ಹಾಡಿಗಳಲ್ಲಿ ಫಲಾನುಭವಿಗಳಿಗೆ ಸವಲತ್ತು ಹಸ್ತಾಂತರ

KannadaprabhaNewsNetwork |  
Published : Jul 01, 2025, 12:47 AM IST
56 | Kannada Prabha

ಸಾರಾಂಶ

ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಮತ್ತು ಬಯಲು ಮಲವಿಸರ್ಜನೆಯನ್ನು ಕೊನೆಗೊಳಿಸುವ ಉದ್ದೇಶ

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆತಾಲೂಕಿನ ಚಿಕ್ಕೆರೆಯೂರು ಗ್ರಾಪಂ ವ್ಯಾಪ್ತಿಯ ಚಾಮೇನಹಳ್ಳಿ ಹುಂಡಿ ಬಿ ಹಾಡಿ ಹಾಗೂ ಇತರ ಹಾಡಿಗಳಲ್ಲಿ ಕರ್ಮೋದಯ ಸಂಸ್ಥೆಯಿಂದ ಹೋಪ್ ಸೊಸೈಟಿ, ದಿ ಗುಡ್ ಕ್ವೇಸ್ಟ್ ಫೌಂಡೇಷನ್ ಹಾಗೂ ನಿಸರ್ಗ ಫೌಂಡೇಷನ್ ಸಂಸ್ಥೆಯವರ ಸಹಕಾರದೊಂದಿಗೆ ರು. 18 ಲಕ್ಷದ ವೆಚ್ಚದಲ್ಲಿ 30 ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.ಮುಖ್ಯಅತಿಥಿಯಾಗಿ ಕರ್ಮೋದಯ ಸಂಸ್ಥೆಯ ಅಧ್ಯಕ್ಷ ಶ್ರೀರೇಶ್ ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಯಲು ಮಲವಿಸರ್ಜನೆ ಸಮಯದಲ್ಲಿ ಹುಲಿ ದಾಳಿ ಮತ್ತು ಸುರಕ್ಷಿತ ನೈರ್ಮಲ್ಯಕ್ಕಾಗಿ ಸ್ಥಳೀಯರು ನಡೆಸಿದ ಶಾಂತಿಯುತ ಪ್ರತಿಭಟನೆಯ ಡೆಕ್ಕಾನ್ ಹೆರಾಲ್ಡ್‌ ನ ವರದಿಯ ಅನ್ವಯ ಕರ್ಮೋದಯ ಸಂಸ್ಥೆಯು ಅರಣ್ಯ ಪ್ರದೇಶಗಳಲ್ಲಿ ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಮತ್ತು ಬಯಲು ಮಲವಿಸರ್ಜನೆಯನ್ನು ಕೊನೆಗೊಳಿಸುವ ಉದ್ದೇಶದೊಂದಿಗೆ ಈ ಕಾರ್ಯವನ್ನು ಮಾಡುತ್ತ ಬಂದಿದೆ.ಈ ಯೋಜನೆಗೆ ಆಗಸ್ಟ್ 2023ರಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಶಂಕು ಸ್ಥಾಪನೆ ನೆರವೇರಿಸಿದ್ದು, 100 ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಇಂದು ಎರಡನೇ ಹಂತದಲ್ಲಿ ಚಾಮೇನಹಳ್ಳಿ ಹುಂಡಿ ಬಿ ಹಾಗೂ ಅರಳಿಕಟ್ಟೆ ಹಾಡಿಗಳಲ್ಲಿ 15 ಹಾಗೂ ಇತರ ಹಾಡಿಗಳಲ್ಲಿ 15 ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುತ್ತಿದ್ದೇವೆ. ಇದರಿಂದ ಜನರು ಹುಲಿ ಹಾಗೂ ವನ್ಯಜೀವಿಗಳ ಭಯದಿಂದ ದೂರವಾಗಿ, ಹಾಡಿಯ ಜನರು ಬಯಲು ಶೌಚಾಲಯವನ್ನು ತ್ಯಜಿಸಿ ಶೌಚಾಲಯಗಳನ್ನೆ ಬಳಸಬೇಕೆಂದು ಕರೆ ನೀಡಿದರು.ಫಲಾನುಭವಿಯಾದ ರಮೇಶ್‌ ಮಾತನಾಡಿ, ನಮ್ಮ ಹಾಡಿಯ ಜನರು ಶೌಚಾಲಯಗಳು ಇಲ್ಲದೇ ಬಯಲು ಶೌಚಾಲಯದಿಂದ ತುಂಬಾ ತೊಂದರೆ ಪಡುತ್ತಿದ್ದರು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಶೌಚಾಲಯ ನಿರ್ಮಾಣದಿಂದ ತುಂಬಾ ಉಪಯೋಗವಾಗಲಿದ್ದು, ಇದನ್ನು ನಾವು ಉತ್ತಮವಾಗಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿ ಕರ್ಮೋದಯ ಸಂಸ್ಥೆಯವರ ಈ ಕಾರ್ಯ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು.ಹೋಪ್ ಸೊಸೈಟಿಯ ಪಾದ್ರಿ ಜಾರ್ಜ್ ಕಣ್ಣಂತಾನಂ, ದಿ ಗುಡ್ ಕ್ವೇಸ್ಟ್ ಫೌಂಡೇಷನ ವಿನೋದ್‌ಕುಮಾರ್, ಸಂತೋಷ್‌ಕುಮಾರ್, ನಿಸರ್ಗ ಫೌಂಡೇಷನ್ ಸಂಸ್ಥೆಯ ಕಾರ್ಯಕರ್ತರಾದ ಚಿಕ್ಕತಿಮ್ಮನಾಯ್ಕ, ಹಾಡಿಯ ಯಜಮಾನರಾದ ಸೋಮ, ಕೆಂಚ, ಅರಣ್ಯಹಕ್ಕು ಸಮಿತಿಯ ಅಧ್ಯಕ್ಷ ರಮೇಶ್, ಶಿವಣ್ಣ, ಮುಖಂಡರಾದ ಮಣಿ, ಬಸಪ್ಪ ಹಾಗೂ 120ಕ್ಕಿಂತ ಹೆಚ್ಚು ಆದಿವಾಸಿ ಜನರು ಮತ್ತು ಮಕ್ಕಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ