ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮನೆಗಳಲ್ಲಿ ಯಕ್ಷಗಾನ ತಾಳ, ಮದ್ದಲೆಗಳ ನಾದ, ಕಾಲ್ಗೆಜ್ಜೆಗಳ ಝೇಂಕಾರ ಅನುರಣಿಸಿದರೆ ಮನೆಯಲ್ಲಿ ದುಷ್ಟ ಶಕ್ತಿ, ಸಕಲ ದೋಷಗಳು ನಿವಾರಣೆಯಾಗಿ ಸುಖ, ಶಾಂತಿ, ನೆಮ್ಮದಿ ನೆಲೆಸಿ ಇಷ್ಟಾರ್ಥ ಸಿದ್ಧಿಯಾಗುವುದೆಂಬ ಪ್ರತೀತಿಯಿದೆ. ಪೊದುಂಬಿಲ ಯಕ್ಷಗಾನ ಚಿಕ್ಕಮೇಳದಲ್ಲಿ ಭಾಗವತರಾಗಿ ಶಿವಪ್ರಸಾದ್ ಇಚ್ಲಂಪಾಡಿ, ಚೆಂಡೆಯಲ್ಲಿ ಹರಿಪ್ರಸಾದ್ ಇಚ್ಲಂಪಾಡಿ, ಮದ್ದಲೆಯಲ್ಲಿ ಲಕ್ಷ್ಮಣ ತಲಕಳ, ಪುರುಷ ಪಾತ್ರದಲ್ಲಿ ಸುರೇಶ ಕನ್ಯಾನ, ಸ್ತ್ರೀ ಪಾತ್ರದಲ್ಲಿ ಪ್ರಭಾಕರ ತೆಂಕಕಾರಂದೂರು, ಪರಿಚಾರಕರಾಗಿ ಉಮೇಶ ಮುಡಿಪು, ವ್ಯವಸ್ಥಾಪಕರಾಗಿ ಪಿ.ಜೆ.ಪ್ರಸಾದ್ ಧರ್ಮಸ್ಥಳ ಹಾಗೂ ಜೀಪ್ ಚಾಲಕರಾಗಿ ಶೀನಪ್ಪ ಗೌಡ ಅವರನ್ನೊಳಗೊಂಡ 8 ಜನರ ತಂಡ ಚಿಕ್ಕಮೇಳದ ಮಳೆಗಾಲದ ತಿರುಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ. 4-5 ತಿಂಗಳು ಗ್ರಾಮದ ಮನೆ ಮನೆಗಳಲ್ಲಿ ಕಿರು ಪೌರಾಣಿಕ ಪ್ರಸಂಗವನ್ನು ಅತ್ಯಂತ ಶ್ರದ್ಧೆಯಿಂದ ಅಭಿನಯಿಸಿ, ಮನೆಯವರು ಪ್ರೀತಿಯಿಂದ ನೀಡಿದ ಸಂಭಾವನೆಯನ್ನು ಸ್ವೀಕರಿಸಿ, ಕಾಣಿಕೆಯನ್ನು ದೇವರಿಗೆ ಅರ್ಪಿಸುವ ಮೂಲಕ ಕಲಾ ವ್ಯವಸಾಯದಲ್ಲಿ ನಿರತರಾಗಿದ್ದಾರೆ.