ಮಕ್ಕಳಿಗೆ ಶಿಕ್ಷಣಕ್ಕಾಗಿ ಪ್ರೇರಣಾದಾಯಕ ಬೆಂಬಲ ಅಗತ್ಯ

KannadaprabhaNewsNetwork |  
Published : Jul 27, 2025, 12:01 AM IST
ಹಾನಗಲ್ಲ ತಾಲೂಕಿನ ಬೈಚವಳ್ಳಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜಶೇಖರ ಕಟ್ಟೇಗೌಡರ ಮಾತನಾಡಿದರು. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸಿದರೆ ಈ ದೇಶದ ಶಕ್ತಿಯಾಗಬಲ್ಲರು

ಹಾನಗಲ್ಲ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣಕ್ಕಾಗಿ ಪ್ರೇರಣಾದಾಯಕವಾಗಿ ಬೆಂಬಲಿಸುವ ಅಗತ್ಯವಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕಟ್ಟೇಗೌಡರ ತಿಳಿಸಿದರು.

ಶನಿವಾರ ಹಾನಗಲ್ಲ ತಾಲೂಕಿನ ಬೈಚವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸಿದರೆ ಈ ದೇಶದ ಶಕ್ತಿಯಾಗಬಲ್ಲರು. ಪ್ರತಿಭಾವಂತ ಮಕ್ಕಳಿಗೆ ಶಿಕ್ಷಕರು ಪಾಲಕರು ಸಂಘ ಸಂಸ್ಥೆಗಳು ಕಾಲಕಾಲಕ್ಕೆ ಅಗತ್ಯಗಳನ್ನು ಪೂರೈಸಿದರೆ ಈ ಮಕ್ಕಳು ದೇಶದ ಸಂಪತ್ತಾಗಬಲ್ಲರು. ಆ ನೆಲೆಯಲ್ಲಿ ನಾವೆಲ್ಲ ಸಕಾರಾತ್ಮಕವಾಗಿ ಆಲೋಚಿಸಬೇಕಾಗಿದೆ.

ನಮ್ಮ ಹೃದಯವಂತ ಟೀಮನಿಂದ ಹಾನಗಲ್ಲ ತಾಲೂಕಿನ ೩೦ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ೩೦ವಿದ್ಯಾರ್ಥಿಗಳಿಗೆ ತಲಾ ೧೦ ಸಾವಿರ ಪ್ರೋತ್ಸಾಹ ಧನ ಹಾಗೂ ಶೈಕ್ಷಣಿಕ ಸಲಕರಣೆ ನೀಡುತ್ತಿದ್ದೇವೆ. ಕಳೆದ ಮೂರು ವರ್ಷದಿಂದ ಹಾನಗಲ್ಲ ತಾಲೂಕಿನಲ್ಲಿ ಈ ರೀತಿಯ ಪ್ರೋತ್ಸಾಹಧನ ಮಕ್ಕಳಿಗೆ ನೀಡುತ್ತಿರುವುದು ನನಗೆ ತೃಪ್ತಿ ನೀಡಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ವಸಂತ ಕಡತಿ, ಶಾಲಾ ದಿನಗಳನ್ನು ಅಧ್ಯಯನಕ್ಕಾಗಿ ಸಾರ್ಥಕಪಡಿಸಿಕೊಂಡರೆ ಯಶಸ್ವಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಮಕ್ಕಳು ಆತ್ಮವಿಶ್ವಾಸದಿಂದ ಅಧ್ಯಯನಶೀಲರಾಗಬೇಕು. ಆದರ್ಶ ಕನಸು ಕಟ್ಟಿಕೊಳ್ಳಬೇಕು. ಸಮಾಜ ಗೌರವಿಸುವಂತಹ ನಡುವಳಿಕೆ ನಮ್ಮದಾಗಿರಬೇಕು. ಸಮಯ ಸಾಯಿಸಬೇಡಿ. ನಮ್ಮದು ದಿನದಿಂದ ದಿನಕ್ಕೆ ಒಳ್ಳೆಯದಕ್ಕಾಗಿ ಪರಿವರ್ತನೆಯ ಮನಸ್ಸು ಇಟ್ಟುಕೊಳ್ಳೋಣ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕ್ರಣ್ಣ ತಾವರಗೇರಿ, ವಿದ್ಯಾರ್ಥಿಗಳು ಉತ್ತಮ ಗುರಿಯೊಂದಿಗೆ ಅಧ್ಯಯನಶೀಲರಾಗಬೇಕು. ಸಂಘ ಸಂಸ್ಥೆಗಳು ಪ್ರತಿಭಾವಂತರನ್ನು ಗೌರವಿಸುವ ಹಲವು ಸಂದರ್ಭಗಳಿವೆ. ನಮ್ಮ ಪ್ರತಿಭೆ ಪ್ರಜ್ವಲಗೊಳಿಸಿಕೊಳ್ಳುವ ಮೂಲಕ ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿ ನಮ್ಮ ಉತ್ತಮ ಬದುಕನ್ನು ನಮ್ಮದಾಗಿಸಿಕೊಳ್ಳೋಣ ಎಂದರು.

ಶಂಕರಗೌಡ ಪಾಟೀಲ, ಲಕ್ಷ್ಮಣ ಬಾಳಂಬೀಡ, ಸುನೀಲ ಗೌಂಡಿ, ಭಾಸ್ಕರ ಹುಲ್ಮನಿ, ಅಜ್ಜನಗೌಡ ಕಲ್ಲನಗೌಡ್ರ, ಶಶಿ ಕೋಟಿ, ಸೋಮಣ್ಣ ಕೋಡದ, ತಿಮ್ಮಣ್ಣ ಅಲಿಲವಾಡ, ಸಿದ್ದನಗೌಡ ಪಾಟೀಲ, ಶ್ರೀಕಾಂತ ಅರಳೇಶ್ವರ, ರಮೇಶ ಮುದ್ದಕ್ಕನವರ, ಮುಖ್ಯೋಪಾಧ್ಯಾಯಿನಿ ಹೇಮಾ ಗುನಗಾ, ಶಿಕ್ಷಕರಾದ ಮಹೇಶ ನಾಯ್ಕ, ಸಂತೋಷ ಹುಚ್ಚಣ್ಣನವರ, ಈ ಲಕ್ಷ್ಮಣಪ್ಪ, ಸಿ.ಕೆ. ನಿವೇದಿತಾ, ಮಣಿಕೇಶ್ವರಿ ಮಂಡಿ, ಶಂಕ್ರಮ್ಮ ಬಾಳಂಬೀಡ, ವೀರಭದ್ರಯ್ಯ ಹಿರೇಮಠ, ರುದ್ರಪ್ಪ ರಾಮಾಪೂರ, ಕೌಶಿಕ ಭಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''