗೌರಿಬಿದನೂರಿನ ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿ ಶುಕ್ರವಾರ ಸಂಜೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.
ಅನರ್ಹಗೊಂಡ ಸದಸ್ಯರು
ಚಿಕ್ಕಬಳ್ಳಾಪುರ ನಗರ ಸಭೆಯ 13 ನೇ ವಾರ್ಡ್ ನ ನಿರ್ಮಲ ಪ್ರಭು, 2ನೇ ವಾರ್ಡ್ ನ ರತ್ನಮ್ಮ, 7 ನೇ ವಾರ್ಡ್ ಸತೀಶ್, 22 ನೇ ವಾರ್ಡ್ನ ಸ್ವಾತಿ, 27 ನೇ ವಾರ್ಡ್ನ ನೇತ್ರಾವತಿ, 24 ನೇ ವಾರ್ಡ್ ನ ಅಂಬಿಕಾ ಹಾಗೂ ಗೌರಿಬಿದನೂರು ನಗರಸಭೆಯ 22 ನೇ ವಾರ್ಡ್ ನ ಗಿರೀಶ್, 8 ನೇ ವಾರ್ಡ್ ನ ಮಂಜುಳಾ ಅನರ್ಹಗೊಂಡ ಸದಸ್ಯರಾಗಿದ್ದಾರೆ.
ಘಟನೆ ಹಿನ್ನೆಲೆ:
ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೇಸ್ ಪಕ್ಷದ ವಿಫ್ ಉಲ್ಲಂಗಿಸಿ ಇವರು ಅಡ್ಡಮತದಾನ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಎಲ್ಲ ಕಾಂಗ್ರೆಸ್ ಸದಸ್ಯರಿಗೆ ಪಕ್ಷದ ವಿಪ್ ಜಾರಿಗೊಳಿಸಿದ್ದರು. ಆದರೂ ಅಡ್ಡಮತದಾನ ಮಾಡಿದ ಚಿಕ್ಕಬಳ್ಳಾಪುರದ 6 ಜನ ಕಾಂಗ್ರೆಸ್ ಸದಸ್ಯರು ಮತ್ತು ಗೌರಿಬಿದನೂರಿನ ಇಬ್ಬರು ಸದಸ್ಯರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತು 15 ನೇ ವಾರ್ಡ್ ನ ಸದಸ್ಯ ಟಿ.ಜಿ.ಅಂಬರೀಶ್ ಕಳೆದ ಡಿಸೆಂಬರ್ 18 ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಸುಧೀರ್ಘ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಇಂದು 8 ಜನ ಸದಸ್ಯರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಆಡಳಿತ ಪಕ್ಷ ಬಿಜೆಪಿಗೆ ಸಂಕಷ್ಟ ನಗರಸಭೆ ಸದಸ್ಯರ ಅನರ್ಹದ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಬಿಸಿ ಬಿಸಿ ರಾಜಕೀಯ ಚರ್ಚೆ ಆರಂಭವಾಗಿದ್ದು, ಬಿಜೆಪಿಯಿಂದ ಆಯ್ಕೆಗೊಂಡಿದ್ದ ನಗರಸಭೆಯ ಅಧ್ಯಕ್ಷ ಎ.ಗಜೇಂದ್ರ ಮತ್ತು ಉಪಾಧ್ಯಕ್ಷ ಜೆ.ನಾಗರಾಜ್ಗೆ ಅಧಿಕಾರ ಹೋಗುವ ಸಂಭವವೇ ಹೆಚ್ಚಾಗಿದೆ. ಅನರ್ಹ ಗೊಂಡ ಸದಸ್ಯರೇನಾದರೂ ಮತ್ತೆ ಕೋರ್ಟ್ ಮೊರೆ ಹೋಗಿ ತಮ್ಮ ಅನರ್ಹತೆಗೆ ತಡೆ ಏನಾದರೂ ತಂದಲ್ಲಿ ಅಧ್ಯಕ್ಷ ,ಉಪಾಧ್ಯಕ್ಷರ ಅಧಿಕಾರಕ್ಕೆ ಚ್ಯುತಿಯಿಲ್ಲದೇ ಇನ್ನು ಉಳಿದಿರುವ ಎಂಟು ತಿಂಗಳ ಅವಧಿ ಅಧಿಕಾರ ನಡೆಸಬಹುದಾಗಿದೆ.
ಬಹುಮತವಿದ್ದರೂ ಕೈಗೆ ತಪ್ಪಿದ ಅಧಿಕಾರ
ಕಳೆದ ಸೆಪ್ಟಂಬರ್ 25 ರಂದು ನಡೆದ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಬಿಜೆಪಿಯ 9 ಸದಸ್ಯರು, ಕಾಂಗ್ರೆಸ್ನ 6 ಮಂದಿ, 3 ಜನ ಪಕ್ಷೇತರರು ಹಾಗೂ ಸಂಸದರ ಮತ ಸೇರಿ ಬಿಜೆಪಿಗೆ ಒಟ್ಟು 19 ಜನರ ಸಂಖ್ಯಾಬಲದಿಂದ ಬಿಜೆಪಿ ಮೇಲುಗೈ ಸಾಧಿಸಿತ್ತು. ಕಾಂಗ್ರೇಸ್ ನಿಂದ 16 ಸದಸ್ಯರು ಗೆದ್ದಿದ್ದರೂ ಆರು ಜನ ಬಿಜೆಪಿ ಪಾಳಯಕ್ಕೆ ಹೋಗಿದ್ದರಿಂದ, ಚುನಾವಣೆಯಲ್ಲಿ ಕಾಂಗ್ರೆಸ್ನ 10 ಜನ ಸದಸ್ಯರು, ಜೆಡಿಎಸ್ನ ಇಬ್ಬರು ಸದಸ್ಯರು, ಒಬ್ಬ ಪಕ್ಷೇತರ ಸದಸ್ಯ, ಇಬ್ಬರು ಎಂಎಲ್ಸಿಗಳು ಮತ್ತು ಶಾಸಕರ ಮತ ಸೇರಿ ಒಟ್ಟು 16 ಜನರ ಸಂಖ್ಯಾಬಲವಿತ್ತು. ಹೀಗಾಗಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿದಿತ್ತು.