ಬಳ್ಳಾರಿ: ನಗರದ ವಿವಿಧ ರಸ್ತೆಗಳು, ಅಂಗಡಿ- ಮುಂಗಟ್ಟುಗಳ ಮೇಲೆ ಸೋಮವಾರ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ಜಂಟಿಯಾಗಿ ಆಕಸ್ಮಿಕ ದಾಳಿ ನಡೆಸಿ ಐದು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಬಳ್ಳಾರಿ ನಗರದ ಪ್ರಮುಖ ವಲಯಗಳಾದ ಸಂಗಮ್ ಸರ್ಕಲ್, ರಾಧಿಕಾ ಟಾಕೀಸ್ ರಸ್ತೆ, ವಡ್ಡರ ಬಂಡೆ ಏರಿಯಾ, ಕಣೇಕಲ್ ಬಸ್ ನಿಲ್ದಾಣ ಹಾಗೂ ಆಂದ್ರಾಳ್ ಭಾಗಗಳಲ್ಲಿರುವ ಪಂಚರ್ ಶಾಪ್, ಟಿಂಕರಿಂಗ್ ಶಾಪ್, ಗ್ಯಾರೇಜ್, ವುಡ್ ವರ್ಕ್ಸ್ ಮತ್ತು ಮೆಕ್ಯಾನಿಕ್ ಶಾಪ್ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿತು.
ತಾಲೂಕು ಮಟ್ಟದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಅಡಿಯಲ್ಲಿ ನೇಮಕವಾಗಿರುವ ನಿರೀಕ್ಷಕರ ಟಾಸ್ಕ್ ಫೋರ್ಸ್ ಸಮಿತಿಯ ನೇತೃತ್ವದಲ್ಲಿ ಈ ಕ್ರಮ ಜರುಗಿಸಲಾಗಿದೆ.ದಾಳಿ ವೇಳೆ ಕೆಲಸದಲ್ಲಿ ತೊಡಗಿದ್ದ ಐವರು ಮಕ್ಕಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಮಕ್ಕಳ ವಯಸ್ಸಿನ ಅಧಿಕೃತ ದಾಖಲಾತಿಗಳನ್ನು ಪರಿಶೀಲಿಸಿದ ನಂತರ, ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕರ ವಿರುದ್ಧ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಅಂಗಡಿ ಮತ್ತು ಉದ್ದಿಮೆಗಳ ಮಾಲೀಕರಿಗೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಎಚ್ಚರಿಕೆ ನೀಡಿ, ಜಾಗೃತಿ ಪೋಸ್ಟರ್ಗಳನ್ನು ಹಂಚಲಾಯಿತು.