ಚಿಕ್ಕಮಗಳೂರು: ಬಲ್ಲಾಳರಾಯನ ದುರ್ಗದಲ್ಲಿ ಕಾಡಿನ ನಡುವೆ ಓದು

KannadaprabhaNewsNetwork |  
Published : Jan 29, 2024, 01:34 AM IST
ಬಲ್ಲಾಳರಾಯನ ದುರ್ಗದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕಾಡಿನಲ್ಲಿ ಓದು ನಡಿಗೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಬಲ್ಲಾಳರಾಯನ ದುರ್ಗದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕಾಡಿನಲ್ಲಿ ಓದು ನಡಿಗೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೊಟ್ಟಿಗೆಹಾರ

ಸದಾ ಪ್ರವಾಸಿಗರಿಂದ ಗಿಜಿಗುಡುವ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಶನಿವಾರ ಪರಿಸರ ಸಂರಕ್ಷಣೆ ಕುರಿತ ತೇಜಸ್ವಿ ಅವರ ಕೃತಿಗಳ ಓದಿನ ಸದ್ದು ಎಲ್ಲೆಡೆ ಮನೆ ಮಾಡಿತ್ತು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಆಯೋಜಿಸಿದ್ದ ಕಾಡಿನಲ್ಲಿ ಓದು ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಚಾರಣಿಗರು ಸುತ್ತ ಕಣ್ಣು ಹಾಯಿಸಿದಷ್ಟು ದೂರವೂ ಹಬ್ಬಿರುವ ಹಸಿರು ಅರಣ್ಯದ ನಡುವೆ ಒಂದೆಡೆ ಸೇರಿ ತೇಜಸ್ವಿ ಕೃತಿಗಳ ಕೆಲ ಸಾಲುಗಳನ್ನು ಓದಿದರು.

ಕೀಟ ತಜ್ಞರಾದ ಮೂಡಿಗೆರೆ ಅವಿನಾಶ್ ಮಾತನಾಡಿ, ಪರಿಸರದ ಬಗ್ಗೆ ಬೆರಗು ಮತ್ತು ಪರಿಸರದ ಉಳಿವಿನ ಮಹತ್ವವನ್ನು ತೇಜಸ್ವಿ ಅವರು ತಮ್ಮ ಬಹುತೇಕ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ತೇಜಸ್ವಿ ಕೃತಿಗಳಿಂದಾಗಿ ಹೊಸದೊಂದು ಓದುಗ ವರ್ಗ ಸೃಷ್ಠಿಯಾಗಿ ಓದಿನ ರುಚಿ ಎಲ್ಲರಲ್ಲೂ ಮೂಡುತ್ತಿದೆ. ಪರಿಸರ, ಜೀವಸಂಕುಲ, ಬಾಹ್ಯಾಕಾಶ, ಮುಂತಾದ ವಿಷಯಗಳ ಬಗ್ಗೆ ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದರು.

ಮಂಡ್ಯದ ಅಂಶು ಅವರು ಪರಿಸರದ ಕಥೆ, ಚಿಕ್ಕಮಗಳೂರಿನ ಕಾರ್ತಿಕ್ ಹುಲಿಯೂರಿನ ಸರಹದ್ದು, ದೀಪಗೌಡ ಅವರು ಪಾಕಕ್ರಾಂತಿ, ತುಮಕೂರಿನ ಪಲ್ಲವಿ ರಂಗನಾಥ್ ಮಾಯಾಲೋಕ, ಚಿತ್ರದುರ್ಗದ ದಿನೇಶ್ ಅವರು ಮಿಸ್ಸಿಂಗ್ ಲಿಂಕ್, ಬೆಂಗಳೂರಿನ ಪ್ರೇಮ ಅವರು ಹೆಜ್ಜೆ ಮೂಡದ ಹಾದಿ, ಬೆಂಗಳೂರಿನ ಸುನಿತಾ ಮತ್ತು ವಿನೋದ್ ಅವರು ವಿಸ್ಮಯ ವಿಶ್ವ, ಶಿರಾದ ಶ್ರೀನಾಥ್ ಅವರು ಪಾಕಕ್ರಾಂತಿ, ಮೂಡಿಗೆರೆ ಅವಿನಾಶ್ ಅವರು ಪಾಕಕ್ರಾಂತಿ, ನಂದೀಶ್ ಬಂಕೇನಹಳ್ಳಿ ಅವರು ಕರ್ವಾಲೊ ಕೃತಿ ಓದಿದರು. ಚಿಕ್ಕಮಗಳೂರಿನ ಸತ್ಯನಾರಾಯಣ, ಓಂಕಾರಪ್ಪ, ಹಾಸನದ ಬಾಲು ತೇಜಸ್ವಿ ಅವರ ಬದುಕು ಬರಹದ ಕುರಿತು ಚರ್ಚೆ ನಡೆಸಿದರು.

ಪರಿಸರದ ಸಂರಕ್ಷಣೆ, ತೇಜಸ್ವಿ ಅವರ ಬದುಕು, ಬರಹಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಕಾಡಿನಲ್ಲಿ ಓದು ಕಾರ್ಯಕ್ರಮಕ್ಕೂ ಮುನ್ನ ರಾಣಿಝರಿಯಿಂದ ಬಲ್ಲಾಳರಾಯನ ದುರ್ಗಕ್ಕೆ ಚಾರಣ ನಡೆಸಲಾಯಿತು. ಕೀಟತಜ್ಞರಾದ ಅವಿನಾಶ್ ಅವರು ಕೀಟಗಳ ಬಗ್ಗೆ ಮಾಹಿತಿ ನೀಡಿದರು. ಪ್ಲಾಸ್ಟಿಕ್ ಎಲ್ಲಿಯೂ ಬಳಕೆ ಮಾಡದೇ ಪ್ಲಾಸ್ಟಿಕ್‌ ಮುಕ್ತ ಚಾರಣ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಕೀಟ ತಜ್ಞರಾದ ಅವಿನಾಶ್, ತೇಜಸ್ವಿ ಅವರ ಒಡನಾಡಿ ಹಾಗೂ ಕಲಾವಿದರಾದ ಬಾಪು ದಿನೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಭಿಲಾಷ್, ಚಂದನ್, ಭವಿತ್ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ 40ಕ್ಕೂ ಹೆಚ್ಚು ಚಾರಣಿಗರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ